
ತೀರ್ಥಹಳ್ಳಿ: ಇಲ್ಲಿನ ಸರ್ಕಾರಿ ಜಯಚಾಮರಾಜೇಂದ್ರ (ಜೆ.ಸಿ) ಆಸ್ಪತ್ರೆಯಲ್ಲಿ ತುರ್ತು ಸಂದರ್ಭದಲ್ಲಿ ಆರೋಗ್ಯ ಸೇವೆಗಳು ಸರಿಯಾಗಿ ಲಭ್ಯವಾಗುತ್ತಿಲ್ಲ. ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿಂದ ಗರ್ಭಿಣಿಯರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಗ್ರಾಮೀಣ ಭಾಗದವರು ಹೆರಿಗೆಗಾಗಿ ಜೆ.ಸಿ ಆಸ್ಪತ್ರೆಯನ್ನೇ ನೆಚ್ಚಿಕೊಂಡಿದ್ದಾರೆ. ಇಲ್ಲಿ ಅರವಳಿಕೆ ತಜ್ಞರು ಇಲ್ಲದೇ ಇರುವುದರಿಂದ ಕ್ಲಿಷ್ಟಕರ ಹೆರಿಗೆಗಳಿಗೆ ಜಿಲ್ಲಾ ಆಸ್ಪತ್ರೆಗೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ.
ಪೂರ್ಣಾವಧಿಯ ಅರವಳಿಕೆ ತಜ್ಞರು ನೇಮಕಗೊಳ್ಳದ ಕಾರಣ ಹೊಳೆಹೊನ್ನೂರು, ಆನಂದಪುರದಿಂದ ಇಬ್ಬರನ್ನು ವಾರದ ಮಟ್ಟಿಗೆ ನಿಯೋಜನೆ ಮಾಡಲಾಗಿದೆ. ಇವರು ರಜೆ ಅಥವಾ ದೀರ್ಘಾವಧಿ ರಜೆಗೆ ಹೋದರೆ ಸೇವೆಯಲ್ಲಿ ವ್ಯತ್ಯಯವಾಗುತ್ತದೆ.
‘ಗ್ರಾಮೀಣ ಪ್ರದೇಶದ ಗರ್ಭಿಣಿಯರು ಜೆ.ಸಿ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ. ಇಲ್ಲೇ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದರಿಂದ ಅವರ ಎಲ್ಲಾ ಮಾಹಿತಿ ಇಲ್ಲಿನ ವೈದ್ಯರಿಗೆ ಚೆನ್ನಾಗಿ ಗೊತ್ತಿರುತ್ತದೆ. ಅವರೇ ಹೆರಿಗೆ ಮಾಡಿಸಿದರೆ ಯಾವುದೇ ತೊಂದರೆ ಎದುರಾಗುವುದಿಲ್ಲ ಎಂಬ ಬಲವಾದ ವಿಶ್ವಾಸ ಮಹಿಳೆಯರಲ್ಲಿದೆ. ಅರವಳಿಕೆ ತಜ್ಞರಿಲ್ಲ ಎಂಬ ಕಾರಣಕ್ಕೆ ಜಿಲ್ಲಾ ಆಸ್ಪತ್ರೆಗೆ ಕಳಿಸಿದರೆ ಅವರಲ್ಲಿ ಗೊಂದಲ ಹಾಗೂ ಭಯ ಸೃಷ್ಟಿಯಾಗುತ್ತದೆ’ ಎಂದು ನಾಗರಿಕರು ದೂರಿದ್ದಾರೆ.
‘ಅಪಘಾತದಂತಹ ತುರ್ತು ಸಂದರ್ಭದಲ್ಲೂ ಅರವಳಿಕೆ ತಜ್ಞರ ಅವಶ್ಯಕತೆ ಇರುತ್ತದೆ. ಆಗ ಗಾಯಾಳುಗಳಿಗೆ ಸರಿಯಾಗಿ ಚಿಕಿತ್ಸೆಯೇ ಸಿಗುವುದಿಲ್ಲ. ಇದನ್ನು ಪ್ರಶ್ನಿಸಿದರೆ ವೈದ್ಯರು ಮತ್ತು ಸಿಬ್ಬಂದಿ ರಂಪಾಟ ಮಾಡುತ್ತಾರೆ. ಸಕಾಲಕ್ಕೆ ಔಷಧೋಪಚಾರ ಸಿಗದೆಯೂ ರೋಗಿಗಳು ಪರದಾಡುವಂತಾಗಿದೆ’ ಎಂದು ಆರೋಪಿಸಿದ್ದಾರೆ.
