
ಮಧುಗಿರಿ ತಾಲ್ಲೂಕಿನ ದೊಡ್ಡೇರಿ ಸರ್ಕಾರಿ ಶಾಲೆಯಲ್ಲಿ ಶನಿವಾರ ಅಚಲ ಕಲ್ಚರಲ್ ಫೌಂಡೇಷನ್ ಆಶ್ರಯದಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಪರಿ ನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಮಕ್ಕಳಿಗೆ ‘ಪ್ರಜಾವಾಣಿ’ ಪತ್ರಿಕೆ ವಿತರಿಸಲಾಯಿತು.
ಮಧುಗಿರಿ: ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನ ಸಾಮಾನ್ಯ ಜನರ ಕೈಗೆ ಆಡಳಿತ ಕೊಟ್ಟಿದೆ ಎಂದು ಲೇಖಕ ಕೆ.ಪಿ.ನಟರಾಜ್ ಹೇಳಿದರು.
ತಾಲ್ಲೂಕಿನ ದೊಡ್ಡೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಅಚಲ ಕಲ್ಚರಲ್ ಫೌಂಡೇಷನ್ ಆಶ್ರಯದಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಾಲಾ ಮಕ್ಕಳು ಪಠ್ಯಪುಸ್ತಕದ ಜತೆಗೆ ದಿನಪತ್ರಿಕೆ ಓದಬೇಕು. ಇದರಿಂದ ನಮ್ಮ ಜ್ಞಾನ ವಿಸ್ತರಿಸುತ್ತದೆ. ‘ಪ್ರಜಾವಾಣಿ’ ಪತ್ರಿಕೆ ಮಕ್ಕಳ ಶೈಕ್ಷಣಿಕ ಮಾರ್ಗದರ್ಶಿಯಂತೆ ಕೆಲಸ ಮಾಡುತ್ತದೆ ಎಂದರು.
ಉಪನ್ಯಾಸಕ ನಾಗರಾಜು ಮಾವುಕೆರೆ ಮಕ್ಕಳಿಗೆ ‘ಪ್ರಜಾವಾಣಿ’ ಪತ್ರಿಕೆ ವಿತರಿಸಿ ಮಾತನಾಡಿ, ‘ತರಗತಿಯಲ್ಲಿ ಇಂಗ್ಲಿಷ್ ಬೋಧಿಸಿದರೂ ಪ್ರತಿ ದಿನ ತಪ್ಪದೆ ‘ಪ್ರಜಾವಾಣಿ’ ಓದುತ್ತೇನೆ. ಸುದ್ದಿಯಲ್ಲಿ ವಸ್ತು ನಿಷ್ಠತೆ, ಭಾಷಾ ಸ್ಪಷ್ಟತೆ ಕಾರಣಕ್ಕೆ ಪತ್ರಿಕೆ ಇಷ್ಟವಾಗುತ್ತದೆ’ ಎಂದು ತಿಳಿಸಿದರು.
ಶಾಲೆಯ ಮುಖ್ಯ ಶಿಕ್ಷಕ ನರಸಪ್ಪ, ‘ಶಿಕ್ಷಣ, ಸಂಘಟನೆ, ಹೋರಾಟ ಅಂಬೇಡ್ಕರ್ ಸಮಾಜಕ್ಕೆ ನೀಡಿದ ಕೊಡುಗೆಗಳು’ ಎಂದರು.
ಶಿಕ್ಷಕ ರಘು ಗಂಕಾರನಹಳ್ಳಿ, ‘ದಿನಪತ್ರಿಕೆಗಳಿಂದ ಮಕ್ಕಳಲ್ಲಿ ಪಠ್ಯೇತರ ಓದು ಆರಂಭವಾಗುತ್ತದೆ. ಮಕ್ಕಳಿಗೆ ಭಾಷಾ ಕಲಿಕೆಯ ದೀವಿಗೆಯಾಗಿವೆ. ಇದರಲ್ಲಿ ‘ಪ್ರಜಾವಾಣಿ’ ಮುಂಚೂಣಿಯಲ್ಲಿದೆ’ ಎಂದು ಅಭಿಪ್ರಾಯಪಟ್ಟರು.
ಶಿಕ್ಷಕರಾದ ಲಕ್ಷ್ಮಿಕಾಂತಯ್ಯ, ಉಮಾದೇವಿ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.