ಶಿಕಾರಿಪುರ: ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ಮಾಡದಿದ್ದರೆ ಕನಕಗುರುಪೀಠದ ನೇತೃತ್ವದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಎಚ್ಚರಿಸಿದರು.
ಪಟ್ಟಣದ ಕಡೆಕೇರಿಯ ತುದಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ತೆರವು ಮಾಡಿದ ಸ್ಥಳಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.
ಆ.15ರಂದು ಸಮುದಾಯದ ಬಂಧುಗಳು ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿರಾಯಣ್ಣ ಪ್ರತಿಮೆ ಅನಾವರಣೆಕ್ಕೆ ಮುಂದಾಗಿದ್ದರು. ಸಮುದಾಯ ತಪ್ಪು ಮಾಡಿದ್ದರೆ ತಿಳಿಸಿ ಹೇಳಬೇಕಿತ್ತು. ಆದರೆ, ತಾಲ್ಲೂಕು ಆಡಳಿತ ಪ್ರತಿಮೆ ತೆರವು ಮಾಡಿರುವುದು ಖಂಡನೀಯ. ಈ ದೇಶದಲ್ಲಿ ಅಪರಾಧ ಮಾಡಿ ಮರಣದಂಡನೆಗೊಳಗಾದ ಕೈದಿಗಳಿಗೂ ಕೊನೆ ಆಸೆ ಕೇಳುವ ಪದ್ದತಿ ,ಪರಂಪರೆ ಹಾಗೂ ಸಂಸ್ಕೃತಿ ಇದೆ. ಮಾಡಿರುವ ಲೋಪ ದೋಷಗಳನ್ನು ಸರಪಡಿಸಲು ಅವಕಾಶ ಕೊಡದೆ ಕ್ರಾಂತಿವೀರನ ಪ್ರತಿಮೆಗೆ ಅಪಮಾನ ಮಾಡಲಾಗಿದೆ ಎಂದು ಖಂಡಿಸಿದರು.
ತಾಲ್ಲೂಕು ಆಡಳಿತ, ಜಿಲ್ಲಾಡಳಿತ, ಕ್ಷೇತ್ರದ ಸಂಸದರು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರತಿಮೆ ಪ್ರತಿಷ್ಠಾಪನೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.