ADVERTISEMENT

ಮುಖ್ಯವಾಹಿನಿಯಲ್ಲಿ ಇಲ್ಲದವರ ಮಾಹಿತಿ ಸಂಗ್ರಹಿಸಿ

ಮತಗಟ್ಟೆ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೂಚನೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2018, 7:37 IST
Last Updated 15 ಮಾರ್ಚ್ 2018, 7:37 IST
ಸಭೆಯಲ್ಲಿ ಅನೀಸ್ ಕಣ್ಮಣಿ ಜಾಯ್ ಮಾತನಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಅನಿತಾ ಇದ್ದರು
ಸಭೆಯಲ್ಲಿ ಅನೀಸ್ ಕಣ್ಮಣಿ ಜಾಯ್ ಮಾತನಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಅನಿತಾ ಇದ್ದರು   

ತುಮಕೂರು: ಇಲ್ಲಿಯವರೆಗೂ ಚುನಾವಣಾ ಮುಖ್ಯ ವಾಹಿನಿಯಿಂದ ಹೊರಗೆ ಉಳಿದಿರುವ ‌ಅಂಗವಿಕಲರು, ಲೈಂಗಿಕ ಅಲ್ಪಸಂಖ್ಯಾತರು, ಅಲೆಮಾರಿಗಳು, ಬುಡಕಟ್ಟು ಜನಾಂಗದವರನ್ನು ಚುನಾವಣಾ ಪ್ರಕ್ರಿಯೆಯಒಳಗೆ ಸೇರಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಮತಗಟ್ಟೆ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಬುಧವಾರ ನಡೆದ ತುಮಕೂರು ಉಪವಿಭಾಗದ ಮತಗಟ್ಟೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದ ಅನ್ವಯ ಪ್ರತಿ ಮತಗಟ್ಟೆ ವ್ಯಾಪ್ತಿಯ ಅಂಗವಿಕಲ ಮತದಾರರ ವೈಕಲ್ಯದ ಸ್ವರೂಪ, ಲೈಂಗಿಕ ಅಲ್ಪಸಂಖ್ಯಾತರ ಮಾಹಿತಿ, ಕಾಲೇಜು ರಾಯಭಾರಿಗಳ ನೇಮಕ ಹೀಗೆ ಹಲವು ಕಾರ್ಯಗಳು ಮತ್ತು ಮಾಹಿತಿಗಳನ್ನು ಅಧಿಕಾರಿಗಳು ಶೀಘ್ರ ಸಂಗ್ರಹಿಸಿ ಸಲ್ಲಿಸಬೇಕು ಎಂದರು.

ADVERTISEMENT

‘ಈ ಬಾರಿ ಆಯೋಗವು ಎಲ್ಲರನ್ನೂ ಒಳಗೊಂಡು ಚುನಾವಣೆ ನಡೆಸುವ ಧ್ಯೇಯ ಹೊಂದಿದೆ. ಮತದಾರರ ಪಟ್ಟಿಯಲ್ಲಿ ಸೇರದ ಅಂಗವಿಕಲರನ್ನು ಸೇರ್ಪಡೆ ಮಾಡಿಸುವುದು ನಿಮ್ಮ ಜವಾಬ್ದಾರಿ. ಅಂಗವಿಕಲ ಮತದಾರರ ವೈಕಲ್ಯದ ಸ್ವರೂಪದ ಮಾಹಿತಿ ನೀಡಬೇಕಾಗಿದೆ’ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಉಪವಿಭಾಗಾಧಿಕಾರಿ ತಿಪ್ಪೇಸ್ವಾಮಿ ಮಾತನಾಡಿ,  ಅಧಿಕಾರಿಗಳು ಮತಗಟ್ಟೆಗಳ ಮೂಲ ಸೌಕರ್ಯಗಳ ಬಗ್ಗೆ ಮಾಹಿತಿ ನೀಡಬೇಕು. ಪ್ರತಿ ಮತಗಟ್ಟೆಯ ವ್ಯಾಪ್ತಿಯಲ್ಲಿ ಜಾಗೃತ ಸಮಿತಿಗಳನ್ನು ರಚಿಸಿ ಈ ಬಗ್ಗೆ ಎರಡು ದಿನಗಳ ಒಳಗೆ ಮಾಹಿತಿ ಸಲ್ಲಿಸಬೇಕು ಎಂದು ಹೇಳಿದರು.

ಪಿಯುಸಿ, ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿ ರಾಯಭಾರಿಗಳನ್ನು ನೇಮಿಸಲು ಪ್ರಕ್ರಿಯೆಗಳನ್ನು ಆರಂಭಿಸಲಾಗಿದೆ. ಈ ಸಂಬಂಧ ನಿಮ್ಮ ಮತಗಟ್ಟೆ ವ್ಯಾಪ್ತಿಯ ಸರ್ಕಾರಿ ಪಿಯುಸಿ ಹಾಗೂ ಪದವಿ ಕಾಲೇಜುಗಳ ಪ್ರಾಂಶುಪಾಲರನ್ನು ಸಂಪರ್ಕಿಸಿ ಎಂದು ಮತಗಟ್ಟೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಜ್‌ಕುಮಾರ್, ತಹಶೀಲ್ದಾರ್ ರಂಗೇಗೌಡ, ನಿರ್ಮಿತಿ ಕೇಂದ್ರದ ರಾಜಶೇಖರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.