ADVERTISEMENT

ಡ್ರಾಗರ್‌ನಿಂದ ಪೊಲೀಸರ ಮೇಲೆ ಹಲ್ಲೆ: ಕೊಲೆ ಆರೋಪಿ ಕಾಲಿಗೆ ಗುಂಡು

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2020, 4:11 IST
Last Updated 6 ಡಿಸೆಂಬರ್ 2020, 4:11 IST
   

ತುಮಕೂರು: ರೌಡಿಶೀಟರ್ ಮಂಜನಾಥ್ (32) ಅಲಿಯಾಸ್ ಉಚ್ಚೆಮಂಜನ ಕೊಲೆ ಪ್ರಕರಣದ ಆರೋಪಿ ವಿಕಾಸ್ (24) ಎಡಗಾಲಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ. ವಿಕಾಸ್ ಗುಬ್ಬಿ ತಾಲ್ಲೂಕು ಗೌರಿಪುರದವನು.

ನಗರದ ಗಂಗೋತ್ರಿ ರಸ್ತೆಯಲ್ಲಿ ಗುರುವಾರ ರಾತ್ರಿ ಮಂಜುನಾಥ್ ಕೊಲೆಯಾಗಿತ್ತು. ಮಂಜುನಾಥ್ ಈ ಹಿಂದೆ ಹತ್ಯೆಯಾದ ಮಾಜಿ ಮೇಯರ್ ಗಡ್ಡರವಿ ಶಿಷ್ಯನಾಗಿದ್ದ. ನಗರಸಭೆ ಮಾಜಿ ಸದಸ್ಯ ಹಾಗೂ ರೌಡಿ ಅಂಜನಿಯ ಅಕ್ಕನ ಮಗನಾಗಿದ್ದ.

ಆರೋಪಿಗಳ ಪತ್ತೆಗೆಪೊಲೀಸರ ಮೂರು ತಂಡ ರಚಿಸಲಾಗಿತ್ತು.

ADVERTISEMENT

ತುಮಕೂರು ತಾಲ್ಲೂಕಿನ ಅಜ್ಜಪ್ಪನಹಳ್ಳಿಯಲ್ಲಿ ನಿರ್ಮಾಣ ಹಂತದ ಸಮುದಾಯ ಭವನದಲ್ಲಿ ವಿಕಾಸ್ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿತ್ತು.

ತಿಲಕ್ ಪಾರ್ಕ್ ಠಾಣೆಯ ಪಿಎಸ್ಐ ನವೀನ್ ಹಾಗೂ ಸಿಬ್ಬಂದಿ ಆರೋಪಿ ಬಂಧನಕ್ಕೆ ಮುಂದಾಗಿದ್ದರು.

ಎಎಸ್ಐ ಪರಮೇಶ್ವರ ಅವರ ಮೇಲೆ ವಿಕಾಸ್ ಡ್ರಾಗರ್‌ನಿಂದಹಲ್ಲೆ ಮಾಡಿದ. ಎಎಸ್ಐ ಎಡ ತೋಳಿಗೆಗಾಯವಾಗಿದೆ. ನಂತರ ಮತ್ತೊಬ್ಬ ಸಿಬ್ಬಂದಿ ಬಳಿ ದಾಳಿ ಮಾಡಲು ಮುಂದಾದಾಗ ಪಿಎಸ್ಐ ನವೀನ್ ಶರಣಾಗುವಂತೆ ಹೇಳಿ ಗಾಳಿಯಲ್ಲಿ ಗುಂಡು ಹಾರಿಸಿದರು. ಈ ಎಚ್ಚರಿಕೆ ಲೆಕ್ಕಿಸದೆ ಆರೋಪಿ ಪೊಲೀಸರ ಮೇಲೆ ಎರಗಲು ಮುಂದಾದಾಗ ನವೀನ್, ಆರೋಪಿ ಎಡಗಾಲಿಗೆ ಗುಂಡುಹಾರಿಸಿದ್ದಾರೆ. ಆತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಏಳು ಪ್ರಕರಣಗಳಲ್ಲಿ ಆರೋಪಿ
ಆರೋಪಿ ವಿಕಾಸ್ ತುಮಕೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯ ಏಳು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಲಾಕ್ಡೌನ್ ಸಂದರ್ಭದಲ್ಲಿ ಮಧುಗಿರಿ ತಾಲ್ಲೂಕು ಕೊಡಿಗೇನಹಳ್ಳಿಯಲ್ಲಿ ಪೆಟ್ರೋಲ್ ಬಾಂಬ್ ಎಸೆದ ಪ್ರಕರಣದ ಆರೋಪಿಯೂ ಈತನಾಗಿದ್ದಾನೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ಜೆ.ಉದೇಶ್ ತಿಳಿಸಿದ್ದಾರೆ.

ಮಂಜುನಾಥನ ಹತ್ಯೆ ಪ್ರಕರಣದಲ್ಲಿ ಇನ್ನು ಯಾರು ಯಾರು ಭಾಗಿ ಆಗಿದ್ದಾರೆ ಎನ್ನುವ ಮಾಹಿತಿ ಇದೆ. ಈಗಾಗಲೇ ಕೊಲೆ ನಡೆದ ಸ್ಥಳದಲ್ಲಿದ್ದ ಸಿಸಿ ಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗಿದೆ. ಆರೋಪಿಗಳ ಹೆಸರನ್ನು ಈ ಸಂದರ್ಭದಲ್ಲಿ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.