ತುಮಕೂರಿನ ಎಸ್ಎಸ್ಐಟಿ ಕಾಲೇಜಿನಲ್ಲಿ ಶನಿವಾರ ನಡೆದ ‘ಪರಂ ಸೈಬರ್ ಆರ್ಕ್’ ಕೇಂದ್ರ ಉದ್ಘಾಟನೆ ಕಾರ್ಯಕ್ರಮದಲ್ಲಿ ‘ಪರಂ ಸೈಬರ್ ಆರ್ಕ್’ ಪುಸ್ತಕ ಬಿಡುಗಡೆ ಮಾಡಲಾಯಿತು.
ತುಮಕೂರು: ಪ್ರಸ್ತುತ ಸೈಬರ್ ಅಪರಾಧ ಹೆಚ್ಚಾಗುತ್ತಿದೆ. ಸರ್ಕಾರದ ಗೌಪ್ಯ ಮಾಹಿತಿ, ದೇಶದ ಭದ್ರತಾ ವ್ಯವಸ್ಥೆ ಮೇಲೆ ಸೈಬರ್ ದಾಳಿಯಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ, ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿ ಜಿ.ಪರಮೇಶ್ವರ ಆತಂಕ ವ್ಯಕ್ತಪಡಿಸಿದರು.
ನಗರದ ಎಸ್ಎಸ್ಐಟಿ ಕಾಲೇಜಿನಲ್ಲಿ ಶನಿವಾರ ‘ಪರಂ ಸೈಬರ್ ಆರ್ಕ್– ಸೈಬರ್ ಸೆಕ್ಯೂರಿಟಿ ಕೇಂದ್ರ’ ಉದ್ಘಾಟಿಸಿ ಮಾತನಾಡಿದರು.
ಬ್ಯಾಂಕ್ ವಂಚನೆ, ಡಿಜಿಟಲ್ ಅರೆಸ್ಟ್ ಪ್ರಕರಣಗಳು ಅತಿಯಾಗಿವೆ. ಸರ್ಕಾರ ಎಲ್ಲ ರೀತಿಯ ರಕ್ಷಣಾ ವ್ಯವಸ್ಥೆ ಮಾಡುತ್ತಿದೆ. ಇಂತಹ ಸಂಶೋಧನಾ ಕೇಂದ್ರಗಳ ಮೂಲಕ ಅಪರಾಧ ಪ್ರಕರಣ ತಡೆ ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.
‘ಈಚೆಗೆ ಅಹಮದಾಬಾದ್ ಸೈಬರ್ ಸೆಕ್ಯೂರಿಟಿ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿನ ತಾಂತ್ರಿಕತೆ ಗಮನಿಸಿದ್ದೆ. ಅದರಿಂದ ಪ್ರೇರಿತನಾಗಿ ರಾಜ್ಯದಲ್ಲಿ ಕೇಂದ್ರ ಶುರು ಮಾಡಬೇಕು ಎಂದು ಮುಖ್ಯಮಂತ್ರಿ ಜತೆ ಚರ್ಚಿಸಿದೆ. ವಿದ್ಯಾರ್ಥಿಗಳ ಕಲಿಕೆಗೂ ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕೇಂದ್ರ ಪ್ರಾರಂಭಿಸಲಾಗಿದೆ’ ಎಂದು ಹೇಳಿದರು.
ಅಮೆರಿಕ ಫ್ಲೊರಿಡಾ ಇಂಟರ್ ನ್ಯಾಷನಲ್ ಯೂನಿವರ್ಸಿಟಿ ಪ್ರಾಧ್ಯಾಪಕ ಎಸ್.ಎಸ್.ಆಯ್ಯಂಗಾರ್, ‘ಡಿಜಿಟಲ್ ಯುಗದಲ್ಲಿ ಸೈಬರ್ ಅಪರಾಧ ವ್ಯಾಪಕವಾಗಿದೆ. ತಂತ್ರಜ್ಞಾನ ಅನೇಕ ಸವಾಲು ತಂದೊಡ್ಡಿದೆ’ ಎಂದರು.
ಚೆನ್ನೈನ ಸ್ಕಿಲ್ಸ್ಡಾ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಕೊಟ್ಟರಾಮ್ ರಮೇಶ್, ‘ವಂಚನೆ, ಸೈಬರ್ ಅಪರಾಧಿಗಳ ಪತ್ತೆ, ಸೈಬರ್ ಚಟುವಟಿಕೆ ನಿಯಂತ್ರಣಕ್ಕಾಗಿ ಆಧುನಿಕ ತಂತ್ರಜ್ಞಾನ ಅಳವಡಿಸಿರುವ ಪರಂ ಸೈಬರ್ ಆರ್ಕ್ ಕೇಂದ್ರ ಶುರು ಮಾಡಲಾಗಿದೆ. ಕೇವಲ 42 ದಿನಗಳಲ್ಲಿ ಕಾರ್ಯಾರಂಭಕ್ಕೆ ಸಜ್ಜುಗೊಳಿಸಲಾಗಿದೆ. ಸೈಬರ್ ಭದ್ರತೆ ಕ್ಷೇತ್ರದಲ್ಲಿ ಅಧ್ಯಯನ ನಡೆಸುವವರಿಗೆ ಇದು ಉತ್ತಮ ವೇದಿಕೆ’ ಎಂದು ಮಾಹಿತಿ ನೀಡಿದರು.
ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಟ್ರಸ್ಟಿ ಕನ್ನಿಕಾ ಪರಮೇಶ್ವರ, ಸ್ಕಿಲ್ಸ್ಡಾ ಸಂಸ್ಥೆಯ ಹಿರಿಯ ಸಂಯೋಜಕ ಕೈಲಾಸ್ ಶಿವನಾಗಿ, ಸಾಹೇ ವಿ.ವಿ ಕುಲಪತಿ ಕೆ.ಬಿ.ಲಿಂಗೇಗೌಡ, ಕುಲಸಚಿವ ಅಶೋಕ್ ಮೆಹ್ತಾ, ಕುಲಾಧಿಪತಿ ಸಲಹೆಗಾರ ವಿವೇಕ್ ವೀರಯ್ಯ, ಎಸ್ಎಸ್ಐಟಿ ಪ್ರಾಂಶುಪಾಲ ಎಂ.ಎಸ್.ರವಿಪ್ರಕಾಶ್, ಡಿನ್ ರೇಣುಕಾಲತಾ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.