ಕಂಪ್ಯೂಟರ್ ಆಪರೇಟರ್ ಅರವಿಂದ್, ಸೆಕ್ಷನ್ ಆಫೀಸರ್ ಕೊಟ್ರಪ್ಪ
ಭದ್ರಾವತಿ: ನಾಲೆಯ ಹೂಳು ತೆಗೆಯುವ ಕಾಮಗಾರಿಯ ಬಿಲ್ ಮಂಜೂರು ಮಾಡಲು ಗುತ್ತಿಗೆದಾರರೊಬ್ಬರಿಂದ ₹ 1.20 ಲಕ್ಷ ಲಂಚ ಪಡೆಯುತ್ತಿದ್ದ ಕರ್ನಾಟಕ ನೀರಾವರಿ ನಿಗಮದ ಸೆಕ್ಷನ್ ಆಫೀಸರ್ ಹಾಗೂ ಕಂಪ್ಯೂಟರ್ ಆಪರೇಟರ್ರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದು, ಲಂಚದ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸೆಕ್ಷನ್ ಆಫೀಸರ್ ಕೊಟ್ರಪ್ಪ ಮತ್ತು ಕಚೇರಿಯ ಕಂಪ್ಯೂಟರ್ ಆಪರೇಟರ್ ಅರವಿಂದ್ ಲಂಚ ಪಡೆಯುವಾಗ ಸಿಕ್ಕಿಬಿದ್ದು ಬಂಧನಕ್ಕೆ ಒಳಗಾದವರು.
ಗುತ್ತಿಗೆದಾರ ವಿ.ರವಿ ತಾಲ್ಲೂಕಿನ ಗೊಂದಿಯ ಭದ್ರಾ ಬಲದಂಡೆ ನಾಲೆಯ ಹೂಳು ತೆಗೆಯುವ ಕಾಮಗಾರಿ ಗುತ್ತಿಗೆ ಪಡೆದುಕೊಂಡಿದ್ದರು. 2024ರ ಜನವರಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿದ್ದರು. ಆದರೆ, ಅವರಿಗೆ ಟೆಂಡರ್ ಹಣ ₹ 9.16 ಲಕ್ಷ ಮಂಜೂರಾಗಿರಲಿಲ್ಲ. ಹಣ ಮಂಜೂರು ಮಾಡಲು ನೀರಾವರಿ ನಿಗಮದ ಸೆಕ್ಷನ್ ಆಫೀಸರ್ ಕೊಟ್ರಪ್ಪ ಅವರು ₹ 1.20 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದುಬಂದಿದೆ.
ರವಿ ಅವರು ಲೋಕಾಯುಕ್ತ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದರು. ಬಿ.ಆರ್.ಪಿ ವ್ಯಾಪ್ತಿಯ ಡಿ.ಬಿ. ಹಳ್ಳಿಯ ಕಚೇರಿಯಲ್ಲಿ ರವಿ ಅವರಿಂದ ಲಂಚದ ಹಣ ಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ಬುಧವಾರ ಸಂಜೆ ದಾಳಿ ನಡೆಸಿ ಇಬ್ಬರನ್ನೂ ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.