ADVERTISEMENT

ಮುಂದುವರೆದ ಏಕಾಂಗಿ ದಾಸೋಹ

​ಪ್ರಜಾವಾಣಿ ವಾರ್ತೆ
Published 9 ಜನವರಿ 2021, 4:23 IST
Last Updated 9 ಜನವರಿ 2021, 4:23 IST
ಕುಣಿಗಲ್ ಸಂತೆಮೈದಾನದಲ್ಲಿ ನಿರ್ಗತಿಕರಿಗೆ ತಿಂಡಿ ಮತ್ತು ವುಲ್ಲನ್ ರಗ್ಗು ಗಳನ್ನು ವಿತರಿಸಿದ ನಾರಾಯಣ್
ಕುಣಿಗಲ್ ಸಂತೆಮೈದಾನದಲ್ಲಿ ನಿರ್ಗತಿಕರಿಗೆ ತಿಂಡಿ ಮತ್ತು ವುಲ್ಲನ್ ರಗ್ಗು ಗಳನ್ನು ವಿತರಿಸಿದ ನಾರಾಯಣ್   

ಕುಣಿಗಲ್: ಕೊರೊನಾ ಸಂಕಷ್ಟದ ಸಮಯದಲ್ಲಿ ನಿರ್ಗತಿಕರಿಗಾಗಿ ಪ್ರಾರಂಭವಾದ ದಾಸೋಹ ಕಾರ್ಯವನ್ನು ಏಕಾಂಗಿಯಾಗಿ ನಿರಂತರವಾಗಿ ಮುಂದುವರೆಸಿದ ಕೊರೊನಾ ವಾರಿಯರ್ ನಾರಾಯಣ್ ಜನರ ಗಮನ ಸೆಳೆದಿದ್ದಾರೆ.

ಪಟ್ಟಣದ ದೊಡ್ಡಪೇಟೆಯಲ್ಲಿ ವ್ಯಾಪಾರ ಮಾಡಿಕೊಂಡಿರುವ ನಾರಾಯಣ್ ಅವರು ಸಣ್ಣ ಪ್ರಮಾಣದಲ್ಲಿ ದಾಸೋಹ ಮಾಡುತ್ತಿದ್ದರು. ಕೊರೊನಾ ವೇಳೆ ಸ್ನೇಹಿತರ ಜತೆ ಸೇರಿ ನಿರ್ಗತಿಕರಿಗೆ ದಾಸೋಹ ಮಾಡಿದರು.

ಸುಮಾರು 60 ದಿನಗಳ ಲಾಕ್‌ಡೌನ್ ಸಮಯದಲ್ಲಿ ಕೊರೊನಾ ವಾರಿಯರ್ಸ್ ಜತೆ ಸೇರಿ ನಿತ್ಯ 150 ರಿಂದ 200 ನಿರ್ಗತಿಕರಿಗೆ ಮೂರು ಹೊತ್ತು ದಾಸೋಹ ಮಾಡುತ್ತಿದ್ದರು. ನಂತರ ಇದು ಸ್ಥಗಿತಗೊಂಡಿತ್ತು.

ADVERTISEMENT

ಲಾಕ್‌ಡೌನ್ ಮುಗಿದ ನಂತರವೂ ದಾಸೋಹ ಸೇವೆಯನ್ನು ಏಕಾಂಗಿಯಾಗಿ ಮುಂದುವರೆಸುವ ಉತ್ಸಾಹಕ್ಕೆ ಸ್ನೇಹಿತರು ದಾನಿಗಳು ನೆರವು ಮತ್ತು ಪ್ರೋತ್ಸಾಹ ದೊರೆತ ಕಾರಣ ನಾರಾಯಣ್ ದಾಸೋಹ ಸೇವೆಯನ್ನು ಮುಂದುವರೆಸಿದ್ದಾರೆ.

ನಿತ್ಯವೂ ಬೆಳಗ್ಗೆ 8 ಗಂಟೆಗೆ ತಿಂಡಿಯ ಪೊಟ್ಟಣಗಳನ್ನು ಸಿದ್ಧಪಡಿಸಿಕೊಂಡು ಪಟ್ಟಣವನ್ನು ಸುತ್ತಿ ನಿರ್ಗತಿಕರಿಗೆ ನೀಡುತ್ತಿದ್ದಾರೆ. ನಾರಾಯಣ್ ಅವರ ಸೇವೆಯನ್ನು ಕಂಡ ನಿರ್ಗತಿಕರು ಪುರಸಭೆ ಉದ್ಯಾನ, ಸಂತೆಮೈದಾನ ಮತ್ತು ಅಡವಿಶ್ವರಸ್ವಾಮಿ ದೇವಾಲಯಗಳು ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ಕಾಯ್ದು ಕುಳಿತಿರುತ್ತಾರೆ. ನಾರಾಯಣ್ ಅವರ ಬೈಕ್ ಕಂಡ ಕ್ಷಣ ಸಂತಸದಿಂದ ಬಂದು ತಿಂಡಿ ಪೊಟ್ಟಣ ಪಡೆಯುತ್ತಾರೆ.

ಬೆಳಿಗ್ಗೆ ಚಳಿಯಲ್ಲಿ ನಿರ್ಗತಿಕರು ಕಾಯುತ್ತಿರುವುದನ್ನು ಕಂಡು ಮರುಗಿದ ನಾರಾಯಣ್ ಸ್ಥಳಿಯ ದಾನಿಗಳಿಂದ ವುಲ್ಲನ್ ಬೆಡ್‌ಶೀಟ್‌ಗಳನ್ನು ದಾನವಾಗಿ ಸಂಗ್ರಹಿಸಿ ನಿರ್ಗತಿಕರಿಗೆ
ವಿತರಿಸಿದ್ದಾರೆ.

ನಿತ್ಯ ತನ್ನ ಕಾಯಕ ಪ್ರಾರಂಭಿಸುವ ಮೊದಲು ನಿರ್ಗತಿಕರಿಗೆ ತಿಂಡಿಯ ಪೊಟ್ಟಣಗಳನ್ನು ವಿತರಿಸುವುದು ನಾರಾಯಣ್ ಅವರ ವಾಡಿಕೆ. ನಾರಾಯಣ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಸ್ನೇಹಿತರು, ವ್ಯಾಪಾರಿಗಳು ತಮ್ಮ ಪಾಲಿನ ದೇಣಿಗೆಯನ್ನು ನೀಡುತ್ತಿದ್ದಾರೆ. ಸ್ನೇಹಿತರು ಮತ್ತು ದಾನಿಗಳ ಪ್ರೋತ್ಸಾಹದಿಂದ ಪ್ರೇರಿತರಾಗಿರುವ ನಾರಾಯಣ್ ಮುಂದಿನ ದಿನಗಳಲ್ಲಿ ಮಧ್ಯಾಹ್ನ ಮತ್ತು ರಾತ್ರಿಯ ದಾಸೋಹಕ್ಕೆ ಸಜ್ಜಾಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.