ಕುಣಿಗಲ್: ‘ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕನ್ನಡ ನಾಡಿನ ಅಭಿವೃದ್ಧಿಗಾಗಿ, ರೈತರ ಪ್ರಗತಿಗಾಗಿ ಅಲ್ಲ. ನನ್ನನ್ನು ಸೋಲಿಸಿ, ದೇವೇಗೌಡರ ಮಗ ಮತ್ತು ಅಳಿಯನ ಗೆಲುವಿಗಾಗಿ’ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಹೇಳಿದರು.
ಪಟ್ಟಣದಲ್ಲಿ ಬುಧವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
‘ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಹತ್ತು ವರ್ಷ ಎಂಟು ತಿಂಗಳು ಮೂರು ಬಾರಿ ಸಂಸದನಾಗಿ ಆಯ್ಕೆಯಾಗಿ ಮತದಾರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೆ. ಚುನಾವಣೆಗಾಗಿ ರಾಜಕಾರಣ ಮಾಡದೆ, ಅಭಿವೃದ್ಧಿಗಾಗಿ ಶ್ರಮಿಸಿರುವೆ. ತಾಲ್ಲೂಕಿಗೆ ಹೇಮಾವತಿ ನೀರಿನ ವಿಚಾರದಲ್ಲಿ 25 ವರ್ಷಗಳಿಂದ ಅನ್ಯಾಯವಾಗಿದೆ. ₹950 ಕೋಟಿ ವೆಚ್ಚದ ಸಂಪರ್ಕ ಕಾಲುವೆ ಯೋಜನೆ ಅನುಷ್ಠಾನದ ಮೂಲಕ ಇದನ್ನು ಸರಿಪಡಿಸಲಾಗಿದೆ’ ಎಂದರು.
‘ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಟ್ಟ ಎಚ್.ಡಿ. ಕುಮಾರಸ್ವಾಮಿ ಅವರ ಬಾವನನ್ನು ಜೆಡಿಎಸ್ನಿಂದ ಕಣಕ್ಕಿಳಿಸದೆ, ಬಿಜೆಪಿಯಿಂದ ಕಣಕ್ಕಿಳಿಸಿ ನನ್ನನ್ನು ಸೋಲಿಸಲು ಸಂಚು ರೂಪಿಸಿದ್ದಾರೆ’ ಎಂದು ದೂರಿದರು.
ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್ ಪಾದಯಾತ್ರೆ ಮೂಲಕ ಹೋರಾಟ ಮಾಡುತ್ತಿದ್ದಾಗ ಸುಮ್ಮನಿದ್ದ ದೇವೇಗೌಡ ಚುನಾವಣೆ ಸಮಯದಲ್ಲಿ ಮಾತ್ರ ಮಾತನಾಡುತ್ತಿದ್ದಾರೆ ಎಂದರು.
ಮೇಕೆದಾಟು ಯೋಜನೆ ಕನಕಪುರದವರಿಗಲ್ಲ. ಬೆಂಗಳೂರಿನ ನೀರಿನ ಸಮಸ್ಯೆಗೆ ಉತ್ತರವಾಗಿದೆ. ಈ ಯೋಜನೆಗೆ ಕನಕಪುರದವರು ಅವರ ಜಮೀನುಗಳನ್ನು ತ್ಯಾಗ ಮಾಡುತ್ತಿದ್ದಾರೆ ಎಂದು ಹೇಳಿದರು.
ತಾಲ್ಲೂಕಿನಲ್ಲಿ ಸಹೋದರರ ನಡುವೆ ಬಿರುಕು ಮೂಡಿಸಿಲ್ಲ. ಅವರುಗಳೆ ಕಿತ್ತಾಡಿಕೊಂಡಿದ್ದಾರೆ ಎಂದು ಹೇಳಿದರು.
ಶಾಸಕ ಡಾ.ರಂಗನಾಥ್, ಕೆಪಿಸಿಸಿ ಸದಸ್ಯ ಬೇಗೂರು ನಾರಾಯಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ, ಮುಖಂಡರಾದ ಕೋಘಟ್ಟ ರಾಜಣ್ಣ, ಮಾಗಡಯ್ಯ, ಗಾಯತ್ರಿ ಬಲರಾಂರಾಜು, ಗೌತಮಿ, ಸುಮತಿ, ಅನಸೂಯಮ್ಮ ವೈಕೆಆರ್, ಬಿ.ಕೆ.ರಾಮಣ್ಣ, ಹೊನ್ನೆಗೌಡ, ಗಂಗಶಾನಯ್ಯ, ಐ.ಜಿ.ವಿಶ್ವನಾಥ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.