ADVERTISEMENT

ಶಿರಾ: ಹಳ್ಳಿಮನೆ ಬಾಗಿಲಲ್ಲಿ ಕೊರೊನಾ

ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಪತ್ತೆಯಾಗುತ್ತಲೇ ಇದ್ದಾರೆ ಸೋಂಕಿತರು

​ಪ್ರಜಾವಾಣಿ ವಾರ್ತೆ
Published 24 ಜೂನ್ 2020, 16:49 IST
Last Updated 24 ಜೂನ್ 2020, 16:49 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ತುಮಕೂರು: ಶಿರಾ ನಗರದಲ್ಲಿ ಮಾರ್ಚ್ 27ರಂದು ಕೊರೊನಾ ಪ್ರಕರಣ ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ ತೀವ್ರ ಸಂಚಲನ ಉಂಟಾಗಿತ್ತು. ಆ ನಂತರ ತುಮಕೂರು ನಗರದಲ್ಲಿ ಸೋಂಕು ಕಾಣಿಸಿಕೊಂಡಿತು. ಹೀಗೆ ನಗರ ಪ್ರದೇಶಗಳಲ್ಲಿಯೇ ಕಾಣುತ್ತಿದ್ದ ಸೋಂಕು ಈಗ ಗ್ರಾಮೀಣ ಪ್ರದೇಶಗಳಿಗೂ ವ್ಯಾಪಿಸಿದೆ.

ಜಿಲ್ಲೆಯ 10 ತಾಲ್ಲೂಕುಗಳಲ್ಲಿಯೂ ಕೊರೊನಾ ಪ್ರಕರಣಗಳು ವರದಿಯಾಗಿವೆ. ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ನಿಯಂತ್ರಣಕ್ಕೆ ಬರುವ ಸೋಂಕು ಗ್ರಾಮೀಣ ಭಾಗಗಳಲ್ಲಿ ನಿಯಂತ್ರಣಕ್ಕೆ ಬರುವುದು ಕಷ್ಟ. ಇದನ್ನು ಮನಗಂಡು ಜಿಲ್ಲಾಡಳಿತ ಗ್ರಾಮೀಣ ಭಾಗದಲ್ಲಿ ವ್ಯಾಪಕವಾದ ಜಾಗೃತಿ ಮತ್ತು ಅರಿವು ಕಾರ್ಯಕ್ರಮಗಳನ್ನು ನಡೆಸಿತ್ತು. ಅಲ್ಲದೆ ಆಶಾ ಕಾರ್ಯಕರ್ತೆಯರ ಮೂಲಕ ಆರೋಗ್ಯ ತಪಾಸಣೆ ಕೈಗೊಂಡಿತ್ತು. ಈ ಎಲ್ಲ ಬೆಳವಣಿಗೆಗಳ ನಡುವೆಯೇ ಗ್ರಾಮೀಣ ಭಾಗಗಳಿಗೆ ಕೊರೊನಾ ಕಾಲಿಟ್ಟಿದೆ.

ಗುಬ್ಬಿ ತಾಲ್ಲೂಕಿನ ಕಿಡದಕುಪ್ಪೆ ಮತ್ತು ಅಂತಾಪುರ, ಶಿರಾ ತಾಲ್ಲೂಕು ಹೊಸೂರು, ಮಧುಗಿರಿ ತಾಲ್ಲೂಕಿನ ಅಚ್ಚೇನಹಳ್ಳಿ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಡೆಕೆರೆ ಗೊಲ್ಲರಹಟ್ಟಿ, ಕೊರಟಗೆರೆ ತಾಲ್ಲೂಕಿನ ಕತ್ತಿನಾಗೇನಹಳ್ಳಿಯಲ್ಲಿ ಸೋಂಕಿನ ಪ್ರಕರಣಗಳು ಈಗಾಗಲೇ ದೃಢಪಟ್ಟಿವೆ. ಈ ಗ್ರಾಮಗಳನ್ನು ಸೀಲ್‌ಡೌನ್ ಸಹ ಮಾಡಲಾಗಿದೆ. ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗಿದೆ.

ADVERTISEMENT

ಹೀಗೆ ಈ ಹಳ್ಳಿಗಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಲೇ ಸುತ್ತಮುತ್ತಲ ಗ್ರಾಮಗಳಲ್ಲಿ ಆತಂಕ ಹೆಚ್ಚಾಗಿದೆ. ಇಲ್ಲಿಯವರೆಗೂ ಆ ಜಿಲ್ಲೆಗೆ ಸೋಂಕು ಹೆಚ್ಚಿದೆ, ಈ ಜಿಲ್ಲೆಯಲ್ಲಿ ಸೋಂಕು ಹೆಚ್ಚಿದೆ ಎಂದು ಮಾತನಾಡಿಕೊಳ್ಳುತ್ತಿದ್ದ ಹಳ್ಳಿಕಟ್ಟೆಗಳಲ್ಲಿ ಪಕ್ಕದ ಊರಿಗೆ ಸೋಂಕು ಬಂದಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.