ADVERTISEMENT

ಜೀವ ಉಳಿಸಿದ ನಾಯಿಗಳು !

ಮಹಿಳೆ ಮೇಲೆ ಕರಡಿ ದಾಳಿ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2013, 8:17 IST
Last Updated 7 ಸೆಪ್ಟೆಂಬರ್ 2013, 8:17 IST

ತೋವಿನಕೆರೆ:  ಆ ಮಹಿಳೆ ಕಣ್ಣಲ್ಲಿ ಭಯ ಎದ್ದು ಕಾಣುತ್ತಿತ್ತು. ಆ ಘಟನೆ ಬಗ್ಗೆ ಹೇಳುವ ತವಕ ಎದ್ದು ಕಾಣುತ್ತಿದ್ದರೂ ನೆನೆಸಿಕೊಂಡರೆ ಈ ಕ್ಷಣದಲ್ಲೂ ಹಣೆಯ ಮೇಲೆ ಪ್ರಾಣ ಭಯದ ನೆರಿಗೆಗಳು ಮೂಡುತ್ತಿದ್ದವು. ಕರಡಿ ದಾಳಿಗೆ ಸಿಕ್ಕು, ಗಾಯಗೊಂಡ ಗಂಗಮ್ಮನ ಜೀವ ಗಟ್ಟಿಯಿತ್ತು. ಆಕೆಯೇ ಹೇಳುವಂತೆ ದೇವರು ನಾಯಿಯ ರೂಪದಲ್ಲಿ ಬಂದು ಕಾಪಾಡಿದ.

ತುಮಕೂರು ತಾಲ್ಲೂಕು ಗಂಗಲಾಲ ಗ್ರಾಮಕ್ಕೆ ಶುಕ್ರವಾರ ಗಂಗಮ್ಮ ಕುರಿ ಮೇಯಿಸಲು ಬಂದಿದ್ದರು. ಜತೆಯಲ್ಲೆ ಕುಟುಂಬದವರೂ ಇದ್ದರು. ಬೆಳಗಿನ ಕೆಲಸಗಳನ್ನು ಮುಗಿಸಿ ಕುರಿ ರೊಪ್ಪದಿಂದ ಸ್ವಲ್ಪ ದೂರ ತೆರಳಿದರು. ಆಗ ಹಠಾತ್ತನೆ ಕರಡಿ ದಾಳಿ ಮಾಡಿದೆ.

ಗಾಬರಿಯಾದ ಗಂಗಮ್ಮ ಚೀರಾಡಿದ್ದಾರೆ. ಇದನ್ನು ಕೇಳಿ ಯಾರಾದರೂ ಕುಟುಂಬದವರು ಬರಬಹುದು ಎಂದು ಆಕೆ ಭಾವಿಸಿದ್ದರು. ಆದರೆ ಬಂದದ್ದು ಎರಡು ನಾಯಿಗಳು. ಮಹಿಳೆ ಮೇಲೆ ದಾಳಿ ಮಾಡುತ್ತಿದ್ದ ಕರಡಿಯೊಂದಿಗೆ ನಾಯಿಗಳು ಜೀವದ ಹಂಗು ತೊರೆದು ಕಾದಾಡಿವೆ. ಕಡೆಗೆ ನಾಯಿಗಳ ದಾಳಿಗೆ ಬೆದರಿದ ಕರಡಿ ಪಲಾಯನ ಮಾಡಿದೆ.

`ನಾಯಿಗಳು ಬರದೆ ಇದ್ದರೆ ಆ ಕರಡಿ ನನ್ನ ಪ್ರಾಣವನ್ನೇ ತೆಗೆಯುತ್ತಿತ್ತು' ಎಂದು ಗಂಗಮ್ಮ ಕೃತಜ್ಞತಾ ಭಾವದಿಂದ ಕಣ್ಣೀರಿಟ್ಟರು. ಮಹಿಳೆಗೆ ತೋವಿನಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿಗೆ ಕಳುಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.