ಶಿವಮೊಗ್ಗ: ನಗರದಲ್ಲಿ ಹತ್ಯೆಯಾದ ಬಜರಂಗ ದಳದ ಕಾರ್ಯಕರ್ತ ಹರ್ಷ ಅವರ ಪಾರ್ಥಿವ ಶರೀರದ ಮೆರವಣಿಗೆ ವೇಳೆ ಹಲವೆಡೆ ಕಲ್ಲು ತೂರಾಟನಡೆದು, ಗುಂಪು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡುಹಾರಿಸಿ, ಲಾಠಿ ಬೀಸಿದರು.
ಸೀಗೆಹಟ್ಟಿಯಿಂದ ಹೊರಟ ಮೆರವಣಿಗೆ ಸಿದ್ದಯ್ಯ ರಸ್ತೆಗೆ ಬರುತ್ತಿದ್ದಂತೆ ಬೇರೆ ಬೀದಿಗಳಿಂದ ಕಲ್ಲುಗಳು ತೂರಿಬಂದವು. ಪ್ರತಿಯಾಗಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜನರೂ ಕಲ್ಲು ತೂರಿದರು. ಟಯರ್ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಗಾಂಧಿ ಬಜಾರ್ ಮಸೀದಿ ಬಳಿ ಬಂದಾಗ ಉದ್ರಿಕ್ತ ಗುಂಪು ಮಸೀದಿಗಳ ಮೇಲೆ ಕಲ್ಲು ತೂರಾಟ ನಡೆಸಿತು. ಕ್ಷಣ ಮಾತ್ರದಲ್ಲಿ ಹಲವು ಬೀದಿಗಳು ರಣರಂಗದಂತೆ ಭಾಸವಾದವು. ಹೆಚ್ಚಿನ ಸಂಖ್ಯೆಯಲ್ಲಿದ್ದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪರಿಸ್ಥಿತಿ ಹತೋಟಿಗೆ ತಂದರು.
ಶಿವಮೊಗ್ಗ ನಾಯಕ ವೃತ್ತದಿಂದ ಪಿ.ಬಿ.ರಸ್ತೆ ತಲುಪಿದಾಗ ಮತ್ತೆ ಕಲ್ಲು ತೂರಾಟ ನಡೆಯಿತು. ದಾರಿಯ ಉದ್ದಕ್ಕೂ ಜೈಶ್ರೀರಾಮ್ ಘೋಷಣೆ ಮೊಳಗಿದವು. ಮೆರವಣಿಗೆ ರೋಟರಿ ಚಿತಾಗಾರದತ್ತ ಸಾಗಿತು. ನಂತರ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.