ADVERTISEMENT

ಶಿವಮೊಗ್ಗ | ಗಾಂಧಿ ಪಾರ್ಕ್; ಆಟಿಕೆ ರೈಲು ಎಂಜಿನ್‌ನಲ್ಲಿ ಬೆಂಕಿ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 6:01 IST
Last Updated 9 ನವೆಂಬರ್ 2025, 6:01 IST
<div class="paragraphs"><p>ಶಿವಮೊಗ್ಗದ ಗಾಂಧಿಪಾರ್ಕ್‌ನಲ್ಲಿ ಶನಿವಾರ ಸಂಜೆ ಆಟಿಕೆ ರೈಲಿನ ಎಂಜಿನ್‌ನಲ್ಲಿ ದಟ್ಟೈಸಿದ್ದ ಹೊಗೆ</p></div>

ಶಿವಮೊಗ್ಗದ ಗಾಂಧಿಪಾರ್ಕ್‌ನಲ್ಲಿ ಶನಿವಾರ ಸಂಜೆ ಆಟಿಕೆ ರೈಲಿನ ಎಂಜಿನ್‌ನಲ್ಲಿ ದಟ್ಟೈಸಿದ್ದ ಹೊಗೆ

   

ಶಿವಮೊಗ್ಗ: ಇಲ್ಲಿನ ಮಹಾತ್ಮ ಗಾಂಧಿ ಪಾರ್ಕ್‌ನಲ್ಲಿರುವ ಪುಟ್ಟ ರೈಲಿನ ಎಂಜಿನ್‌ನಲ್ಲಿ ಶನಿವಾರ ಸಂಜೆ ಚಲಿಸುತ್ತಿರುವಾಗಲೇ ದಿಢೀರನೆ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಪ್ರಯಾಣಿಕರೊಬ್ಬರು ತೋರಿದ ಸಮಯ ಪ್ರಜ್ಞೆಯಿಂದ ಅರ್ಧ ಕಿ.ಮೀ ದೂರ ಚಲಿಸಿ ನಂತರ ಹಿಮ್ಮುಖವಾಗಿ ಬಂದ ರೈಲು ನಿಂತಿದೆ. ಅದೃಷ್ಟವಶಾತ್ ಯಾವುದೇ ಜೀವ ಹಾನಿಯಾಗಿಲ್ಲ.

‘ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಹೊಗೆ ದಟ್ಟೈಸುತ್ತಿದ್ದಂತೆಯೇ ಬಹಳಷ್ಟು ಪ್ರಯಾಣಿಕರು ಮಕ್ಕಳನ್ನು ಹೊತ್ತು ಬೋಗಿಯಿಂದ ಕೆಳಗೆ ಹಾರಿದರು. ಹಿಂದಿನ ಬೋಗಿಯಲ್ಲಿದ್ದ ಪ್ರಯಾಣಿಕರೊಬ್ಬರಿಗೆ ಎಂಜಿನ್‌ನ ತಾಂತ್ರಿಕತೆಯ ಬಗ್ಗೆ ಅರಿವು ಇತ್ತು. ಹೀಗಾಗಿ ಕೆಳಗೆ ಹಾರದಂತೆ ಉಳಿದ ಪ್ರಯಾಣಿಕರಿಗೆ ಧೈರ್ಯ ತುಂಬಿ ಹೊಗೆಯ ದಟ್ಟತೆ ನಡುವೆ ಎಂಜಿನ್ ಸ್ಥಗಿತಗೊಳಿಸುವಲ್ಲಿ ಯಶಸ್ವಿಯಾದರು’ ಎಂದು ಪ್ರಯಾಣಿಕ, ಭದ್ರಾವತಿ ತಾಲ್ಲೂಕು ದಾನವಾಡಿಯ ಗಿರೀಶ್ ಹೇಳಿದರು.

ADVERTISEMENT

‘ವಾರಾಂತ್ಯವಾಗಿದ್ದರಿಂದ ಶಿವಮೊಗ್ಗಕ್ಕೆ ಕುಟುಂಬದವರು, ಸಂಬಂಧಿಕರೊಂದಿಗೆ ಬಂದಿದ್ದೆವು. ರೈಲು ಚಾಲಕನ ಸೀಟ್‌ನಲ್ಲಿದ್ದವರು ಅನನುಭವಿಯಂತೆ ತೋರುತ್ತಿದ್ದರು. ಮೊಬೈಲ್‌ಫೋನ್‌ನಲ್ಲಿ ಮಾತಾಡುತ್ತಲೇ ಚಾಲನೆ ಮಾಡುತ್ತಿದ್ದ ಅವರು, ಬೆಂಕಿ ಕಾಣಿಸಿಕೊಂಡು ಹೊಗೆ ಹೆಚ್ಚುತ್ತಿದ್ದಂತೆಯೇ ಎಂಜಿನ್‌ನಿಂದ ಕೆಳಗೆ ಹಾರಿ ಓಡಿಹೋದರು’ ಎಂದು ಗಿರೀಶ್ ಘಟನೆ ವಿವರಿಸಿದರು.

