ಕೊಡಿಗೇನಹಳ್ಳಿ: ಪಕ್ಕದ ಗ್ರಾಮದಲ್ಲಿ ವೃದ್ಧೆಯೊಬ್ಬರು ಸತ್ತಿರುವುದು ಕೊರೊನಾ ವೈರಸ್ ಸೋಂಕಿನಿಂದ ಎಂದು ಶಂಕಿಸಿದ ಗುಟ್ಟೆ ಹಾಗೂ ಜಾಲಿಹಳ್ಳಿ ಯುವಕರು ತಮ್ಮ ಗ್ರಾಮದ ಸುತ್ತಲೂ ರಸ್ತೆಗೆ ಬೇಲಿ ಹಾಕಿದ್ದರು.
ಕೊಡಿಗೇನಹಳ್ಳಿ ಹೋಬಳಿಯ ಎಂ.ಬಿ.ಪಾಳ್ಯ ಗ್ರಾಮದ ಸುಮಾರು 90 ವರ್ಷದ ವೃದ್ಧೆ ಬುಧವಾರ ಮೃತಪಟ್ಟಿದ್ದಾರೆ. ಕೋವಿಡ್–19 ಜ್ವರದಿಂದ ವೃದ್ಧೆ ಮೃತಪಟ್ಟಿದ್ದಾರೆ ಎಂದು ಶಂಕಿಸಿದ ಯುವಕರು ಆ ಊರಿನ ಜನರು ತಮ್ಮೂರಿಗೆ ಬರದಂತೆ ಮತ್ತು ತಮ್ಮೂರಿನ ಜನರು ಪಕ್ಕದ ಹಳ್ಳಿಗೆ ಹೋಗದಂತೆ ಗ್ರಾಮಗಳ ಸುತ್ತಲೂ ಬೇಲಿ ಹಾಕಿಕೊಂಡಿದ್ದಾರೆ.
ಇದನ್ನು ಕಂಡು ಗಾಬರಿಗೊಂಡ ಎಂ.ಬಿ.ಪಾಳ್ಯದ ಗ್ರಾಮದ ಜನರು ಸ್ಥಳಕ್ಕೆ ಬಂದು ವೃದ್ಧೆ ವಯಸ್ಸಾಗಿದ್ದರಿಂದ ಸಹಜವಾಗಿ ಸಾವನ್ನಪ್ಪಿದ್ದಾರೆ. ಬೇಲಿ ತೆಗೆಯಿರಿ ಎಂದು ಹೇಳಿದಾಗ, ‘ನಿಮ್ಮ ಗ್ರಾಮದ ಕೆಲ ಯುವಕರು ವಿದೇಶದಲ್ಲಿ ಕೆಲಸ ಮಾಡುತ್ತಿದ್ದರು. ಈಗ ಗ್ರಾಮಕ್ಕೆ ವಾಪಸಾಗುತ್ತಿದ್ದಾರೆ ಮತ್ತು ಕೊರೊನಾ ವೈರಸ್ ಬಹುತೇಕ ವಿದೇಶಿಗಳಿಂದ ಬಂದಿರುವ ಜನರಲ್ಲೇ ಕಾಣಿಸಿರುವುದರಿಂದ ಏ. 14ರವರೆಗೆ ನಾವು ನಿಮ್ಮ ಗ್ರಾಮಗಳಿಗೆ ಮತ್ತು ನೀವು ನಮ್ಮ ಗ್ರಾಮಗಳಿಗೆ ಬರುವುದು ಬೇಡ’ ಎಂದು ಹೇಳಿ ಅವರನ್ನು ವಾಪಸ್ ಕಳುಹಿಸಿದ್ದಾರೆ.
ಈ ವಿಚಾರ ಸುತ್ತಮುತ್ತಲಿನ ಗ್ರಾಮದ ಜನರಲ್ಲಿ ಹಬ್ಬಿ ಕೆಲ ಗಂಟೆಗಳು ಆತಂಕಕ್ಕೆ ಕಾರಣವಾಗಿತ್ತು. ಆದರೆ, ಸ್ಥಳಕ್ಕೆ ಬಂದಿದ್ದ ಪೊಲೀಸರು ಮತ್ತು ಆರೋಗ್ಯ ಇಲಾಖೆಯವರು ವೃದ್ಧೆ ಸಾವು ಕೊರೊನಾ ವೈರಸ್ನಿಂದ ಆಗಿಲ್ಲ. ವಯೋ ಸಹಜ ಸಾವು’ ಎಂದು ಖಚಿತಪಡಿಸಿದ ಮೇಲೆ ಹಾಕಿದ್ದ ಬೇಲಿಯನ್ನು ಯುವಕರು ತೆರವುಗೊಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.