ಸೊರಬ: ತಾಲ್ಲೂಕಿನ ಜಡೆ ಗ್ರಾಮದ ಬಸವ ಪುತ್ಥಳಿಯ ಮುಂಭಾಗ ಭಾನುವಾರ ಬಸವ ಜಯಂತ್ಯುತ್ಸವ ಕಾರ್ಯಕ್ರಮವನ್ನು ಸರಳವಾಗಿ ಆಚರಿಸುವ ಜತೆಗೆ ಜೋಡಿಯೊಂದು ಸರಳವಾಗಿ ವಿವಾಹವಾಗುವ ಮೂಲಕ ಸಮಾಜಕ್ಕೆ ಮಾದರಿಯಾಗಿದೆ.
ಬಸವ ಜಯಂತಿ ಆಚರಿಸಿದ ಬಳಿಕ ಇಲ್ಲಿನ ವಿಠೋಬರಾವ್ ಉರಣಕರ್ ಅವರ ಪುತ್ರಿ ಸವಿತಾ ವಿ. ಉರಣಕರ್ ಅವರ ವಿವಾಹವು ಹೊನ್ನಾಳಿಯ ಎಚ್.ಪಿ. ಕಾಂತೇಶ್ ಅವರೊಂದಿಗೆ ಸರಳವಾಗಿ ನಡೆಯಿತು. ಈ ವೇಳೆ ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಳ್ಳಲಾಗಿತ್ತು.
ಸಾನ್ನಿಧ್ಯ ವಹಿಸಿದ್ದ ಜಡೆ ಸಂಸ್ಥಾನ ಮಠದ ಡಾ. ಮಹಾಂತ ಸ್ವಾಮೀಜಿ, ‘ಸಮಾಜದ ತಾರತಮ್ಯ, ಅನಿಷ್ಟತೆಗಳ ವಿರುದ್ಧ ಬಸವಣ್ಣನವರು ನಡೆಸಿದ ಹೋರಾಟ ಸ್ಮರಣೀಯ. ಬಸವ ಜಯಂತಿ ಆಚರಣೆಯ ಜತೆಗೆ ಬಸವೇಶ್ವರ ಪುತ್ಥಳಿಯ ಮುಂಭಾಗ ಜೋಡಿಯೊಂದು ಸರಳ ವಿವಾಹವಾಗಿರುವುದು ಸಮಾಜಕ್ಕೆ ಮಾದರಿಯಾಗಿದೆ’ ಎಂದರು.
‘ಆಡಂಬರದ ಮದುವೆ ಮಾಡಿ ಅನಗತ್ಯ ಖರ್ಚಿಗೆ, ಸಾಲಕ್ಕೆ ಗುರಿಯಾಗುವುದಕ್ಕಿಂತ ಈ ರೀತಿಯ ಮದುವೆಗಳು ನಡೆದು ಜನರು ಪ್ರಗತಿ ಕಾಣಬೇಕು. ಸವಿತಾ ಹಾಗೂ ಕಾಂತೇಶ್ ಅವರ ವೈವಾಹಿಕ ಜೀವನ ಸುಖಮಯವಾಗಿರಲಿ’ ಎಂದು ಶುಭ ಹಾರೈಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಶಿವಲಿಂಗಗೌಡ ಬಸವ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಎಪಿಎಂಸಿ ಮಾಜಿ ಅಧ್ಯಕ್ಷ ನಾಗರಾಜ ಗೌಡ, ಬಸವರಾಜ್, ಗಂಗಾಧರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.