ಹುಳಿಯಾರು: ಕಾಡಿನಿಂದ ಮೊಲವನ್ನು ಹಿಡಿದು ತಂದು ಪೂಜಿಸಿ ಮತ್ತೆ ಕಾಡಿಗೆ ಬಿಡುವ ಮೂಲಕ ಹೋಬಳಿಯ ಸೀಗೆಬಾಗಿ ಗ್ರಾಮದಲ್ಲಿ ಮಂಗಳವಾರ ಸಂಕ್ರಾಂತಿ ಆಚರಿಸಲಾಯಿತು.
ಸುಗ್ಗಿ ಹಬ್ಬವಾದ ಸಂಕ್ರಾತಿಯನ್ನು ಬೇರೆ ಬೇರೆ ಭಾಗಗಳಲ್ಲಿ ಒಂದೊಂದು ರೀತಿ ಆಚರಿಸುತ್ತಾರೆ. ಆದರೆ ಹೋಬಳಿಯ ಸೀಗೆಬಾಗಿ ಗ್ರಾಮದಲ್ಲಿ ಮೊಲವೇ ಹಬ್ಬದ ಕೇಂದ್ರ ಬಿಂದು. ಎರಡು ದಿನಗಳ ವಿಜೃಂಭಣೆಯಿಂದ ಆಚರಣೆ ನಡೆಸಲಾಗುತ್ತದೆ.
350 ಮನೆಗಳಿರುವ ಗ್ರಾಮದಲ್ಲಿ ಸಂಕ್ರಾಂತಿಯನ್ನು ಗ್ರಾಮದ ಹಬ್ಬವಾಗಿ ಆಚರಿಸಲಾಗುತ್ತದೆ.ಹಬ್ಬಕ್ಕೆ ಇನ್ನೂ 3 ದಿನ ಇರುವಾಗಲೇ ಗ್ರಾಮಸ್ಥರು ಜೀವಂತ ಮೊಲವನ್ನು ಹಿಡಿಯಲು ಕಾಡಿಗೆ ತರಳುವರು. ಹಿಡಿದ ಮೊಲವನ್ನು ದೇಗುಲದಲ್ಲಿ ಇಡುವರು. ನಂತರ ಸಂಕ್ರಾಂತಿ ಹಬ್ಬದಂದು ಪೂಜೆ ಸಲ್ಲಿಸುವರು. ಮರು ದಿನ ಗ್ರಾಮದ ವರದರಾಜಸ್ವಾಮಿ, ಆಂಜನೇಯಸ್ವಾಮಿ ಸೇರಿದಂತೆ ವಿವಿಧ ದೇವರುಗಳ ಸಮ್ಮುಖದಲ್ಲಿ ಗ್ರಾಮದ ಊರ ಬಾಗಿಲಿಗೆ ಮೆರವಣಿಗೆ ಮೂಲಕ ಕರೆತಂದು ಬಿಡಲಾಗುತ್ತದೆ.
ಬಿಟ್ಟ ಮೊಲ ಯಾವ ದಿಕ್ಕಿಗೆ ಓಡುತ್ತದೆಯೋ ಆ ದಿಕ್ಕಿಗೆ ಉತ್ತಮ ಮಳೆ ಬೆಳೆಯಾಗುತ್ತದೆ ಎನ್ನುವ ನಂಬಿಕೆಯಿದೆ. ಒಂದು ವರ್ಷ ಬಿಟ್ಟ ಮೊಲ ಮತ್ತೆ ಸಿಕ್ಕಿದರೆ ಗ್ರಾಮಕ್ಕೆ ಒಳ್ಳೆಯದಾಗುತ್ತದೆ ಎಂಬ ಭಾವನೆ ಗ್ರಾಮಸ್ಥರಲ್ಲಿದೆ. ಕಾಂತರಾಜು, ಶಂಕರ್, ನಟರಾಜು, ವರದಯ್ಯ, ಮಧು, ತಮ್ಮಯ್ಯ, ಕೃಷ್ಣಯ್ಯ ಹಾಗೂ ಗ್ರಾಮಸ್ಥರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.