
ಶಿವಮೊಗ್ಗ: ‘ವಿಶ್ವವಿದ್ಯಾಲಯಗಳು ಮುಕ್ತ ವಿಚಾರದ ನೆಪದಲ್ಲಿ ಮತೀಯವಾಗಬಾರದು’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ತಿಳಿಸಿದರು.
ಇಲ್ಲಿನ ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯ ದಲ್ಲಿ ಬುಧವಾರ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.
‘ಯಾವುದೇ ವಿಶ್ವವಿದ್ಯಾಲಯ ವಿರಲಿ. ಮುಕ್ತವಾಗಿ ಬೇರೆ ಬೇರೆ ವಿಚಾರಗಳನ್ನು ಪ್ರಸ್ತಾಪಿಸಿದರೂ ಅಂತಿಮವಾಗಿ ಅದು ಮತೀಯವಾಗದಂತೆ ನೋಡಿಕೊಳ್ಳಬೇಕು. ಅಂತಹ ವಾತಾವರಣ ನಿರ್ಮಾಣ ಮಾಡಬೇಕು. ಇದು ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿ’ ಎಂದು ಹೇಳಿದರು.
‘ಒಂದು ವಿಚಾರದ ಬಗ್ಗೆ ನಿರ್ದಿಷ್ಟ ನಿಲುವು ಇರಬೇಕು. ಯು.ಆರ್.ಅನಂತಮೂರ್ತಿ ಅವರೂ ಇದನ್ನೇ ಹೇಳಿದ್ದರು. ಬೇರೆಯವರ ವಿಚಾರ ಕೇಳಬಾರದು ಎಂದಲ್ಲ. ಅದನ್ನು ಕೇಳುವಾಗ ಮಕ್ಕಳ ಮೇಲೆ ಏನು ಪರಿಣಾಮ ಬೀರಬಹುದು ಎಂಬುದನ್ನು ಯೋಚಿಸಿ ಕಾರ್ಯಕ್ರಮ ಗಳನ್ನು ಆಯೋಜಿಸಬೇಕು’ ಎಂದು ಕುಲಪತಿ ಶರತ್ ಅನಂತಮೂರ್ತಿ ಅವರಿಗೆ ಸಲಹೆ ನೀಡಿದರು.
‘ಸುಂದರವಾದ ಸುಳ್ಳನ್ನು ಜನರು ಬೇಗ ನಂಬಿ ಬಿಡುತ್ತಾರೆ. ಸುಳ್ಳಿಗೆ ಸಾಕ್ಷಿ ಬೇಕಿಲ್ಲ. ಸತ್ಯಕ್ಕೆ ಸಾಕ್ಷಿ ಕೇಳುವ ಕಾಲ ಇದು. ಹಾಗಾಗಿ ವಿಚಾರಗಳನ್ನು ಅರ್ಥಮಾಡಿಕೊಳ್ಳುವುದರಲ್ಲಿ ಮುಕ್ತವಾಗಿರೋಣ. ಅದನ್ನು ಪ್ರತಿಪಾದಿಸು ವಲ್ಲಿ ನಮಗೊಂದು ನಿರ್ದಿಷ್ಠತೆ ಇರಬೇಕು’ ಎಂದರು.
ವಿಶ್ವವಿದ್ಯಾಲಯದಲ್ಲಿ ಮಂಗಳವಾರ ‘ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ’ ಕುರಿತು ನಡೆದಿದ್ದ ವಿಚಾರ ಸಂಕಿರಣ ವಿವಾದದ ಸ್ವರೂಪ ಪಡೆದಿತ್ತು. ಇದನ್ನು ವಿರೋಧಿಸಿ ದಲಿತ ಸಂಘಟನೆಗಳು ಪ್ರತಿಭಟಿಸಿದ್ದವು. ಈ ಕುರಿತು ಪರೋಕ್ಷವಾಗಿ ಬರಗೂರು ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.