ADVERTISEMENT

ಉಕ್ರೇನ್‌ನಲ್ಲಿ ಸಿಲುಕಿರುವ ಮಗಳಿಗೆ ಊಟ–ಉಪಾಹಾರ, ನೆರವೂ ಇಲ್ಲ: ಸಾಗರದ ಪೋಷಕರ ಅಳಲು

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2022, 4:29 IST
Last Updated 28 ಫೆಬ್ರುವರಿ 2022, 4:29 IST
ಉಕ್ರೇನ್‌ನಲ್ಲಿ ಸಿಲುಕಿರುವ ಮೊನಿಷಾ
ಉಕ್ರೇನ್‌ನಲ್ಲಿ ಸಿಲುಕಿರುವ ಮೊನಿಷಾ   

ಸಾಗರ: ವೈದ್ಯಕೀಯ ಶಿಕ್ಷಣ ಪಡೆಯಲು ಉಕ್ರೇನ್‌ಗೆ ತೆರಳಿರುವ ನಗರದ ಅಣಲೆಕೊಪ್ಪ ಬಡಾವಣೆಯ ವಿದ್ಯಾರ್ಥಿನಿ ಮೊನಿಷಾ ಪೋಷಕರು ಈಗ ಆತಂಕದಲ್ಲಿದ್ದಾರೆ.

ಎಲೆಕ್ಟ್ರಿಷಿಯನ್ ವೃತ್ತಿಯ ಜಾನ್ ಹಾಗೂ ತೆರೆಸಾ ಲೊಬೊ ಅವರ ಪುತ್ರಿ ಉಕ್ರೇನ್ ನಲ್ಲಿ ಎಂಬಿಬಿಎಸ್‌ನ ಆರನೇ ವರ್ಷದ ವಿದ್ಯಾರ್ಥಿನಿಯಾಗಿದ್ದಾರೆ. ಕೆಲವೇ ದಿನಗಳಲ್ಲಿ ಪರೀಕ್ಷೆ ಮುಗಿಸಿ ಅವರು ಭಾರತಕ್ಕೆ ಮರಳುವವರಿದ್ದರು. ಯುದ್ಧದ ಕಾರಣಕ್ಕೆ ಅವರು ಉಕ್ರೇನ್‌ನಲ್ಲೇ ನೆಲೆಸುವಂತಾಗಿದೆ.

ಇದುವರೆಗೆ ನಮಗೆ ಯಾವುದೇ ರೀತಿಯ ಆತಂಕ ಇರಲಿಲ್ಲ. ಆದರೆ ಭಾರತಕ್ಕೆ ಮರಳುವ ಯತ್ನದಲ್ಲಿರುವ ತಮ್ಮ ಪುತ್ರಿಗೆ ಕಳೆದ ಮೂರು ದಿನಗಳಿಂದ ಊಟ, ಉಪಾಹಾರ ದೊರಕುತ್ತಿಲ್ಲ. ನಿದ್ರೆಯೂ ಇಲ್ಲವಾಗಿದೆ ಎಂದು ಮೊನಿಷಾಳ ತಂದೆ ತಿಳಿಸಿದ್ದಾರೆ.

ADVERTISEMENT

ಶನಿವಾರ ಶೆಲ್ ದಾಳಿ ಹೆಚ್ಚಾದ ಕಾರಣ ಮೊಬೈಲ್ ನೆಟ್‌ವರ್ಕ್ ಬಂದ್ ಆಗಿದ್ದು, ಮೊನಿಷಾ ಪೋಷಕರ ಆತಂಕವನ್ನು ಹೆಚ್ಚಿಸಿತ್ತು. ಭಾನುವಾರ ಅವರು ಸಂಪರ್ಕಕ್ಕೆ ಸಿಕ್ಕಿರುವುದು ಪೋಷಕರಲ್ಲಿ ಸಮಾಧಾನ ತಂದಿದೆ.

‘ಉಕ್ರೇನ್‌ನಿಂದ ಭಾರತಕ್ಕೆ ಮರಳುವವರಿಗೆ ಎಲ್ಲ ರೀತಿಯ ನೆರವು ನೀಡಲಾಗುತ್ತಿದೆ ಎಂದು ಮಾಧ್ಯಮಗಳಲ್ಲಿ ಸರ್ಕಾರದ ಮುಖ್ಯಸ್ಥರು ಹೇಳಿಕೆ ನೀಡುತ್ತಿದ್ದಾರೆ.ಆದರೆ, ಉಕ್ರೇನ್‌ನಿಂದ ಭಾರತಕ್ಕೆ ಮರಳಲು ಬಯಸುತ್ತಿರುವ ನನ್ನ ಪುತ್ರಿ ಸೇರಿ ಹಲವರಿಗೆ ಯಾರಿಂದಲೂ ನೆರವು ದೊರಕುತ್ತಿಲ್ಲ’ ಎಂದು ಮೊನಿಷಾ ಅವರ ತಂದೆ ಜಾನ್ ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.