
ಗುಬ್ಬಿ: ತಾಲ್ಲೂಕು ಚೇಳೂರು ಹೋಬಳಿ ಬಿದರೆ ಗ್ರಾಮದಲ್ಲಿ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು.
ನಿಜಶರಣ ಅಂಬಿಗರ ಚೌಡಯ್ಯ ಯುವಕ ಸಂಘ, ಲಕ್ಷ್ಮೀದೇವಿ, ಗಂಗಾ ಪರಮೇಶ್ವರಿ ದೇವಾಲಯ ಜೀರ್ಣೋದ್ಧಾರ ಸಮಿತಿ, ತಾಲ್ಲೂಕು ಬೆಸ್ತರ ಕ್ಷೇಮಾಭಿವೃದ್ಧಿ ಸಂಘದಿಂದ ಕಾರ್ಯಕ್ರಮ ನಡೆಯಿತು.
ಅಂಬಿಗರ ಚೌಡಯ್ಯ ಭಾವಚಿತ್ರವನ್ನು ಬೆಳ್ಳಿರಥದಲ್ಲಿ ಇಟ್ಟು ವಿವಿಧ ಜಾನಪದ ಕಲಾತಂಡ ಹಾಗೂ ಪೂರ್ಣಕುಂಭಗಳೊಂದಿಗೆ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು.
ತೊರೆಮಠದ ಅಟವಿ ಚೆನ್ನಬಸವ ಸ್ವಾಮೀಜಿ ಮಾತನಾಡಿ, ಅಂಬಿಗರ ಚೌಡಯ್ಯ ಬದುಕಿನ ಅನುಭವಗಳನ್ನು ವಚನಗಳಲ್ಲಿ ತಿಳಿಸಿದ್ದಾರೆ. ಅವರು ಕೇವಲ ಒಂದು ಜಾತಿಗೆ ಸೀಮಿತವಾಗಿಲ್ಲ. ಕಾಯಕದಲ್ಲಿ ಪ್ರಾಮಾಣಿಕತೆ ಹೊಂದಿದ್ದ ಚೌಡಯ್ಯ ಕಾಯಕದಲ್ಲಿ ಪರಮಾತ್ಮನನ್ನು ಕಂಡಿದ್ದರು ಎಂದು ಹೇಳಿದರು
ಮೀನುಗಾರರ ಸಂಘದ ಅಧ್ಯಕ್ಷ ಮಂಜುನಾಥ್ ಸುಣಗಾರ್ ಮಾತನಾಡಿ, ಸಮುದಾಯದವರು ಕೇವಲ ಕುಲ ಕಸುಬಿಗೆ ಸೀಮಿತರಾಗದೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಸಾಮಾಜಿಕ ಮುನ್ನಲೆಗೆ ಬರುವತ್ತ ಗಮನಹರಿಸಬೇಕು. ಎಲ್ಲ ತಾರತಮ್ಯಗಳನ್ನು ಬದಿಗೊತ್ತಿ ಸಮುದಾಯದ ಏಳಿಗೆಗೆ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದರು.
ಜೆಡಿಎಸ್ ಮುಖಂಡ ನಾಗರಾಜು, ಬಿಜೆಪಿ ಮುಖಂಡ ಎಸ್.ಡಿ. ದಿಲೀಪ್ ಕುಮಾರ್, ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಕಾರ್ಯದರ್ಶಿ ಎಸ್. ಚಂದ್ರಶೇಖರ್ ಮಾತನಾಡಿದರು.
ಗ್ರಾಮದ ಮುಖ್ಯ ರಸ್ತೆಯಲ್ಲಿ ಅಂಬಿಗರ ಚೌಡಯ್ಯ ಮಂಟಪ ಅನಾವರಣ ಮಾಡಲಾಯಿತು.
ತಾಲ್ಲೂಕು ಬೆಸ್ತರ ಸಂಘ, ಮೀನುಗಾರರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಲೋಕೇಶ್ ಹಾಗೂ ಗೋವಿಂದ ರಾಜು, ವಿರೂಪಾಕ್ಷಪ್ಪ, ಗಂಗಾಧರ್, ದಯನಂದ್, ತಾತಯ್ಯ, ಕೆ.ಟಿ. ವೆಂಕಟೇಶ್, ಅರುಣ್ ಕುಮಾರ್, ಶಿವಕುಮಾರ್, ಶಶಿಧರ್, ಕೃಷ್ಣಸ್ವಾಮಿ, ಶ್ರೀನಿವಾಸ್, ಗಂಗಾಧರ, ಗ್ರಾಮದ ಹಲವು ಸಂಘಟನೆಗಳು ಭಾಗವಹಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.