‘ಪ್ರತಿಯೊಬ್ಬರೂ ತಲಾ ₹30 ಕೊಟ್ಟು ಟಿಕೆಟ್ ಕೊಂಡಿದ್ದೆವು. ಬೆಂಕಿ ಕಾಣಿಸಿಕೊಳ್ಳುತ್ತಲೇ ರೈಲಿನಲ್ಲಿದ್ದವರ ಕೂಗಾಟ ಜೋರಾಗಿತ್ತು. ಏನು ಸಮಸ್ಯೆ ಆಗಿತ್ತು ಎಂಬುದರ ಬಗ್ಗೆಯೂ ಅಲ್ಲಿದ್ದವರು ಮಾಹಿತಿ ಕೊಡಲಿಲ್ಲ. ಕೊನೆಗೆ ಮಹಾನಗರ ಪಾಲಿಕೆ ಎಂಜಿನಿಯರ್‌ಗೆ ಕರೆ ಮಾಡಿ ದೂರು ಕೊಟ್ಟಿದ್ದೇನೆ’ ಎಂದು ಗಿರೀಶ್ ಹೇಳಿದರು.

ಘಟನೆಯ ನಂತರ ಗಾಬರಿಗೊಂಡ ಪ್ರಯಾಣಿಕರು ಹಾಗೂ ರೈಲಿನ ನಿರ್ವಹಣೆ ನಿರತರ ನಡುವೆ ವಾಗ್ವಾದದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಬೆಂಕಿ ಹೊತ್ತಿಲ್ಲ ಹೊಗೆ ಆವರಿಸಿದೆ: ಮಾಯಣ್ಣಗೌಡ

‘ಗಾಂಧಿ ಪಾರ್ಕ್‌ನ ಆಟಿಕೆ ರೈಲಿಗೆ ಟ್ರ್ಯಾಕ್ಟರ್ ಎಂಜಿನ್ ಅಳವಡಿಸಲಾಗಿದೆ. ರೇಡಿಯೇಟರ್ ಹೀಟ್ ಆಗಿ ಹೊಗೆ ಆವರಿಸಿದೆ. ಬೆಂಕಿ ಹೊತ್ತಿಕೊಂಡಿಲ್ಲ. ಚಾಲಕನಿಗೆ ಬ್ರೇಕ್ ಹಾಕಲು ಆಗಿಲ್ಲ. ಕೆಳಗೆ ಹಾರಿ ಕಟ್ಟಿಗೆಯ ತುಂಡು ಅಡ್ಡ ಹಾಕಲು ಮುಂದಾಗಿದ್ದಾನೆ. ಓಡಿಹೋಗಿಲ್ಲ. ಪ್ರಯಾಣಿಕರು ತಪ್ಪು ತಿಳಿದಿದ್ದಾರೆ’ ಎಂದು ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ ಪ್ರತಿಕ್ರಿಯೆ ನೀಡಿದರು. ‘ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಸದ್ಯ ರೈಲನ್ನು ನಿಲ್ಲಿಸಲು ಹೇಳಿದ್ದೇನೆ. ಮೈಸೂರಿನ ನೈರುತ್ಯ ರೈಲ್ವೆ ವಿಭಾಗೀಯ ಕಚೇರಿಗೆ ಮಾಹಿತಿ ನೀಡಿದ್ದೇವೆ. ಅಲ್ಲಿಂದ ತಂತ್ರಜ್ಞರು ಬಂದು ಪರಿಶೀಲಿಸಿ ವರದಿ ಕೊಟ್ಟ ಮೇಲೆ ಮತ್ತೆ ರೈಲು ಓಡಾಟ ಆರಂಭಿಸಲಾಗುವುದು. ಅಗತ್ಯಬಿದ್ದರೆ ಹೊಸ ಎಂಜಿನ್ ಅಳವಡಿಸಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.