
ತುಮಕೂರು: ಕ್ರೈಸ್ತ ಸಮುದಾಯದವರ ಮನ, ಮನೆಗಳಲ್ಲಿ ಸಂತಸ, ಭಕ್ತಿ, ಭಾವ ತುಂಬಿತ್ತು. ಎಲ್ಲೆಲ್ಲೂ ಸಂಭ್ರಮ ಮನೆ ಮಾಡಿತ್ತು. ಯೇಸುವಿನ ಸ್ಮರಣೆಯಲ್ಲಿ ಎಲ್ಲವನ್ನೂ ಮರೆತಿದ್ದರು. ದೇವರ ಧ್ಯಾನದಲ್ಲೇ ಮಿಂದೆದ್ದರು.
ವರ್ಷಾಂತ್ಯದಲ್ಲಿ ಬರುವ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮದಿಂದ ಬರಮಾಡಿಕೊಂಡು ಆಚರಿಸಿದರು. ನಗರ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಕ್ರಿಶ್ಚಿಯನ್ ಸಮುದಾಯದವರು ಕ್ರಿಸ್ಮಸ್ ಆಚರಣೆಯಲ್ಲಿ ತೊಡಗಿದ್ದರು. ಯೇಸುವಿನ ನೆನಪಿನಲ್ಲಿ ದಾನ ನೀಡಿದರು. ಹಸಿದವರಿಗೆ ಊಟ ಕೊಟ್ಟರು. ಸ್ನೇಹಿತರು, ಬಂಧುಗಳನ್ನು ಕರೆದು ಉಣಬಡಿಸಿದರು.
ಕ್ರಿಸ್ಮಸ್ ಹಬ್ಬಕ್ಕಾಗಿ ತಿಂಗಳಿನಿಂದ ಸಿದ್ಧತೆ ಮಾಡಿಕೊಂಡಿದ್ದರು. ಹೊಸ ಬಟ್ಟೆ ತೊಟ್ಟು ಚರ್ಚ್ಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಯೇಸುವನ್ನು ಸ್ಮರಿಸಿ, ಒಳ್ಳೆಯದು ಮಾಡು ತಂದೆ ಎಂದು ಕೇಳಿಕೊಂಡರು. ಸಕಲ ಜೀವರಾಶಿಗೆ ಒಳಿತಾಗುವಂತೆ ಪ್ರಾರ್ಥಿಸಿದರು. ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಕ್ರಿಸ್ಮಸ್ ಆಚರಿಸಿದರು.
ನಗರದ ಚರ್ಚ್ ಸರ್ಕಲ್ನಲ್ಲಿರುವ ಸಿಎಸ್ಐ ವೆಸ್ಲಿ ಚರ್ಚ್, ಹೊರಪೇಟೆಯ ಸಂತ ಲೂರ್ದು ಮಾತೆ ಚರ್ಚ್, ಸಿಎಸ್ಐ ಲೇಔಟ್ನ ಚರ್ಚ್, ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಚರ್ಚ್, ದೇವನೂರು ಚರ್ಚ್, ಸಿರಾಗೇಟ್ನಲ್ಲಿರುವ ಟಾಮ್ಲಿಸನ್ ಚರ್ಚ್ ಸೇರಿದಂತೆ ನಗರದ ವಿವಿಧ ಬಡಾವಣೆಗಳಲ್ಲಿರುವ ಚರ್ಚ್ಗಳಲ್ಲಿ ಗುರುವಾರ ಕ್ರೈಸ್ತ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ವಿದ್ಯುತ್ ದೀಪಾಲಂಕಾರದಿಂದ ಚರ್ಚ್ಗಳು ಕಂಗೊಳಿಸಿದವು. ವಾರದಿಂದಲೇ ಚರ್ಚ್ಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಯೇಸು ಜನಿಸಿದ ನೆನಪಿಗಾಗಿ ಚರ್ಚ್, ಮನೆಗಳಲ್ಲಿ ಗೋದಲಿ ನಿರ್ಮಿಸಲಾಗಿತ್ತು. ಕ್ರಿಸ್ಮಸ್ ಟ್ರೀಗಳನ್ನೂ ಅಲಂಕರಿಸಲಾಗಿತ್ತು. ನಗರದಲ್ಲಿರುವ 7 ಸಿಎಸ್ಐ ಚರ್ಚ್, ಎರಡು ರೋಮನ್ ಕ್ಯಾಥೋಲಿಕ್ ಚರ್ಚೆ, ಮಾರ್ಥಾಂಬ ಚರ್ಚ್, ಫೆದರಲ್ ಚರ್ಚ್, 15 ಇಂಡಿಪೆಂಡೆಂಟ್ ಚರ್ಚ್ಗಳಲ್ಲಿ ಪ್ರಾರ್ಥಿಸಿದರು.
ಚರ್ಚ್ ವೃತ್ತದಲ್ಲಿರುವ ಸಿಎಸ್ಐ ಚರ್ಚ್ನಲ್ಲಿ ಸಾಮೂಹಿಕ ಪ್ರಾರ್ಥನೆ ಬಳಿಕ ಸಭಾಪಾಲಕರು ಸಂದೇಶ ನೀಡಿದರು. ‘ಕ್ರಿಸ್ಮಸ್ ಯೇಸುಕ್ರಿಸ್ತನ ಜನ್ಮದಿನದ ಸಂಕೇತ. ಮಾನವರಿಗಾಗಿ ದೇವರು ಪರಲೋಕ ಬಿಟ್ಟು ಭೂಲೋಕಕ್ಕೆ ಬಂದಂತಹ ಶುಭ ವರ್ತಮಾನ ತಿಳಿಸುತ್ತದೆ. ಬೆಳಕಿನ ಹಬ್ಬವಾಗಿ ಕ್ರಿಸ್ಮಸ್ ಆಚರಿಸಲಾಗುತ್ತದೆ. ಯೇಸುಕ್ರಿಸ್ತ ನಮಗೆ ಬೆಳಕಾಗಿ ಬಂದಿದ್ದಾನೆ. ಚರ್ಚ್ಗಳಲ್ಲಿ ಕ್ಯಾಂಡಲ್ ಹಿಡಿದು ಯೇಸುವಿನ ಬೆಳಕು ನಮ್ಮೆಲ್ಲ ಸಂಕಷ್ಟವನ್ನು ದೂರ ಮಾಡುತ್ತದೆ ಎಂಬ ನೆನಪಿನಲ್ಲಿ ಹಬ್ಬ ಆಚರಿಸಲಾಗುತ್ತದೆ’ ಎಂದು ವಿವರಣೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.