ADVERTISEMENT

ಸೊರಬ: ‘ಅಗ್ನಿಶಾಮಕ’ ವಾಹನವೇ ಇಲ್ಲ!

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2025, 8:22 IST
Last Updated 27 ಏಪ್ರಿಲ್ 2025, 8:22 IST
ಸಣ್ಣ-ಪುಟ್ಟ ಅಗ್ನಿ ಅವಘಡ ಸಂಭವಿಸಿದಾಗ ಬಳಸಬಹುದಾದ ದ್ವಿಚಕ್ರ ವಾಹನ
ಸಣ್ಣ-ಪುಟ್ಟ ಅಗ್ನಿ ಅವಘಡ ಸಂಭವಿಸಿದಾಗ ಬಳಸಬಹುದಾದ ದ್ವಿಚಕ್ರ ವಾಹನ   

ಸೊರಬ: ಬೆಂಕಿ ಅವಘಡ, ಪ್ರಾಕೃತಿಕ ವಿಕೋಪ ಅಥವಾ ಅಪಘಾತಗಳು ಸಂಭವಿಸಿದರೆ, ತಕ್ಷಣ ಸಾರ್ವಜನಿಕರ ಜೀವ ಹಾಗೂ ಆಸ್ತಿಪಾಸ್ತಿ ರಕ್ಷಣೆಗೆ ಧಾವಿಸುವುದು ಅಗ್ನಿಶಾಮಕ ದಳ. ಆದರೆ ತಾಲ್ಲೂಕಿನಲ್ಲಿ ತುರ್ತು ಪರಿಹಾರ ಕಾರ್ಯಾಚರಣೆ ನಡೆಸಲು ಅಗ್ನಿಶಾಮಕ ಠಾಣೆಯಲ್ಲಿ‌ ಜಲವಾಹನಗಳೇ ಇಲ್ಲ.

ತಾಲ್ಲೂಕಿನ ಅಗ್ನಿಶಾಮಕ ಠಾಣೆಯಲ್ಲಿ ಬೆಂಕಿ ನಂದಿಸುವ ವಾಹನಗಳು ಅಗತ್ಯ ಪ್ರಮಾಣದಲ್ಲಿ ಇಲ್ಲ. ಮೇಲಾಗಿ, ಇರುವ ಎರಡು ವಾಹನಗಳೂ ರಸ್ತೆಗಿಳಿಯುವಂತಿಲ್ಲ. ಕೇಂದ್ರ ಸರ್ಕಾರದ ಆದೇಶದನ್ವಯ 15 ವರ್ಷ ಹಳೆಯದಾದ ವಾಹನಗಳನ್ನು ಬಳಸುವಂತಿಲ್ಲ. ಇಲ್ಲಿನ ಎರಡು ವಾಹನಗಳ ಪೈಕಿ ಒಂದು ವಾಹನದ ನೋಂದಣಿ (ಆರ್‌.ಸಿ) ಅವಧಿ 2022ರಲ್ಲಿ, ಮತ್ತೊಂದರದ್ದು ಇದೇ ವರ್ಷ ರದ್ದಾಗಿದೆ. ಚಾಲನೆಗೆ ಯೋಗ್ಯವಿದ್ದರೂ ನಿಯಮದ ಪ್ರಕಾರ ಜಲವಾಹನಗಳನ್ನು ಬಳಸುವಂತಿಲ್ಲ. ಪರಿಣಾಮ ತಾಲ್ಲೂಕಿನಲ್ಲಿ ಬೆಂಕಿ ಆಕಸ್ಮಿಕ ಹಾಗೂ ಅವಘಡಗಳು ಸಂಭವಿಸಿದಾಗ ತುರ್ತು ರಕ್ಷಣೆಗೆ ಇಳಿಯಲು ವಾಹನಗಳು ಲಭ್ಯವಿಲ್ಲದೇ ಸಾರ್ವಜನಿಕರ ಜೀವ ಹಾಗೂ ಸಾರ್ವಜನಿಕ ಆಸ್ತಿ ರಕ್ಷಣೆ ಮಾಡಲು ಅಡ್ಡಿಯಾಗಿದೆ ಎನ್ನುತ್ತಾರೆ ಸ್ಥಳೀಯರು.