‘ಸಿಬ್ಬಂದಿ ಕೊರತೆಯಿಂದ ಗ್ರಾಮೀಣ ಭಾಗದ ಕೆಲ ಆಸ್ಪತ್ರೆಗಳಲ್ಲಿನ ಸೇವೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಇದನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಸರಿಪಡಿಸಲು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಕೆ.ಟಿ.ಅನಿಕೇತ್ ತಿಳಿಸಿದ್ದಾರೆ.
ತಾಯಿ–ಮಗು ಆಸ್ಪತ್ರೆಗೆ ಬೇಡಿಕೆ
ತೀರ್ಥಹಳ್ಳಿಯಲ್ಲಿ ಸರಿಯಾಗಿ ಚಿಕಿತ್ಸೆ ಸಿಗದೇ ಇರುವುದರಿಂದ ಬಡ ಕುಟುಂಬದ ಗರ್ಭಿಣಿಯರು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಾಗುವುದು ಸಾಮಾನ್ಯವಾಗಿದೆ. ಇದನ್ನು ತಪ್ಪಿಸಲು ತೀರ್ಥಹಳ್ಳಿಯಲ್ಲೂ ತಾಯಿ–ಮಗು ಆಸ್ಪತ್ರೆ ಆರಂಭಿಸಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಇದೆ. ಈ ಬಗ್ಗೆ ತಾಲ್ಲೂಕು ಕೆಡಿಪಿ ಸಭೆಯಲ್ಲೂ ಬಹಳಷ್ಟು ಬಾರಿ ಚರ್ಚೆ ನಡೆದಿದೆ. ಈ ಕುರಿತ ಪ್ರಸ್ತಾವನೆ ನನೆಗುದಿಗೆ ಬಿದ್ದಿದೆ. ‘ಆಸ್ಪತ್ರೆ ಮಂಜೂರಾದರೆ ಈಗಿರುವ ಓರ್ವ ಸ್ತ್ರೀರೋಗ ತಜ್ಞರ ಮೇಲಿನ ಕಾರ್ಯಭಾರ ಕಡಿಮೆಯಾಗುತ್ತದೆ. ಹೆಚ್ಚುವರಿ ಸ್ತ್ರೀರೋಗ ತಜ್ಞರು ಸೇರಿದಂತೆ ಅರವಳಿಕೆ ಮಕ್ಕಳ ತಜ್ಞರ ಸೇವೆಯೂ ಜನರಿಗೆ ಸಿಗುತ್ತದೆ. ಜೊತೆಗೆ ಹೆಚ್ಚುವರಿ ಸಿಬ್ಬಂದಿ ನೇಮಕಕ್ಕೆ ಸಹಾಯವಾಗಲಿದೆ’ ಎಂದು ಪ್ರೇಮ್ ಯಡೂರು ಹೇಳುತ್ತಾರೆ.
ಗ್ರಾಮೀಣ ಆಸ್ಪತ್ರೆಗಳು ಸಂಜೆ ಬಂದ್
ಕನ್ನಂಗಿ ಕೋಣಂದೂರು ಸಮುದಾಯ ಆಸ್ಪತ್ರೆ ಮೇಗರವಳ್ಳಿ ಮಾಳೂರು ಕಟಗಾರು ಹಾರೋಗೊಳಿಗೆ ಸಾಲೂರು ಆಗುಂಬೆ ಅರಳಸುರಳಿ ಗುಡ್ಡೇಕೊಪ್ಪ ಹಾದಿಗಲ್ಲು ಹುಂಚದಕಟ್ಟೆ ಮಂಡಗದ್ದೆ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಬಹುತೇಕ ಎಲ್ಲಾ ಗ್ರಾಮೀಣ ಆಸ್ಪತ್ರೆಗಳು ಸಂಜೆ 4 ಗಂಟೆಯ ನಂತರ ಬಂದ್ ಆಗುತ್ತಿವೆ. ಹೀಗಾಗಿ ತುರ್ತು ಸಂದರ್ಭದಲ್ಲಿ 30 ರಿಂದ 40 ಕಿಲೋ ಮೀಟರ್ ದೂರದಿಂದ ಜೆ.ಸಿ. ಆಸ್ಪತ್ರೆಗೆ ರೋಗಿಗಳನ್ನು ಕರೆದೊಯ್ಯುವ ಅನಿವಾರ್ಯತೆ ಸೃಷ್ಟಿಯಾಗಿದೆ. ಹೆಚ್ಚಿನ ಚಿಕಿತ್ಸೆಯ ಅಗತ್ಯ ಬಿದ್ದರೆ 60 ಕಿ.ಮೀ. ದೂರದ ಶಿವಮೊಗ್ಗದ ಜಿಲ್ಲಾ ಆಸ್ಪತ್ರೆಗೆ ರವಾನಿಸಬೇಕು. ಇಷ್ಟರಲ್ಲಿ ರೋಗಿ ಮತ್ತು ಅವರ ಕಡೆಯವರು ಹೈರಾಣಾಗಿರುತ್ತಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.