ADVERTISEMENT

ದೇವಸ್ಥಾನದ ಆಸ್ತಿ ಕಬಳಿಸಲು ಸೇವಾ ಸಮಿತಿ ಹುನ್ನಾರ: ಆರೋಪ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2022, 4:49 IST
Last Updated 11 ಆಗಸ್ಟ್ 2022, 4:49 IST
ರತ್ನಾಕರ್
ರತ್ನಾಕರ್   

ಆನಂದಪುರ: ಕೆಂಜಿಗಾಪುರದ ವೀರಭದ್ರೇಶ್ವರ ದೇವಸ್ಥಾನದ ಆಸ್ತಿಯನ್ನು ಸೇವಾ ಸಮಿತಿ ತನ್ನ ಹೆಸರಿಗೆ ಖಾತೆ ಮಾಡಿಕೊಂಡು ಕಬಳಿಸಲು ಹೊರಟಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರತ್ನಾಕರ್ ಹೋನಗೋಡು ಆರೋಪಿಸಿದರು.

‘ಖಾತೆ ಬದಲಾವಣೆ ಕುರಿತು ಈ ಹಿಂದೆ ಸ್ಥಳೀಯರು ಹಾಗೂ ದೇವಸ್ಥಾನದ ಭಕ್ತರಿಂದ ಹೋರಾಟ ನಡೆದ ಬಳಿಕ ತಹಶೀಲ್ದಾರ್ ಬಂದು ಪರಿಶೀಲಿಸಿದರು. ಆಗ ಸೇವಾ ಸಮಿತಿಗೆ ಖಾತೆ ಬದಲಾವಣೆ ಆಗಿರುವುದು ಕಂಡುಬಂದಿತ್ತು. ಎರಡು ವರ್ಷಗಳ ಹಿಂದೆ ತಹಶೀಲ್ದಾರ್ ದೇವಸ್ಥಾನದ ಹೆಸರಿಗೆ ಖಾತೆ ಬದಲಾವಣೆ ಮಾಡುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಆದೇಶಿಸಿದ್ದರು. ಇ.ಒ ಯಡೇಹಳ್ಳಿ ಪಂಚಾಯಿತಿ ಅಧಿಕಾರಿಗೆ ಆದೇಶ ಬದಲಾವಣೆ ಮಾಡುವಂತೆ ಹೇಳಿದ್ದರು. ಆದರೆ ಇಲ್ಲಿವಯರೆಗೂ ಖಾತೆ ಬದಲಾವಣೆ ಆಗಿಲ್ಲ’ ಎಂದು ಆರೋಪ ಮಾಡಿದರು.

‘ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಸ್ಥಳೀಯ ಮುಖಂಡರು ಶಾಸಕರ ಮೂಲಕ ಪಿಡಿಒ ಮೇಲೆ ಒತ್ತಡ ಹಾಕಿ ಖಾತೆ ಬದಲಾವಣೆ ಆಗದಂತೆ ನೋಡಿಕೊಳ್ಳುತ್ತಿದ್ದಾರೆ. ಖಾತೆಯನ್ನು ದೇವಸ್ಥಾನದ ಹೆಸರಿಗೆ ಬದಲಾವಣೆ ಮಾಡುವಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಪಿಡಿಒಗೆ ಒತ್ತಡ ಹಾಕಿದ ನಂತರ ಬದಲಾವಣೆಗೆ ಹೊರಟ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನೇ ಬದಲಾವಣೆ ಮಾಡಿ ತಮ್ಮ ಮಾತು ಕೇಳುವ ಅಧಿಕಾರಿಯನ್ನು ನೇಮಕ ಮಾಡಲು ಸಿದ್ಧತೆ ನಡೆಸಿದ್ದಾರೆ. ಬಿಜೆಪಿಯವರು ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

ADVERTISEMENT

‘ಶಾಸಕರು ಕೆಲ ಸ್ಥಳೀಯರ ಪರವಾಗಿರದೆ ಸಾರ್ವಜನಿಕರ ಪರವಾಗಿ ಆಡಳಿತ ನಡೆಸಬೇಕು. ಪ್ರತಿದಿನ ದೇವಸ್ಥಾನಕ್ಕೆ ₹10,000ದಿಂದ 15,000 ಕಾಣಿಕೆ ಬರುತ್ತಿದ್ದು, ಅದು ಸಹ ಅಕ್ರಮವಾಗುತ್ತಿದೆ. ಅದರ ಬಗ್ಗೆಯೂ ತನಿಖೆ ಆಗಬೇಕು. ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ನೋಡಿದರೆ ಅಧಕಾರಿಗಳೇ ಅವರಿಗೆ ಬೆಂಬಲ ನೀಡುತ್ತಿದ್ದಾರೆ ಎನ್ನುವ ಅನುಮಾನ ಮೂಡುತ್ತಿದೆ’ ಎಂದರು.

‘ಅರ್ಜಿದಾರರ ಸಮ್ಮುಖದಲ್ಲಿ ಮುಜಾರಾಯಿ ಸಮಿತಿ ನೇಮಕ ಮಾಡಬೇಕು ಎನ್ನುವ ಬೇಡಿಕೆ ಇದ್ದರೂ ಪಾಲನೆ ಆಗಿಲ್ಲ. ಈ ವಿಷಯವಾಗಿ ಮುಂದೆ ಹೈಕೊರ್ಟ್‌ಗೆ ಅರ್ಜಿ ಸಲ್ಲಿಸಲಾಗುತ್ತಿದೆ. ಆಸ್ಥಿಯನ್ನು ಸಮಿತಿಯಿಂದ ದೇವಸ್ಥಾನದ ಹೆಸರಿಗೆ ಬದಾವಣೆ ಮಾಡದಿದ್ದಲ್ಲಿ ವಾರದ ನಂತರ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.