ರಿಪ್ಪನ್ಪೇಟೆ: ಹೊಂಬುಜದ ಭಗವಾನ ಶ್ರೀ 1008 ಪಾರ್ಶ್ವನಾಥ ಸ್ವಾಮಿ ಹಾಗೂ ಪದ್ಮಾವತಿ ದೇವಿಯ ಸನ್ನಿಧಿಯಲ್ಲಿ ಸೆಪ್ಟೆಂಬರ್ 22 ರಿಂದ ಶರನ್ನವರಾತ್ರಿ ಮತ್ತು ವಿಜಯದಶಮಿ ಪರ್ವ ಆಗಮೋಕ್ತ ವಿಧಿ–ವಿಧಾನಗಳು ವಿಜೃಂಭಣೆಯಿಂದ ಜರುಗಲಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.
ಹೊಂಬುಜ ಮಠದ ಪೀಠಾಧಿಕಾರಿ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ಪ್ರತಿನಿತ್ಯ ವಿಶೇಷ ಪೂಜೆ, ಜಿನಸ್ತುತಿ, ಭಜನೆ, ಉತ್ಸವ, ಆರಾಧನೆಗಳು ನೆರವೇರಲಿವೆ.
ಸೆ. 22ರಂದು ಘಟಸ್ಥಾಪನೆ, ಸೆ. 29ರಂದು ಸರಸ್ವತಿ ಪೂಜೆ, ಸೆ. 30ರಂದು ಜೀವದಯಾಷ್ಟಮಿ, ಅ. 01 ರಂದು ಆಯುಧ ಪೂಜೆ ಮತ್ತು ಮಹಾನವಮಿ, ಅ. 02 ರಂದು ವಿಜಯದಶಮಿ ಉತ್ಸವ, ಮಹಾದೇವಿ ಪಲ್ಲಕ್ಕಿ ಉತ್ಸವ ಜರುಗಲಿದೆ.
ದೇವೇಂದ್ರ ಕೀರ್ತಿ ಭಟ್ಟಾರಕರ ಪರಂಪರಾನುಗತ ಸಿಂಹಾಸನಾರೋಹಣ, ಪಾದಪೂಜೆ, ವಿಜಯದಶಮಿ ಪ್ರಯುಕ್ತ ಧಾರ್ಮಿಕ ಪ್ರವಚನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಹಾಗೂ ಸಾಯಂಕಾಲ ಬನ್ನಿ ಮಂಟಪದಲ್ಲಿ ವಿಶೇಷ ಪೂಜೆ ನೆರವೇರಲಿದ್ದು, ಶ್ರೀಗಳು ಶ್ರೀಮಂತ್ರಾಕ್ಷತೆ ನೀಡಲಿದ್ದಾರೆ.
ಶಮೀ ಪತ್ರದೊಂದಿಗೆ ವಿಶೇಷ ಪೂಜೆ ಸಲ್ಲಿಸಲು ಭಕ್ತವೃಂದಕ್ಕೆ ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗೆ ಉಪಹಾರ, ಅನ್ನಪ್ರಸಾದ ಹಾಗೂ ವಸತಿ ವ್ಯವಸ್ಥೆಗೆ ಪೂರ್ವಸಿದ್ಧತೆ ಕೈಗೊಳ್ಳಲಾಗಿದೆ.
ಇದೇ ಸಂದರ್ಭದಲ್ಲಿ ಹೊಂಬುಜದ ಅಧೀನ ಕ್ಷೇತ್ರಗಳಾದ ವಾರಂಗ, ಹಟ್ಟಿಯಂಗಡಿ ಜಿನಮಂದಿರಗಳಲ್ಲಿ ಸಂಪ್ರದಾಯದಂತೆ ವಿಶೇಷ ಪೂಜೆಗಳು, ಆರಾಧನೆ, ಉತ್ಸವಗಳು ನೆರವೇರಲಿವೆ ಎಂದು ಮಠದ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.