ADVERTISEMENT

ಮಾಧುಸ್ವಾಮಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2019, 15:29 IST
Last Updated 18 ನವೆಂಬರ್ 2019, 15:29 IST
ಸಚಿವ ಜೆ.ಸಿ.ಮಾಧುಸ್ವಾಮಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಸ್ಟರ್
ಸಚಿವ ಜೆ.ಸಿ.ಮಾಧುಸ್ವಾಮಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಸ್ಟರ್   

ಹುಳಿಯಾರು: ಪಟ್ಟಣದ ಪೆಟ್ರೋಲ್‌ ಬಂಕ್‌ ವೃತ್ತದಲ್ಲಿ ಕನಕದಾಸರ ನಾಮಫಲಕ ಅಳವಡಿಕೆ ಸಂಬಂಧ ನಡೆದ ಶಾಂತಿ ಸಭೆಯಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ಕುರುಬ ಸಮಾಜದ ಸ್ವಾಮೀಜಿ ಮೇಲೆ ಜೋರುಧ್ವನಿಯಲ್ಲಿ ಮಾತನಾಡಿದ್ದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಈಚೆಗೆ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಎರಡು ಕಡೆಯ ಮುಖಂಡರನ್ನು ಸೇರಿಸಿ ಶಾಂತಿಸಭೆ ಆಯೋಜಿಸಲಾಗಿತ್ತು. ಆದರೆ, ಸಭೆಯಲ್ಲಿ ಒಮ್ಮತ ಮೂಡದ ಕಾರಣ ಸಭೆ ಅಪೂರ್ಣಗೊಂಡಿತ್ತು. ಸಭೆಯಲ್ಲಿ ಕಾಗಿನೆಲೆ ಶಾಖಾ ಮಠದ ಈಶ್ವರಾನಂದ ಸ್ವಾಮೀಜಿ ಸೇರಿದಂತೆ ಕುರುಬ ಸಮಾಜದ ಮುಖಂಡರು ಭಾಗವಹಿಸಿದ್ದರು.

ನಂತರದ ಬೆಳವಣಿಗೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಚಿವರ ವಿರುದ್ಧದ ಪೊಸ್ಟರ್‌ಗಳು ವೈರಲ್‌ ಆಗುತ್ತಿವೆ. ಹಾಲುಮತ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ರುದ್ರಣ್ಣ ಗುಳಿ ಗುಳಿ ಅವರು ಸಚಿವರ ಜತೆ ಮಾತನಾಡಿದ ಆಡಿಯೊ ಸಹ ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ವೈರಲ್‌ ಆಗುತ್ತಿದೆ.

ADVERTISEMENT

ಒಟ್ಟಾರೆ ಕನಕದಾಸ ವೃತ್ತ ನಾಮಫಲಕ ವಿವಾದ ಎರಡು ಸಮುದಾಯದವರಲ್ಲಿ ವೈಷಮ್ಯ ಹೆಚ್ಚಾಗುವಂತೆ ಮಾಡಿರುವುದು ಗುಟ್ಟಾಗಿ ಉಳಿದಿಲ್ಲ.

ಮುಂದುವರಿದ ಪೊಲೀಸ್‌ ಪಹರೆ

ಹುಳಿಯಾರು ಪಟ್ಟಣದ ನಾಮಫಲಕ ಅಳವಡಿಕೆಗೆ ಸಂಬಂಧಪಟ್ಟಂತೆ ವಿವಾದಿತ ಸ್ಥಳದಲ್ಲಿ ಸೋಮವಾರ ಸಹ ಪೊಲೀಸ್‌ ಪಹರೆ ಮುಂದುವರಿದಿತ್ತು.

ಕೆಎಸ್‌ಆರ್‌ಪಿಯ ಒಂದು ಪೊಲೀಸ್‌ ವಾಹನ ಸ್ಥಳದಲ್ಲಿದ್ದು, ಪೊಲೀಸರು ಮೊಕ್ಕಾಂ ಹೂಡಿದ್ದಾರೆ. ನಿಷೇಧಾಜ್ಞೆ ತೆಗೆದು ಹಾಕಲಾಗಿದ್ದು, ಜನರು ವಿವಾದಿತ ಸ್ಥಳದಲ್ಲಿ ಭಯದಲ್ಲಿ ಓಡಾಡುವಂತಾಗಿದೆ. ಒಟ್ಟಾರೆ ವಿವಾದ ಬಗೆಹರಿಯದೆ ಸಾರ್ವಜನಿಕರಲ್ಲಿ ಗೊಂದಲದ ವಾತಾವರಣ ಮೂಡಿಸುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.