ಶಿರಾ: ನಗರದಲ್ಲಿ ರಸ್ತೆ ಬದಿಯಲ್ಲಿ ಅಕ್ರಮವಾಗಿ ಇಟ್ಟುಕೊಂಡಿದ್ದ ಅಂಗಡಿಗಳ ತೆರವು ಕಾರ್ಯಾಚರಣೆಯನ್ನು ನಗರಸಭೆ ಗುರುವಾರದಿಂದ ಆರಂಭಿಸಿದೆ.
ಮಲ್ಲಿಕ್ ರೆಹಾನ್ ದರ್ಗಾ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ಹಳೆ ರಾಷ್ಟ್ರೀಯ ಹೆದ್ದಾರಿ-4ರ ಎರಡು ಬದಿಯಲ್ಲಿ ಅಕ್ರಮವಾಗಿ ಪೆಟ್ಟಿಗೆ ಅಂಗಡಿ ತಲೆ ಎತ್ತಿದ್ದವು. ಇದರಿಂದಾಗಿ ಸುಗಮ ಸಂಚಾರಕ್ಕೆ ತೊಂದರೆಯಾಗಿ ಪಾದಚಾರಿಗಳು ರಸ್ತೆಯಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಇತ್ತು. ಇದು ನಗರದ ಅಂದ ಕೆಡಿಸಿದ್ದಲ್ಲದೆ, ಹಲವು ಅಪಘಾತಗಳಿಗೂ ಕಾರಣವಾಗಿತ್ತು.
ನಗರಸಭೆಯ ಸಾಮಾನ್ಯ ಸಭೆಯಲ್ಲಿ ಅಕ್ರಮ ಅಂಗಡಿ ತೆರವುಗೊಳಿಸಲು ನಿರ್ಣಯ ಕೈಗೊಂಡು, ಪೌರಾಯುಕ್ತರಿಗೆ ಸಂಪೂರ್ಣ ಅಧಿಕಾರ ನೀಡಲಾಗಿತ್ತು.
ಕೆಲವರು ಅಕ್ರಮ ಇಟ್ಟುಕೊಂಡಿದ್ದ ಮಳಿಗೆಗಳಿಗೆ ವಿದ್ಯುತ್ ಸಂಪರ್ಕ ಪಡೆದು ಅವುಗಳನ್ನು ಬೇರೆಯವರಿಗೆ ಬಾಡಿಗೆ ನೀಡಿರುವ ನಿದರ್ಶನಗಳೂ ಇವೆ.
ರಸ್ತೆ ಬದಿ ವ್ಯಾಪಾರಿಗಳ ಬಳಿ ನಗರಸಭೆ ಅಧಿಕಾರಿಗಳು ಮಾತನಾಡಿದ್ದು, ವ್ಯಾಪಾರಿಗಳ ಮನವಿಗೆ ಸ್ಪಂದಿಸಿ ಪೆಟ್ಟಿಗೆ ಹಾಗೂ ಸಾಮಗ್ರಿಗಳಿಗೆ ಯಾವುದೇ ತೊಂದರೆಯಾಗದಂತೆ ತೆರವುಗೊಳಿಸಲು ಐದು ದಿನ ಕಾಲಾವಕಾಶ ನೀಡಲಾಯಿತು.
‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪೌರಾಯುಕ್ತ ರುದ್ರೇಶ್ ‘ನಗರವನ್ನು ಸ್ವಚ್ಛಗೊಳಿಸಲು ಕಠಿಣ ಕ್ರಮ ಕೈಗೊಳ್ಳಲಾಗುವುದು. ರಸ್ತೆ ಬದಿಯಲ್ಲಿ ಅಕ್ರಮವಾಗಿ ಇಟ್ಟುಕೊಂಡಿರುವ ಅಂಗಡಿ ತೆರವುಗೊಳಿಸಲಾಗುತ್ತಿದೆ. ಬಹುತೇಕರು ಬಾಡಿಗೆ ನೀಡುತ್ತಿದ್ದಾರೆ. ನಿಜವಾದ ಫಲಾನುಭವಿಗಳಿಗೆ ತೊಂದರೆ ಮಾಡುವುದಿಲ್ಲ. ಮುಂದಿನ ದಿನಗಳಲ್ಲಿ ಅನುಕೂಲ ಮಾಡಿಕೊಡಲಾಗುವುದು. ಬಹುತೇಕರು ಸ್ವಪ್ರೇರಣೆಯಿಂದ ತೆರವುಗೊಳಿಸುತ್ತಿದ್ದಾರೆ. ಐದು ದಿನ ಕಾಲಾವಕಾಶ ನೀಡಿದ್ದು, ಅದರೊಳಗೆ ತೆರವುಗೊಳಿಸದಿದ್ದರೆ ನಗರಸಭೆಯಿಂದ ತೆರವಿಗೆ ಕ್ರಮಕೈಗೊಳ್ಳಲಾಗುವುದು. ನಗರೋತ್ಥಾನ ಯೋಜನೆಯಲ್ಲಿ ₹2.5 ಕೋಟೆ ವೆಚ್ಚದಲ್ಲಿ ರಸ್ತೆ ಅಭಿವೃದ್ದಿ ಪಡಿಸಲಾಗುವುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.