
ತುಮರಿ: ವಿಮಾ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹವಾಮಾನ ಆಧಾರಿತ ಬೆಳೆ ವಿಮೆ ಸೌಲಭ್ಯ ರೈತರಿಗೆ ಸಮರ್ಪಕವಾಗಿ ಬಾರದೇ ಅನ್ಯಾಯವಾಗಿದೆ ಎಂದು ರೈತರು ಬುಧವಾರ ಚನ್ನಗೊಂಡ ಗ್ರಾಮ ಪಂಚಾಯ್ತಿ ಎದುರು ಪ್ರತಿಭಟನೆ ನಡೆಸಿದರು.
ವಿಮಾ ಪಾವತಿಯಲ್ಲಿ ಆಗಿರುವ ಅನ್ಯಾಯ ಸರಿಪಡಿಸುವಂತೆ ರೈತರು ಗ್ರಾಮ ಪಂಚಾಯಿತಿ ಮೂಲಕ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಕರೂರು, ಬಾರಂಗಿ ಹೋಬಳಿ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಮಳೆ ಮಾಪನ ಕೇಂದ್ರಗಳು ಸುಸ್ಥಿತಿಯಲ್ಲಿಲ್ಲ, ಇದರಿಂದ ಗ್ರಾಮದಲ್ಲಿ ಬೀಳುವ ಮಳೆಯ ಪ್ರಮಾಣವನ್ನು ನಿಖರವಾಗಿ ಕಂಡು ಹಿಡಿಯಲು ಸಾಧ್ಯವಾಗುತ್ತಿಲ್ಲ. ಕಡಿಮೆ ಮಳೆ ಬೀಳುವ ಪ್ರದೇಶವನ್ನು ಆಧರಿಸಿ ಅಧಿಕಾರಿಗಳು ವರದಿ ನೀಡುವ ಮೂಲಕ ಬೆಳೆ ವಿಮೆ ಫಲಾನುಭವಿಗಳಿಗೆ ಅನ್ಯಾಯ ಮಾಡಿದ್ದಾರೆ ಎಂದು ರೈತರು ದೂರಿದ್ದಾರೆ.
ಬೇರೇ ಗ್ರಾಮಗಳಿಗೆ ಗರಿಷ್ಠ ವಿಮಾ ಮೊತ್ತ ಪಾವತಿಯಾಗಿದೆ. ಆದರೆ ಅಧಿಕ ಮಳೆ ಬೀಳುವ ಚನ್ನಗೊಂಡ ಗ್ರಾಮ ಪಂಚಾಯಿತಿಯನ್ನು ಇದರಿಂದ ಕೈರಬಿಟ್ಟಿರುವುದು ಅವೈಜ್ಞಾನಿಕ. ಅಕ್ಕಪಕ್ಕದ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬಿದ್ದ ಮಳೆಯ ಪ್ರಮಾಣ ಆಧರಿಸಿ ವಿಮಾ ಮೊತ್ತ ನಿಗದಿಪಡಿಸಬೇಕಿದೆ. ಆದರೆ, ಅತಿ ಕಡಿಮೆ ಮಳೆ ಬಿದ್ದ ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಿಕೊಂಡ ಪರಿಣಾಮ, ಚನ್ನಗೊಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರಿಗೆ ಅತ್ಯಂತ ಕಡಿಮೆ ವಿಮಾ ಮೊತ್ತ ನಿಗದಿಪಡಿಸಿದ್ದು, ರೈತರಿಗೆ ಸಮರ್ಪಕವಾಗಿ ಹಣ ಪಾವತಿ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಸ್ಥಳಿಯ ಶಾಸಕರು ಇತ್ತ ಗಮನ ಹರಿಸಿ ರೈತರಿಗೆ ಆಗಿರುವ ಲೋಪ ಸರಿಪಡಿಸಿ ಸಮರ್ಪಕವಾಗಿ ಬೆಳೆ ವಿಮೆ ಪಾವತಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಯೋಗರಾಜ ಯಮಗಳಲೆ, ಪದ್ಮರಾಜ ಹೊಸಮನೆ, ಶೇಖರಪ್ಪ, ಪಾರ್ಶ್ವನಾಥ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.