ADVERTISEMENT

ಕೃಷಿ ಶಿಕ್ಷಣ ಜೀವನಕ್ಕೆ ಆಸರೆ: ಮುರುಘಾ ಶ್ರೀ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 5:35 IST
Last Updated 28 ಸೆಪ್ಟೆಂಬರ್ 2025, 5:35 IST
ವಿದ್ಯಾರ್ಥಿ ಸಂಘ ಉದ್ಘಾಟನೆ ಕಾರ್ಯಕ್ರಮವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು
ವಿದ್ಯಾರ್ಥಿ ಸಂಘ ಉದ್ಘಾಟನೆ ಕಾರ್ಯಕ್ರಮವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು   

ರಿಪ್ಪನ್‌ಪೇಟೆ: ‘ವಿದ್ಯಾರ್ಥಿಗಳಲ್ಲಿ ಕೃಷಿಯ ಬಗ್ಗೆ ಕೀಳರಿಮೆ ಬೇಡ. ಭಾರತ ಈ ಹಿಂದೆ ಅಮೆರಿಕದಿಂದ ಗೋಧಿ ಆಮದು ಮಾಡಿಕೊಂಡು ಶಾಲಾ ವಿದ್ಯಾರ್ಥಿಗಳಿಗೆ ಗೋಧಿ ಉಪ್ಪಿಟ್ಟು ನೀಡುವ ಮೂಲಕ ಹಸಿವು ಇಂಗಿಸುತ್ತಿತ್ತು. ನಂತರ ಕೃಷಿಗೆ ಹೆಚ್ಚು ಒತ್ತು ನೀಡುವ ಮೂಲಕ ಆಹಾರದ ಕೊರತೆ ನೀಗಿಸಿಕೊಂಡಿದೆ’ ಎಂದು ಆನಂದಪುರ ಮುರುಘಾರಾಜೇಂದ್ರ ಮಠದ ಪೀಠಾಧಿಕಾರಿ ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ ಹೇಳಿದರು.

ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸಾಂಸ್ಕೃತಿಕ, ಕ್ರೀಡೆ, ಎನ್.ಎಸ್.ಎಸ್‌, ರೆಡ್‌ಕ್ರಾಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.

‘ಕೇವಲ ಉದ್ಯೋಗಕ್ಕಾಗಿ ಓದಬೇಡಿ. ಜ್ಞಾನಾರ್ಜನೆಗಾಗಿ ವ್ಯಾಸಂಗ ಮಾಡುವುದು ವರ್ತಮಾನದ ಅಗತ್ಯ’ ಎಂದರು.

ADVERTISEMENT

‘ಕೃಷಿ ಕಾಯಕದ ಮೂಲಕ ಬದುಕು ಕಟ್ಟಿಕೊಳ್ಳಿ. ಈ ಕ್ಷೇತ್ರದಲ್ಲಿಯೂ ಸಾಕಷ್ಟು ಸವಾಲುಗಳಿವೆ. ಎದೆಗುಂದದೆ ಸಮರ್ಥವಾಗಿ ಅದನ್ನು ಎದುರಿಸಬೇಕು’ ಎಂದು ತಿಳಿಸಿದರು.

‘ನೀವು ಭವಿಷ್ಯದ ನಾಯಕರಾಗಬೇಕು. ಆ ನಿಟ್ಟಿನಲ್ಲಿ ನಿಮ್ಮ ಚಿಂತನೆಗಳು ರೂಪುಗೊಳ್ಳಲಿ’ ಎಂದು ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು ಸಲಹೆ ನೀಡಿದರು.  

ಇದೇ ಸಂದರ್ಭದಲ್ಲಿ ಕಾಲೇಜಿನ ಸಭಾಂಗಣಕ್ಕೆ ‘ಜೇನುಗೋಡು’ ಎಂದು ನಾಮಕರಣ ಮಾಡಲಾಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಚ್.ಎಸ್.ವಿರೂಪಾಕ್ಷಪ್ಪ ಬರೆದ `ಕೃಷಿ ಸಂರಕ್ಷಣೆ ಮರು ಓದು’ ಪುಸ್ತಕವನ್ನು ಮುರುಘಾ ಮಠದ ಶ್ರೀಗಳು ಲೋಕಾರ್ಪಣೆ ಮಾಡಿದರು.

ಎಂ.ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಸದಸ್ಯರಾದ ಎನ್.ಚಂದ್ರೇಶ್, ನಿರೂಪ್ ಕುಮಾರ್, ಆಸಿಫ್‌ ಭಾಷಾ, ಸಿಡಿಸಿ ಸದಸ್ಯರಾದ ಮಂಜುನಾಥ ಕಾಮತ್, ಪಿಯೂಸ್ ರಾಡ್ರಿಗಸ್, ಶ್ರೀನಿವಾಸ್‌ ಆಚಾರ್, ವಿದ್ಯಾರ್ಥಿ ಪ್ರತಿನಿಧಿ ಮಾನ್ಯಶ್ರೀ, ನಂದನ್ ಜಿ, ಉಪನ್ಯಾಸಕ ವೃಂದ, ಸಿಬ್ಬಂದಿ ಹಾಜರಿದ್ದರು.

ನಂದನ್ ಪ್ರಾರ್ಥಿಸಿದರು. ಉಪನ್ಯಾಸಕ ಕುಮಾರ ಎನ್. ರುದ್ರಮುನಿ ಸ್ವಾಗತಿಸಿದರು. ಉಪನ್ಯಾಸಕಿ ಸೌಮ್ಯ ನಿರೂಪಿಸಿದರು. ಎಚ್.ಎಂ.ಸಂಜಯ್‌ಕುಮಾರ್ ವಂದಿಸಿದರು.

ರಿಪ್ಪನ್ ಪೇಟೆ ಸರ್ಕಾರಿ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಕೃಷಿ ಚಟುವಟಿಕೆಯ ಮಾದರಿ ವಸ್ತು ಪ್ರದರ್ಶನವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ವೀಕ್ಷಿಸಿದರು.ಪ್ರದರ್ಶನವನ್ನು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.