‘ದೊಡ್ಡ ಅವಘಡಗಳು ಸಂಭವಿಸಿದಾಗ ತಾಲ್ಲೂಕು ಕೇಂದ್ರದಲ್ಲಿ ಎರಡು ವಾಹನಗಳಿದ್ದರೂ ಸಾಕಾಗುವುದಿಲ್ಲ. ಆದರೇ ಬಳಕೆಗೆ ಒಂದೂ ವಾಹನ ಇಲ್ಲದಿದ್ದರೆ ಸಿಬ್ಬಂದಿ ಕಾರ್ಯಾಚರಣೆ ನಡೆಸುವುದಾದರೂ ಹೇಗೆ? ಹುಲ್ಲಿನ ಬಣವೆ, ಅಡಿಕೆ ತೋಟ, ಹುಲ್ಲುಗಾವಲು ಪ್ರದೇಶಕ್ಕೆ ಬೆಂಕಿ ಬಿದ್ದರೂ ಜಲವಾಹನ ಇಲ್ಲ ಎಂದಾದರೆ ಏನು ಗತಿ’ ಎಂದು ಪ್ರಶ್ನಿಸುತ್ತಾರೆ ಸ್ಥಳೀಯರಾದ ಡಾ.ಜ್ಞಾನೇಶ್.

ADVERTISEMENT

ಜಲವಾಹನಗಳು ಇಲ್ಲದ ಕಡೆಗಳಲ್ಲಿ ತಲಾ ಎರಡು ಬುಲೆಟ್ ವಾಹನಗಳನ್ನು ನೀಡಲಾಗಿದೆ. ಇಲ್ಲಿಯೂ ಎರಡು ಬುಲೆಟ್‌ ಮಾತ್ರ ಸದ್ಯ ಬಳಕೆಯಲ್ಲಿವೆ. ಇವುಗಳಿಂದ ಸಣ್ಣಪುಟ್ಟ ಅನಾಹುತಗಳನ್ನು ನಿಯಂತ್ರಿಸಬಹುದೇ ಹೊರತು ಅವುಗಳಿಂದ ದೊಡ್ಡ ಅವಘಡಗಳನ್ನು ನಿಯಂತ್ರಿಸಲಾಗದು ಎನ್ನುತ್ತಾರೆ ಸಮಾಜ ಸೇವಕ ಶಂಕರ್ ಶೇಟ್. 

‘ಇತ್ತೀಚೆಗಷ್ಟೆ ತಾಲ್ಲೂಕಿನ ಶೀಗೇಹಳ್ಳಿಯ ಅರಣ್ಯ ಪ್ರದೇಶದಲ್ಲಿ ಅಗ್ನಿ‌ ದುರಂತ ಸಂಭವಿಸಿ, 5 ಸಾವಿರಕ್ಕೂ ಹೆಚ್ಚು‌ ಸಸಿಗಳು ಸುಟ್ಟು ಕರಕಲಾಗಿದ್ದವು.‌ ಹಿರೇಶಕುನ ಗ್ರಾಮದಲ್ಲಿ ಮಂಜುನಾಥ್ ಅವರ ಅಡಿಕೆ ತೋಟಕ್ಕೆ‌ ಬೆಂಕಿ ತಗುಲಿ‌ ಸಾವಿರಾರು‌ ಅಡಿಕೆ ಗಿಡಗಳು ಬೆಂಕಿಗೆ ಆಹುತಿಯಾಗಿದ್ದವು’ ಎಂದು ಅವರು ಹೇಳಿದ್ದಾರೆ.  

ಸೊರಬ ಅಗ್ನಿಶಾಮಕ ದಳದಲ್ಲಿ ಪರವಾನಗಿ ರದ್ದಾಗಿರುವ ವಾಹನಗಳು
15 ವರ್ಷದ ಬಳಕೆ ಅವಧಿ ಮುಗಿದಿರುವ ಎರಡು ವಾಹನಗಳ ಪರವಾನಗಿ ನವೀಕರಣಕ್ಕೆ ಸರ್ಕಾರ ಹಾಗೂ ಇಲಾಖೆಗೆ ಮನವಿ ನೀಡಲಾಗಿದೆ. ವಾಹನ‌ ನೀಡುವಂತೆಯೂ ಕೇಳಲಾಗಿದೆ
ಮಹಬಲೇಶ್ವರ್. ಕೆ ಅಗ್ನಿಶಾಮಕ ಠಾಣಾಧಿಕಾರಿ. ಸೊರಬ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.