ತುಮಕೂರು: ವೈಕುಂಠ ಏಕಾದಶಿ ಪ್ರಯುಕ್ತ ಮಂಗಳವಾರ ತುಮಕೂರುನಗರ ಸೇರಿದಂತೆ ಜಿಲ್ಲೆಯ ವಿವಿಧ ಕಡೆ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನ ಹಾಗೂ ಇತರ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆದವು.
ಏಕಾದಶಿ ಪ್ರಯುಕ್ತ ದೇವಾಲಯಗಳನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿತ್ತು. ಬೆಳಿಗ್ಗೆಯಿಂದಲೇ ಹೋಮ, ಹವನ, ಅಭಿಷೇಕ ನಡೆಯಿತು.
ತುಮಕೂರಿನ ಬಟವಾಡಿ ಎಪಿಎಂಸಿ ಎದುರಿನ ಮಹಾಲಕ್ಷ್ಮಿ ಬಡಾವಣೆಯಲ್ಲಿರುವ ವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ವೆಂಕಟೇಶ್ವರ ಸ್ವಾಮಿ ಉತ್ಸವ ಮೂರ್ತಿ ಮೆರವಣಿಗೆ ನಡೆಯಿತು. ಶಯನೋತ್ಸವ ನಡೆಯಿತು. ಈ ಬಾರಿ 15ನೇ ವರ್ಷದ ವೈಕುಂಠ ಏಕಾದಶಿ ವೈಭದಲ್ಲಿ ವಿಶೇಷ ಪೂಜೆಯನ್ನು ಆಗಮಿಕರು ನಡೆಸಿಕೊಟ್ಟರು.
ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೂ ದೇವಸ್ಥಾನಕ್ಕೆ ಬಂದ ಭಕ್ತರಿಗೆ ಲಡ್ಡು ಪ್ರಸಾದ, ಅವಲಕ್ಕಿ ಪುಳಿಯೊಗರೆ ವಿತರಣೆ ವ್ಯವಸ್ಥೆಯನ್ನು ದೇವಸ್ಥಾನ ಟ್ರಸ್ಟ್ ಮಾಡಿತ್ತು.
ಗಮನ ಸೆಳೆದ ಅಲಂಕಾರ: ದೇವಸ್ಥಾನವನ್ನು ಬಣ್ಣ ಬಣ್ಣದ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಅಲ್ಲದೇ ವೆಂಕಟೇಶ್ವರ ಸ್ವಾಮಿಗೆ ವಜ್ರ ಕಿರೀಟ ಹಾಗೂ ವಜ್ರ ಶಂಖ ಚಕ್ರ ವಿಶೇಷ ಅಲಂಕಾರ ಭಕ್ತರ ಗಮನ ಸೆಳೆಯಿತು. ದೇವರ ನಾಮ ಮತ್ತು ಭಜನೆ ಕಾರ್ಯಕ್ರಮಗಳೂ ನಡೆದವು.
ಶಿರಾ ಗೇಟ್ ಬಡಾವಣೆಯ ವೆಂಕಟೇಶ್ವರ ದೇವಸ್ಥಾನ, ಜಯನಗರದ ಪದ್ಮಾವತಿ ವೆಂಕಟೇಶ್ವರ ದೇವಸ್ಥಾನಗಳಲ್ಲೂ ಭಕ್ತರು ಸಾಲುಗಟ್ಟಿ ನಿಂತು ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಅಲ್ಲದೇ, ನಗರದ ಬಿ.ಎಚ್.ರಸ್ತೆಯ ಟಿ.ಜಿ.ಎಂ.ಸಿ ಬ್ಯಾಂಕ್ ಪಕ್ಕದ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಶಯನೋತ್ಸವ, ಪದ್ಮಾವತಿ, ಭೂದೇವಿ, ವೆಂಕಟೇಶ್ವರ ಸ್ವಾಮಿಯ ಮೂರ್ತಿಗಳನ್ನು ಅಲಂಕೃತ ಮಂಟಪದಲ್ಲಿರಿಸಿ ಭಕ್ತರಿಗೆ ದರ್ಶನ ಮಾಡಲು ವ್ಯವಸ್ಥೆ ಮಾಡಲಾಗಿತ್ತು.
ಎಸ್ಐಟಿ ಬಡಾವಣೆ ಕೃಷ್ಣಾನಗರದ ಮಹಾಲಕ್ಷ್ಮಿ ದೇವಸ್ಥಾನ, ಬಿ.ಎಚ್. ರಸ್ತೆಯ ಆಂಜನೇಯ ದೇವಸ್ಥಾನ, ಭದ್ರಮ್ಮ ವೃತ್ತದ ಸೋಮೇಶ್ವರ ದೇವಸ್ಥಾನ, ಕೆ.ಆರ್. ಬಡಾವಣೆಯ ಶ್ರೀಕೃಷ್ಣಮಂದಿರ, ರಾಮಮಂದಿರ, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ, ವರ್ತುಲ ರಸ್ತೆಯ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಸೇರಿದಂತೆ ಅನೇಕ ಕಡೆ ವೈಕುಂಠ ಏಕಾದಶಿ ವಿಶೇಷ ಪೂಜೆ ನಡೆದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.