ತಿಪಟೂರು: ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಜನರ ಉಪಯೋಗಕ್ಕೆಂದು ಕಟ್ಟಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನ ಸ್ವಚ್ಛತೆ ಇಲ್ಲದೆ ಕಸದ ತೊಟ್ಟಿಯಂತಾಗಿದೆ. ಜೂಜಾಟ, ಮದ್ಯ ವ್ಯಸನಿಗಳ ತಾಣವಾಗಿ ಮಾರ್ಪಟ್ಟಿದೆ.
ಭವನ ಪುನರ್ನಿರ್ಮಾಣ ಮಾಡಲು ಟೆಂಡರ್ ಕರೆದು ಕೆಲ ದಿನ ಕಾಮಗಾರಿ ನಡೆಸಲಾಗಿದೆ. ಆದರೆ, ನಂತರ ಅದನ್ನು ಸಂಬಂಧಪಟ್ಟ ಇಲಾಖೆಯವರು ನಿರ್ವಹಣೆ ಮಾಡದೇ ಇರುವುದರಿಂದ ಶಿಥಿಲಾವಸ್ಥೆಗೆ ತಲುಪಿದೆ. ಭವನದ ಸುತ್ತ ಹಾಕಿರುವ ಕಾಂಪೌಂಡ್ ಬಿದ್ದು ಹೋಗಿದ್ದು, ಭವನದ ತಳ ಭಾಗದಲ್ಲಿ ಕೊಳಚೆ ನೀರು ನಿಂತು ದುರ್ವಾಸನೆ ಬೀರುತ್ತಿದೆ. ಜತೆಗೆ ಬೀದಿ ನಾಯಿಗಳು, ಹಂದಿಗಳ ವಾಸಸ್ಥಳವಾಗಿದೆ.
‘ಭವನದ ಮೇಲ್ಭಾಗವಂತೂ ಕಳಪೆ ಕಾಮಗಾರಿಯಿಂದ ಕಿತ್ತುಹೋಗಿದೆ. ಭವನದ ಮೂಲೆ ಮೂಲೆಗಳಲ್ಲಿ ಬಿದ್ದಿರುವ ಕಸದ ರಾಶಿ, ಜೂಜಾಟದ ಎಲೆಗಳು, ಮದ್ಯದ ಬಾಟಲಿಗಳು ರಸ್ತೆಯಲ್ಲಿ ಓಡಾಡುವ ಜನರಿಗೆ ಅಸಹ್ಯ ತರಿಸುತ್ತವೆ. ಮಹಾನುಭಾವರ ಹೆಸರಿನಲ್ಲಿ ಭವನಗಳು ನಿರ್ಮಾಣವಾಗುವಾಗ ಇರುವ ಖುಷಿ, ಅದರ ಬಿಲ್ ಮಾಡಿಕೊಂಡ ಮೇಲೆ ಅಧಿಕಾರಿಗಳಿಗಾಗಲಿ, ಜನಪ್ರತಿನಿಧಿಗಳಿಗಾಗಲಿ ಅದರ ಬಗ್ಗೆ ಗಮನವೇ ಹರಿಸುವುದಿಲ್ಲ’ ಎಂದು ಸಾರ್ವಜನಿಕರೊಬ್ಬರು ದೂರುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.