ADVERTISEMENT

ಎಲ್ಲರ ಒಳಗೊಳ್ಳುವಿಕೆ ಜಾತ್ರೆಗಳ ಯಶಸ್ಸಿನ ಗುಟ್ಟು: ನಟ ಶಿವರಾಜಕುಮಾರ್

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 3:11 IST
Last Updated 7 ಫೆಬ್ರುವರಿ 2026, 3:11 IST
ಸಾಗರದಲ್ಲಿ ಮಾರಿಕಾಂಬಾ ಜಾತ್ರೆ ಅಂಗವಾಗಿ ಗುರುವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಟ ಶಿವರಾಜಕುಮಾರ್ ‘ಟುವ್ವಿ ಟುವ್ವಿ’ ಹಾಡಿಗೆ ಹೆಜ್ಜೆ ಹಾಕಿದರು 
ಸಾಗರದಲ್ಲಿ ಮಾರಿಕಾಂಬಾ ಜಾತ್ರೆ ಅಂಗವಾಗಿ ಗುರುವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಟ ಶಿವರಾಜಕುಮಾರ್ ‘ಟುವ್ವಿ ಟುವ್ವಿ’ ಹಾಡಿಗೆ ಹೆಜ್ಜೆ ಹಾಕಿದರು    

ಸಾಗರ: ‘ನಾಡಿನ ವಿವಿಧೆಡೆ ನಡೆಯುವ ಜಾತ್ರಾ ಮಹೋತ್ಸವಗಳಲ್ಲಿ ಎಲ್ಲರ ಒಳಗೊಳ್ಳುವಿಕೆ ಇರುತ್ತದೆ. ಅದು ಅವುಗಳ ಯಶಸ್ಸಿನ ಹಿಂದಿರುವ ಗುಟ್ಟು’ ಎಂದು  ನಟ ಶಿವರಾಜಕುಮಾರ್ ಹೇಳಿದರು.

ಇಲ್ಲಿನ ಗಾಂಧಿ ಮೈದಾನದಲ್ಲಿ ಮಾರಿಕಾಂಬಾ ಜಾತ್ರೆ ಅಂಗವಾಗಿ ಗುರುವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ‘ಧಾರ್ಮಿಕ ಚಟುವಟಿಕೆಗಳ ಸಂದರ್ಭದಲ್ಲಿ ಸಾಂಸ್ಕೃತಿಕ ವೇದಿಕೆ ನಿರ್ಮಿಸುವ ಪರಂಪರೆ ನಮ್ಮಲ್ಲಿ ಮೊದಲಿನಿಂದಲೂ ಬೆಳೆದು ಬಂದಿದೆ’ ಎಂದರು.

‘ಹಿಂದಿನ ವರ್ಷಗಳಿಗಿಂತಲೂ ದುಪ್ಪಟ್ಟು ಸಂಖ್ಯೆಯಲ್ಲಿ ಈ ಬಾರಿ ಜಾತ್ರೆಗೆ ಜನರು ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕೆಲವೊಂದು ಬಿಗಿ ಕ್ರಮ ಕೈಗೊಂಡಿದ್ದಾರೆ. ಇಂತಹ ವೇಳೆ ಕೆಲವೊಂದು ಸಣ್ಣಪುಟ್ಟ ಲೋಪದೋಷಗಳು ಆಗುವುದು ಸಹಜ. ಜಾತ್ರೆಯ ಯಶಸ್ಸಿಗೆ ಜನರು ಸಹಕರಿಸಬೇಕು’ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಮನವಿ ಮಾಡಿದರು.

ADVERTISEMENT

‘ಜಾತ್ರೆಯ ಯಶಸ್ಸಿಗೆ 20 ಸಮಿತಿಗಳನ್ನು ನೇಮಕ ಮಾಡಲಾಗಿದೆ. ಎಲ್ಲಾ ಸಮಿತಿಗಳು ಚೆನ್ನಾಗಿ ಕೆಲಸ ಮಾಡಬೇಕು ಎಂದು ಹುರಿದುಂಬಿಸುವ ನಿಟ್ಟಿನಲ್ಲಿ ಸಲಹೆಗಳನ್ನು ನೀಡಿದ್ದೇನೆ. ಹೀಗೆಯೇ ಆಗಬೇಕು ಎಂದು ಯಾವುದೇ ಸಮಿತಿಯ ಕಾರ್ಯದಲ್ಲಿ ಹಸ್ತಕ್ಷೇಪ ಮಾಡಿಲ್ಲ’ ಎಂದು ಸ್ಪಷ್ಟಪಡಿಸಿದರು.

ಮಾರಿಕಾಂಬಾ ನ್ಯಾಸ ಪ್ರತಿಷ್ಠಾನದ ಅಧ್ಯಕ್ಷ ಕೆ.ಎನ್.ನಾಗೇಂದ್ರ ಅಧ್ಯಕ್ಷತೆ ವಹಿಸಿದ್ದರು. ಗೀತಾ ಶಿವರಾಜಕುಮಾರ್, ನಟ ಹುಲಿ ಕಾರ್ತಿಕ್, ಭರತ್ ಸಾಗರ್, ಉಪವಿಭಾಗಾಧಿಕಾರಿ ವೀರೇಶ್ ಕುಮಾರ್, ಎಎಸ್‌ಪಿ ಬೆನಕ ಪ್ರಸಾದ್, ಪೌರಾಯುಕ್ತ ಎಚ್.ಕೆ.ನಾಗಪ್ಪ, ಬಿ.ಗಿರಿಧರ ರಾವ್, ನಾಗೇಂದ್ರ ಕುಮಟಾ, ಸುಂದರ್ ಸಿಂಗ್, ಲೋಕೇಶ್ ಕುಮಾರ್, ರಾಮು ಇದ್ದರು.

‘ಟುವ್ವಿ ಟುವ್ವಿ’ ಹಾಡಿಗೆ ಹೆಜ್ಜೆ ಹಾಕಿದ ಶಿವಣ್ಣ

ಪ್ರೇಕ್ಷಕರ ಒತ್ತಾಯದ ಮೇರೆಗೆ ಆನಂದ್ ಚಿತ್ರದ ‘ಟುವ್ವಿ ಟುವ್ವಿ’ ಹಾಡಿಗೆ ವೇದಿಕೆಯಲ್ಲಿ ನೃತ್ಯ ಮಾಡಿದ ಶಿವರಾಜಕುಮಾರ್ ‘ನಾನು ಕ್ಯಾನ್ಸರ್‌ನಿಂದ ಸಂಪೂರ್ಣ ಗುಣಮುಖನಾಗಿದ್ದೇನೆ’ ಎಂದು ಹೇಳಿದರು. ‘ಶಾಸಕ ಬೇಳೂರು ಅವರು ಇದ್ದುದ್ದನ್ನು ಇದ್ದ ಹಾಗೆಯೇ ಹೇಳುತ್ತಾರೆ. ಅವರಿಗೆ ನಟನೆ ಬರುವುದಿಲ್ಲ. ಹೀಗಾಗಿ ಅವರ ವ್ಯಕ್ತಿತ್ವ ನನಗೆ ಇಷ್ಟ. ಅವರ ವಿಶ್ವಾಸಕ್ಕೆ ಇಲ್ಲಿಗೆ ಬಂದು ದೇವಿಯ ದರ್ಶನ ಪಡೆದಿದ್ದೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.