ಶಿವಮೊಗ್ಗ: ಇಲ್ಲಿನ ಮಲವಗೊಪ್ಪದ ಬಳಿ ಸೋಮವಾರ ಎರಡು ಬೈಕ್ಗಳ ನಡುವೆ ಡಿಕ್ಕಿಯಾಗಿದ್ದು, ಈ ವೇಳೆ ರಸ್ತೆಗೆ ಬಿದ್ದ ಯುವತಿಯ ಮೇಲೆ ನಗರ ಸಾರಿಗೆ ಬಸ್ ಹರಿದು ಆಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ತಾಲ್ಲೂಕಿನ ದುಮ್ಮಳ್ಳಿ ಗ್ರಾಮದ ನಿವಾಸಿ ಕವಿತಾ ಬಾಯಿ (26) ಮೃತಪಟ್ಟ ಯುವತಿ. ಕವಿತಾಗೆ ಮದುವೆ ನಿಶ್ಚಯವಾಗಿದ್ದು, 15 ದಿನಗಳಲ್ಲಿ ಹಸೆಮಣೆ ಏರಲಿದ್ದರು ಎಂದು ತಿಳಿದುಬಂದಿದೆ.
ಕವಿತಾ ಬಾಯಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಬೆಳಿಗ್ಗೆ ಕೆಲಸಕ್ಕೆಂದು ಸಹೋದರ ಸಂತೋಷ್ ಅವರೊಂದಿಗೆ ಬೈಕ್ನಲ್ಲಿ ದುಮ್ಮಳ್ಳಿಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದರು. ಈ ವೇಳೆ ಮಲವಗೊಪ್ಪದ ಬಳಿ ರಾಂಗ್ಸೈಡ್ನಲ್ಲಿ ಬಂದ ಮತ್ತೊಂದು ಬೈಕ್ ಡಿಕ್ಕಿಯಾಗಿದೆ.
ಈ ವೇಳೆ ಕವಿತಾ ಬಾಯಿ ಹಾಗೂ ಸಂತೋಷ್ ಬೈಕ್ನಿಂದ ಕೆಳಕ್ಕೆ ಬಿದ್ದಿದ್ದಾರೆ. ಆಗ ಅದೇ ದಾರಿಯಲ್ಲಿ ಬರುತ್ತಿದ್ದ ನಗರ ಸಾರಿಗೆ ಬಸ್ ಕೆಳಗೆ ಬಿದ್ದ ಕವಿತಾ ಬಾಯಿ ಮೇಲೆ ಹಿಂದಿನಿಂದ ಹರಿದಿದೆ. ತೀವ್ರವಾಗಿ ಗಾಯಗೊಂಡ ಕವಿತಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸಂತೋಷ್ಗೆ ಸಣ್ಣಪುಟ್ಟ ಗಾಯವಾಗಿದೆ. ಈ ಬಗ್ಗೆ ಪೂರ್ವ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.