ಸಾಗರ: ತಾಲ್ಲೂಕಿನಲ್ಲಿ ಸೋಮವಾರ ವರುಣನ ಆರ್ಭಟ ಕಡಿಮೆಯಾಗಿದ್ದು, ಒಂದು ವಾರದ ನಂತರ ಆಗಸದಲ್ಲಿ ಕಪ್ಪು ಕಾರ್ಮೋಡಗಳ ಸ್ಥಾನದಲ್ಲಿ ಸೂರ್ಯನ ಬೆಳಕಿನ ಕಿರಣಗಳು ಕಾಣಿಸಿಕೊಂಡಿದ್ದವು.
ಮಳೆಯ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ರೈತರು ಕೃಷಿ ಚಟುವಟಿಕೆಗಾಗಿ ಹೊಲಗದ್ದೆಗಳಿಗೆ ಇಳಿದಿದ್ದರು. ಮಂಗಳವಾರ ಮತ್ತೆ ವರುಣನ ಆರ್ಭಟ ಆರಂಭವಾಗಿದ್ದು ಜೋರು ಗಾಳಿ ಸಮೇತ ಮಳೆಯಾಗುತ್ತಿದೆ.
ತಾಳಗುಪ್ಪ ಹೋಬಳಿಯಲ್ಲಿ ವರದಾ ನದಿಯ ನೀರಿನಿಂದ ಜಲಾವೃತಗೊಂಡಿರುವ ಭತ್ತದ ಗದ್ದೆಗಳಲ್ಲಿ ನೀರಿನ ಪ್ರಮಾಣ ಇನ್ನೂ ತಗ್ಗಿಲ್ಲ. ಈ ಭಾಗದಲ್ಲಿ ಪ್ರವಾಹದ ಅಬ್ಬರ ಕಡಿಮೆಯಾಗಿದ್ದರೂ ನೀರಿನಲ್ಲಿ ಮುಳುಗಿರುವ ಬೆಳೆಗಳಿಗೆ ಮಳೆಯ ನೀರಿನಿಂದ ಬಿಡುಗಡೆ ದೊರಕಿಲ್ಲ.
ನಗರ ಪೊಲೀಸ್ ಠಾಣೆ ವೃತ್ತದ ಎದುರು ಜೆ.ಸಿ.ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಕಾರೊಂದರ ಮೇಲೆ ಮರ ಬಿದ್ದಿದ್ದು ಕಾರು ಜಖಂಗೊಂಡಿದೆ. ಅದೃಷ್ಟವಶಾತ್ ಮರ ಬಿದ್ದ ಸಂದರ್ಭದಲ್ಲಿ ಕಾರಿನಲ್ಲಿ ಯಾರೂ ಇಲ್ಲದ ಕಾರಣ ಯಾವುದೆ ಪ್ರಾಣಾಪಾಯ ಉಂಟಾಗಿಲ್ಲ.
ಮಳೆಯ ಕಾರಣಕ್ಕೆ ನಗರ ಹಾಗೂ ಗ್ರಾಮೀಣ ಪ್ರದೇಶಗಳ ರಸ್ತೆಗಳಲ್ಲಿ ಗುಂಡಿ ಬಿದ್ದಿದೆ. ಗ್ರಾಮೀಣ ಭಾಗದ ಕೆಲವೆಡೆ ರಸ್ತೆ ವಿಪರೀತ ಹಾಳಾಗಿರುವುದರಿಂದ ಆ ಭಾಗದಲ್ಲಿ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಗ್ರಾಮ ಪಂಚಾಯಿತಿ ವತಿಯಿಂದ ಫಲಕ ಅಳವಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.