
ತೀರ್ಥಹಳ್ಳಿ: ಮಲೆನಾಡಿನ ಸಾಂಪ್ರದಾಯಿಕ ಅಡಿಕೆ ಬೆಳೆ ವಿಪರೀತ ಮಳೆ, ಎಲೆಚುಕ್ಕಿ, ಹಳದಿ ರೋಗ ಸೇರಿದಂತೆ ವಿವಿಧ ರೋಗಗಳಿಂದ ನೆಲಕಚ್ಚಿದೆ. ಅಡಿಕೆ ರೋಗ ನಿಯಂತ್ರಣ ಸಂಬಂಧ ಸಂಶೋಧನೆಗೆ ಕನಿಷ್ಟ ₹ 100 ಕೋಟಿ ತಕ್ಷಣ ಬಿಡುಗಡೆ ಮಾಡಬೇಕು ಎಂದು ಮಲೆನಾಡು ಸಂಘರ್ಷ ಕ್ರಿಯಾ ಸಮಿತಿ ಆಗ್ರಹಿಸಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಈಚೆಗೆ ಮನವಿ ಸಲ್ಲಿಸಿದರು.
ಸಂಶೋಧನೆ ಜೊತೆಗೆ ದೇಶಾವರಿ ಅಡಿಕೆ ತಳಿ ರಕ್ಷಣೆ ಮತ್ತು ವಿಶ್ವ ಮಾನ್ಯತೆ ನೀಡಲು ತಜ್ಞರ ಸಮಿತಿ ರಚಿಸಬೇಕು. ಆಹಾರ ಬೆಳೆ ಬೆಳೆಯಲು ಮೀಸಲಾಗಿರುವ ಜಲಾಶಯದ ನಾಲಾ ವಲಯದಲ್ಲಿ ಅಡಿಕೆ ಬೆಳೆಯುವುದನ್ನು ನಿಯಂತ್ರಿಸಬೇಕು. ಅಡಿಕೆ ಸಂಬಂಧಿತ ಸಹಾಯಧನ, ಪರಿಹಾರ, ಸಾಲ ಸೌಲಭ್ಯ ಇತ್ಯಾದಿಗಳಲ್ಲಿ ಬಯಲುನಾಡು ಮತ್ತು ಮಲೆನಾಡಿಗೆ ಪ್ರತ್ಯೇಕ ಮಾನದಂಡ ನೀಡಬೇಕೆಂದು ಒತ್ತಾಯಿಸಿದರು.
ಮಳೆ ಪ್ರಮಾಣ ಆಧರಿಸಿ ಪಶ್ಚಿಮಘಟ್ಟ ವ್ಯಾಪ್ತಿಯ ತಾಲ್ಲೂಕುಗಳನ್ನು ವಿಶೇಷ ಆರ್ಥಿಕ ವಲಯವನ್ನಾಗಿ ಮಾಡಬೇಕು. ಕಾಡುಪ್ರಾಣಿ ಹಾವಳಿಯಿಂದಾಗುವ ಹಾನಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಮಂಗಗಳ ನಿಯಂತ್ರಣಕ್ಕಾಗಿ ಪರಿಸರ ಸ್ನೇಹಿ ಯೋಜನೆಯನ್ನು ರೂಪಿಸಬೇಕು ಎಂದು ಆಗ್ರಹಿಸಿದ್ದಾರೆ. ಸಮಿತಿಯ ಸಚಾಲಕ ನೆಂಪೆ ದೇವರಾಜ್, ಪಡುವಳ್ಳಿ ಕಿಟ್ಟಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.