ತುಮಕೂರು: ಸಮಾಜದ ಎಲ್ಲ ವರ್ಗದ ಜನರಿಗೆ ಸಂವಿಧಾನದ ಮೂಲಕ ಸಾಮಾಜಿಕ ನ್ಯಾಯವನ್ನು ನೀಡುವ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಅವರು ಶ್ರೇಷ್ಠ ಭಾರತೀಯರಾಗಿ ಜನಮಾನಸದಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ರಾಕೇಶ್ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಹೊರವಲಯದಲ್ಲಿರುವ ಬುದ್ಧವಿಹಾರದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಭಗವಾನ್ ಬುದ್ಧರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆಂಗ್ಲ ಮಾಸ ಪತ್ರಿಕೆ ನಡೆಸಿದ ಸಮೀಕ್ಷೆಯಲ್ಲಿ ಜವಹರ್ಲಾಲ್ ನೆಹರೂ, ಇಂದಿರಾಗಾಂಧಿ, ಡಾ.ರಾಧಾಕೃಷ್ಣನ್, ಅಬ್ದುಲ್ ಕಲಾಂ ಅವರ ಹೆಸರುಗಳ ಆಧಾರದ ಮೇಲೆ ದೇಶದ ಗ್ರೇಟ್ ಇಂಡಿಯನ್ ಯಾರು ಎಂದು ಸಮೀಕ್ಷೆ ಮಾಡಲಾಗಿತ್ತು. ಡಾ.ಬಿ.ಆರ್.ಅಂಬೇಡ್ಕರ್ ಅವರು ನಮ್ಮ ದೇಶದ ಗ್ರೇಟ್ ಇಂಡಿಯನ್ ಎಂದೆನಿಸಿಕೊಂಡಿದ್ದಾರೆ ಎಂದರು.
ಅಂಬೇಡ್ಕರ್ ಅವರು ಎಲ್ಲ ವರ್ಗದ ಜನರಿಗೆ ಸಂವಿಧಾನದ ಮೂಲಕ ಸಾಮಾಜಿಕ ನ್ಯಾಯವನ್ನು ನೀಡಿದ್ದಾರೆ ಇದರೊಟ್ಟಿಗೆ ಬೌದ್ಧಿಕವಾಗಿ ಅತಿ ಹೆಚ್ಚು ಪುಸ್ತಕಗಳನ್ನು ಓದುವ ಮೂಲಕ ಭಾರತೀಯ ಬೌದ್ಧಿಕ ವಲಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಅಭಿಪ್ರಾಯ ಪಟ್ಟರು.
ಸುರೇಶ್ಗೌತಮ್ ಮಾತನಾಡಿ, ‘ಈಗಿರುವ ಸಂವಿಧಾನ ಡಾ.ಬಿ.ಆರ್.ಅಂಬೇಡ್ಕರ್ ಬಯಸಿದ್ದ ಸಂವಿಧಾನವಲ್ಲ. ಅವರು ಬರೆದಿರುವ ಸಂವಿಧಾನದಲ್ಲಿ ಅನೇಕ ಶ್ರೇಷ್ಠ ಅಂಶಗಳನ್ನು ಬಿಟ್ಟು ಅಂಗೀಕರಿಸಲಾಗಿದೆ. ಈ ಸಮಾಜದ ಎಲ್ಲ ವರ್ಗದ ಜನರಿಗೆ ನ್ಯಾಯವನ್ನು ಒದಗಿಸಿದ ಅಂಬೇಡ್ಕರ್ ಅವರನ್ನು ಮರೆತಿರುವುದು ದುರದೃಷ್ಟಕರ’ ಎಂದರು.
ಜೆ.ಪಿ.ದೇವರಾಜ್ ಮಾತನಾಡಿದರು. ಉಪಮೇಯರ್ ಬಿ.ಎಸ್.ರೂಪಶ್ರೀ ಶೆಟ್ಟಾಳಯ್ಯ, ಪಾಲಿಕೆ ಸದಸ್ಯೆ ಪ್ರಭಾವತಿ ಸುಧೀಶ್ವರ, ಡಾ.ಲಕ್ಷ್ಮಣದಾಸ್, ಭಾನುಪ್ರಕಾಶ್, ರಂಗಯ್ಯ, ಚಲವಾದಿ ಶೇಖರ್, ಜಿ.ಆರ್.ಸುರೇಶ್, ಮಂಜುನಾಥ್, ಲೋಕೇಶ್, ಮಾರುತಿಪ್ರಸಾದ್, ಸೋಮಶೇಖರ್, ಬಿ.ಪಿ.ಹನುಮಂತರಾಯಪ್ಪ, ಪಿ.ಜೆ.ಜಯಶೀಲ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.