ADVERTISEMENT

ತುಮಕೂರು ಕ್ಷೇತ್ರದ ಸಮೀಕ್ಷೆ ತರಿಸಿಕೊಂಡ ಅಮಿತ್ ಶಾ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2019, 19:58 IST
Last Updated 19 ಮಾರ್ಚ್ 2019, 19:58 IST
   

ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಯಾರಾಗಬೇಕೆಂಬ ಬಗ್ಗೆ ಬಿಜೆಪಿಯಲ್ಲಿ ಗೊಂದಲ ಮುಂದುವರೆದಿದ್ದು, ಈವರೆಗೂ ಸ್ಪಷ್ಟ ಅಭಿಪ್ರಾಯಕ್ಕೆ ಬರಲಾಗಿಲ್ಲ ಎಂದು ಆ ಪಕ್ಷದ ಮೂಲಗಳು ತಿಳಿಸಿವೆ.

ರಾಜ್ಯ ಪ್ರಮುಖರ (ಕೋರ್) ಸಮಿತಿಯಿಂದ ಜಿ.ಎಸ್.ಬಸವರಾಜ್, ಬಿ.ಸುರೇಶಗೌಡ ಹಾಗೂ ಎಂ.ಆರ್.ಹುಲಿನಾಯ್ಕರ್ ಅವರ ಹೆಸರುಗಳನ್ನು ಕಳುಹಿಸಲಾಗಿದೆ. ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿ ಘೋಷಣೆಯಾಗದ ಕಾರಣ ಪಕ್ಷ ಯಾರನ್ನು ಕಣಕ್ಕೆ ಇಳಿಸಬೇಕೆಂಬ ಬಗ್ಗೆ ಅಳೆದು ತೂಗಿ ನೋಡುತ್ತಿದೆ ಎಂದು ಮುಖಂಡರೊಬ್ಬರು ತಿಳಿಸಿದರು.

ಪಕ್ಷ, ಸಂಘ ಪರಿವಾರ ಹಾಗೂ ಮೂರನೇ ವ್ಯಕ್ತಿಗಳಿಂದ ನಡೆಸಿರುವ ಸಮೀಕ್ಷೆ ಆಧರಿಸಿ ಟಿಕೆಟ್ ನೀಡುವ ಕುರಿತೂ ಚರ್ಚೆಯಾಗುತ್ತಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಮೂರು ಸಮೀಕ್ಷೆಗಳ ವರದಿಯನ್ನು ತರಿಸಿಕೊಂಡಿದ್ದಾರೆ. ಅವರ ನಿರ್ಧಾರದ ಮೇಲೆ ಯಾರಿಗೆ ಟಿಕೆಟ್ ಎಂಬುದು ತೀರ್ಮಾನವಾಗಲಿದೆ ಎಂದರು.

ADVERTISEMENT

ಜಾತಿ ಆಧಾರದಲ್ಲಿ ಲಿಂಗಾಯತ, ಒಕ್ಕಲಿಗರು, ಕುರುಬರು– ಇವರಲ್ಲಿ ಯಾರಿಗೆ ಕೊಟ್ಟರೆ ಲಾಭ ಎಂಬ ಲೆಕ್ಕಾಚಾರವೂ ಇದೆ. ಆದರೆ ಸಮೀಕ್ಷೆಗಳ ಮತದಾರರ ಒಲವು ಉಳ್ಳವರಿಗೆ ಟಿಕೆಟ್ ನೀಡಿದರೆ ಗೆಲ್ಲಬಹುದು. ಜೆಡಿಎಸ್- ಕಾಂಗ್ರೆಸ್ ಎರಡೂ ಪಕ್ಷಗಳು ಒಂದಾಗಿ ಅಭ್ಯರ್ಥಿ ನಿಲ್ಲಿಸುತ್ತಿರುವುದರಿಂದ ಸಮೀಕ್ಷೆ ಆಧರಿಸಿಯೇ ಅಮಿತ್ ಶಾ ಟಿಕೆಟ್ ನಿರ್ಧರಿಸಬಹುದು ಎಂದು ಅವರು ಹೇಳಿದರು.

ಬಸವರಾಜ್ ಅಥವಾ ಸುರೇಶ್ ಗೌಡ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ನೀಡುವುದು ಖಚಿತ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.