ಮಧುಗಿರಿ: ಲಾಕ್ಡೌನ್ ಪರಿಣಾಮ ರೈತರು ಬೆಳೆದಿರುವ ತರಕಾರಿ, ಹೂ ಮತ್ತು ಹಣ್ಣು ಜಮೀನಿನಲ್ಲಿಯೇ ಉಳಿಯುವಂತಾಗಿದೆ.
ತಾಲ್ಲೂಕು ಸತತ ಬರಗಾಲಕ್ಕೆ ತುತ್ತಾದ ಪ್ರದೇಶ. ಇಲ್ಲಿಯ ಜನ ಮಳೆಯನ್ನೇ ನಂಬಿಕೊಂಡು ಬದುಕುತ್ತಿದ್ದಾರೆ. ಯಾವುದೇ ಶಾಶ್ವತ ನೀರಾವರಿ ಸೌಲಭ್ಯವಿಲ್ಲದೆ ರೈತರು ಕೊಳವೆಬಾವಿ ಕೊರೆಯಿಸಿ ತರಕಾರಿ, ಹೂ ಮತ್ತು ಹಣ್ಣುಗಳ ಗಿಡಗಳನ್ನು ಬೆಳೆಸಿದ್ದಾರೆ. ಬೆಳೆ ಕೈಗೆ ಬಂದ ಮೇಲೆ ಸಾಲ ತೀರಿಸುವ ಹೊತ್ತಿನಲ್ಲಿಯೇ ಕೊರೊನಾ ವೈರಸ್ ಹೊಡೆತ ನೀಡಿದೆ.
‘ರೈತರು ಬೆಳೆದ ತರಕಾರಿ, ಹೂ ಹಾಗೂ ಹಣ್ಣುಗಳನ್ನು ಬೆಂಗಳೂರು, ಚಿಕ್ಕಬಳ್ಳಾಪುರ, ಹಿಂದೂಪುರ ಹಾಗೂ ತುಮಕೂರು ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಿದ್ದರು. ಆದರೆ, ಈಗ ಲಾಕ್ಡೌನ್ ಪರಿಣಾಮ ಈ ಮಾರುಕಟ್ಟೆಗಳಿಗೆ ತೆರಳಿ ತರಕಾರಿ ಮಾರಾಟ ಮಾಡಲು ಕಷ್ಟವಾಗುತ್ತಿದೆ. ಇದರಿಂದ ಜಮೀನುಗಳಲ್ಲಿಯೇ ಉಳಿದು ಅಪಾರ ನಷ್ಟ ಉಂಟಾಗುತ್ತಿದೆ’ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.
ತಾಲ್ಲೂಕಿನಲ್ಲಿ ಬಾಳೆ, ಕರ್ಬೂಜ, ದ್ರಾಕ್ಷಿ, ಸಪೋಟ, ಸೀಬೆ, ಪಪ್ಪಾಯಿ, ದಾಳಿಂಬೆ, ಬೀನ್ಸ್, ಮೆಣಸಿನಕಾಯಿ, ಕೋಸು, ಹೂ ಕೋಸು, ಕುಂಬಳಕಾಯಿ, ಟೊಮೆಟೊ, ಗುಲಾಬಿ, ಕನಕಾಂಬರ, ಕಾಕಡ ಹಾಗೂ ಇತರೆ ಬೆಳೆಗಳನ್ನು ರೈತರು ಬೆಳೆದಿದ್ದಾರೆ. ಸರಿಯಾದ ಮಾರುಕಟ್ಟೆ ಸಿಗದೆ ಹಾಗೂ ವ್ಯಾಪಾರ ಇಲ್ಲದೇ ಇರುವುದರಿಂದ ರೈತರು ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.