ಶಿವಮೊಗ್ಗ: ಶಂಕರ ಮಠ ರಸ್ತೆಯಲ್ಲಿ ₹ 6 ಕೋಟಿ ವೆಚ್ಚದಲ್ಲಿ ನವೀಕರಣಗೊಂಡಿರುವ ಶೃಂಗೇರಿ ಶಂಕರ ಮಠದ ಲೋಕಾರ್ಪಣಾ ಕಾರ್ಯಕ್ರಮ ಮೇ 23ಕ್ಕೆ ನಡೆಯಲಿದೆ.
ಶಂಕರಾಚಾರ್ಯ, ಶಾರದಾಂಬ, ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ಕುಂಭಾಭೀಷೇಕ ಮಹೋತ್ಸವ ಅಂದು ನಡೆಯಲಿವೆ ಎಂದು ಶಂಕರ ಮಠದ ಧರ್ಮಾಧಿಕಾರಿ ಡಾ.ಪಿ.ನಾರಾಯಣ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮೇ 22ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಸಂಜೆ 5ಕ್ಕೆ ವಿಧುಶೇಖರ ಭಾರತಿ ಸ್ವಾಮೀಜಿ ಆಗಮನ, ಶ್ರೀಗಳ ಶೋಭಾ ಯಾತ್ರೆ, ಭಾರತೀ ತೀರ್ಥ ಭವನದ ಉದ್ಘಾಟನೆ, ಶ್ರೀಗಳವರಿಗೆ ಧೂಳಿ ಪಾದಪೂಜೆ, ಫಲಪುಷ್ಪ ಸಮರ್ಪಣೆ, ಆಶೀರ್ವಚನ ಇರುತ್ತದೆ. ರಾತ್ರಿ 8.30ಕ್ಕೆ ಶ್ರೀಗಳಿಂದ ಚಂದ್ರಮೌಳೇಶ್ವರ ಪೂಜೆ ನೆರವೇರಲಿದೆ ಎಂದು ವಿವರ ನೀಡಿದರು.
23ರಂದು ಬೆಳಿಗ್ಗೆ ವಿಶೇಷ ಪೂಜೆಗಳು ನೆರವೇರಲಿವೆ. ಸಂಜೆ ಸಭಾ ಕಾರ್ಯಕ್ರಮ ಇರುತ್ತದೆ. ವಿಧುಶೇಖರ ಭಾರತೀ ಸ್ವಾಮೀಜಿ ಮಹಾಕುಂಭಾಭಿಷೇಕ ನಡೆಸಿಕೊಡಲಿದ್ದಾರೆ. ನಂತರ ಶ್ರೀಗಳಿಂದ ಅನುಗ್ರಹ ಭಾಷಣ ಇರುತ್ತದೆ ಎಂದರು.
ಮೇ 24ರಂದು ಬೆಳಿಗ್ಗೆ 8.30ರಿಂದ ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ದೇವಸ್ಥಾನದ್ಲಲಿ ಶಂಕರ ಜಯಂತಿ ಶತಮಾನೊತ್ಸವ ಕಾರ್ಯಕ್ರಮ, ಬೆಳಿಗ್ಗೆ 11ಕ್ಕೆ ಶ್ರೀಗಳ ದರ್ಶನ, ಮೇ 25 ರಂದು ಬೆಳಿಗ್ಗೆ 10.30ಕ್ಕೆ ಶ್ರೀ ರುದ್ರಹೋಮದ ಪೂರ್ಣಹುತಿ, ಬೆಳಿಗ್ಗೆ 10ಕ್ಕೆ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಶ್ರೀಗಳಿಗೆ ಪಾದಪೂಜೆ ನೆರವೆರಲಿದೆ ಎಂದು ವಿವರ ನೀಡಿದರು.
ದೇಣಿಗೆ ನೀಡಲು ಬಯಸುವವರು ಮೇ 15ರ ಒಳಗೆ 9449327686ಗೆ ಕರೆ ಮಾಡಬಹುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಭಕ್ತರಾದ ವೇಣುಗೋಪಾಲ್, ಶಿವಶಂಕರ್, ಡಾ.ಶ್ರೀಧರ್ ಕೆ.ಆರ್., ನಟರಾಜ್ ಭಾಗವತ್, ಕೇಶವಮೂರ್ತಿ, ದತ್ತಾತ್ರಿ, ಎಸ್.ಜಿ.ಗೋಪಾಲ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.