ADVERTISEMENT

ಸೊರಬ; ಹೆಲ್ಮೆಟ್ ಧಾರಣೆ ಕುರಿತು ಜಾಗೃತಿ‌ ಮೂಡಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 5:36 IST
Last Updated 28 ಸೆಪ್ಟೆಂಬರ್ 2025, 5:36 IST
ಸೊರಬದಲ್ಲಿ ಪೊಲೀಸ್ ಇಲಾಖೆ ವತಿಯಿಂದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ನಡೆಸಲಾಯಿತು
ಸೊರಬದಲ್ಲಿ ಪೊಲೀಸ್ ಇಲಾಖೆ ವತಿಯಿಂದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ನಡೆಸಲಾಯಿತು   

ಸೊರಬ: ‘ಮನುಷ್ಯನ ಜೀವ ಅತ್ಯಂತ ಅಮೂಲ್ಯವಾದುದು. ಹೀಗಾಗಿ ಬೈಕ್‌ ಸವಾರರು ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಬೇಕು. ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಸರ್ಕಲ್‌ ಇನ್‌ಸ್ಪೆಕ್ಟರ್‌ ಎಲ್. ರಾಜಶೇಖರ್ ಹೇಳಿದರು.

ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಪುರಸಭೆ ಮುಂಭಾಗದ ವೃತ್ತದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಹೆಲ್ಮೆಟ್ ಧರಿಸಿ ಬೈಕ್ ಚಲಾಯಿಸುವುದರಿಂದ ಜೀವ ಉಳಿಸಿಕೊಳ್ಳಬಹುದು. ಹೆಲ್ಮೆಟ್ ಧರಿಸದೇ ಅಜಾಗರೂಕತೆಯಿಂದ ಚಾಲನೆ ಮಾಡುವುದರಿಂದ ಪ್ರಾಣ ಹಾನಿ ಸಂಭವಿಸುವ ಅಪಾಯವಿರುತ್ತದೆ. ವಾಹನ ಸವಾರರು ಅದರಲ್ಲೂ ಯುವಕರು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಜೀವ ಮತ್ತು ಜೀವನ ಅಮೂಲ್ಯವಾದುದು. ಇದನ್ನು ಅರಿತುಕೊಳ್ಳಬೇಕು’ ಎಂದರು.

‘ಬೈಕ್ ಚಾಲನೆ ವೇಳೆ ತಲೆಗೆ ಪೆಟ್ಟಾಗಿ ಮೃತಪಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಹೆಲ್ಮೆಟ್ ಧರಿಸದಿರುವುದೇ ಮುಖ್ಯ ಕಾರಣ. ನಿಮ್ಮ ಮನೆಯವರು ಹಾಗೂ ನಿಮ್ಮನ್ನು ನಂಬಿದವರಿಗೋಸ್ಕರ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಅಪ್ರಾಪ್ತರು ವಾಹನ ಚಾಲನೆ ಮಾಡಿದರೆ ಪೋಷಕರಿಗೆ ಅಥವಾ ವಾಹನಗಳ ಮಾಲೀಕರಿಗೆ ₹25 ಸಾವಿರ ದಂಡ ವಿಧಿಸಲಾಗುತ್ತದೆ’ ಎಂದು ಪಿಎಸ್‌ಐ ಎಂ.ಎಚ್. ನವೀನ್ ತಿಳಿಸಿದರು. 

ಇದೇ ಸಂದರ್ಭದಲ್ಲಿ ಹೆಲ್ಮೆಟ್ ಧರಿಸದಿದ್ದರೆ ಉಂಟಾಗಬಹುದಾದ ಹಾನಿಯ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು.

ಎಎಸ್‌ಐ ಧರ್ಮರಾಜ್,‌ ಪೊಲೀಸ್ ಸಿಬ್ಬಂದಿ ಸೋಮಾನಾಯ್ಕ್, ರಾಜು ನಾಯ್ಕ್, ಆರ್. ಗಿರೀಶ್, ಹನುಮಂತಪ್ಪ, ದಿನೇಶ್ ಕುಮಾರ್, ಇರ್ಶಾದ್ ಖಾನ್, ಡಿ. ಸೋಮಶೇಖರ, ಸಿ.ವಿ. ಉಮೇಶ್, ಕಿರಣ್‌ಕುಮಾರ್, ಸಿ.ಬಿ. ರವೀಂದ್ರ ಸೇರಿದಂತೆ ಸಾರ್ವಜನಿಕರು, ಆಟೊ ಚಾಲಕರು, ವಿದ್ಯಾರ್ಥಿಗಳು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.