ADVERTISEMENT

ವಾಹನಗಳಿಗೆ ಅಲಂಕಾರದ ಸಂಭ್ರಮ

ಮಾರುಕಟ್ಟೆಯಲ್ಲಿ ಕೊರೊನಾ ಭಯವಿಲ್ಲದೆ ಸೇರಿದ ಜನಜಂಗುಳಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2020, 7:58 IST
Last Updated 25 ಅಕ್ಟೋಬರ್ 2020, 7:58 IST
ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಸೇರಿದ ಜನಸಂದಣಿ (ಎಡಚಿತ್ರ), ಹೂವು ಖರೀದಿಯಲ್ಲಿ ತೊಡಗಿದ್ದ ನಾಗರಿಕರು
ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಸೇರಿದ ಜನಸಂದಣಿ (ಎಡಚಿತ್ರ), ಹೂವು ಖರೀದಿಯಲ್ಲಿ ತೊಡಗಿದ್ದ ನಾಗರಿಕರು   

ತುಮಕೂರು: ಆಯುಧಪೂಜೆ ಮತ್ತು ವಿಜಯದಶಮಿ ಹಬ್ಬದ ಖರೀದಿಗಾಗಿ ಶನಿವಾರ ನಗರದ ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಜನರು ಸಾಲುಗಟ್ಟಿದ್ದರು. ಹೂ, ಹಣ್ಣು, ನಿಂಬೆಹಣ್ಣು ಮತ್ತು ಕುಂಬಳ ಕಾಯಿಯ ವ್ಯಾಪಾರ ಜೋರಾಗಿತ್ತು.

ಭಾನುವಾರ ಕಾರು, ಬೈಕ್‌ಗಳನ್ನು ಅಲಂಕರಿಸಲು ಅಗತ್ಯವಾದ ವಸ್ತುಗಳನ್ನು ಜನರು ಖರೀದಿಸಿದರು. ಕೊರೊನಾ ಭಯ ಸ್ವಲ್ಪವೂ ಇಲ್ಲದಂತೆ ಜನರು ವ್ಯವಹರಿಸಿದರು. ಒಬ್ಬರಿಗೊಬ್ಬರು ಒತ್ತೊತ್ತಾಗಿ ನಿಂತು ವ್ಯಾಪಾರ ವಹಿವಾಟು ನಡೆಸಿದರು. ಗುರುವಾರದಿಂದಲೇ ಮಾರುಕಟ್ಟೆಯಲ್ಲಿ ಜನರು ಹೆಚ್ಚು ಸೇರುತ್ತಿದ್ದರು.
ಶುಕ್ರವಾರ ಮತ್ತು ಶನಿವಾರ ಜನಸಂದಣಿ ತೀವ್ರವಾಗಿ ಇತ್ತು.
ಮಾರುಕಟ್ಟೆಯ ಹೊರಭಾಗದ ರಸ್ತೆಗಳಲ್ಲಿ ಬೈಕ್‌ಗಳು
ಸಾಲುಗಟ್ಟಿದ್ದವು.

ಎಸ್‌.ಎಸ್.ಪುರಂ, ಶೆಟ್ಟಿಹಳ್ಳಿ ಮುಖ್ಯರಸ್ತೆ ಹೀಗೆ ನಗರದ ವಿವಿಧ ಕಡೆಗಳಲ್ಲಿಯೂ ಸಣ್ಣಪುಟ್ಟ ವ್ಯಾಪಾರಿಗಳು ವ್ಯಾಪಾರ ನಡೆಸಿದರು. ಹೂ, ಹಣ್ಣು, ಕುಂಬಳಕಾಯಿ, ನಿಂಬೆಹಣ್ಣಿನ ಖರೀದಿಯೇ ಹೆಚ್ಚಿತ್ತು. ಎತ್ತ ನೋಡಿದರೂ ಹೂ ಖರೀದಿ ಭರಾಟೆಯಿಂದ ನಡೆದಿತ್ತು. ಹಾರಗಳ ಗಾತ್ರಕ್ಕೆ ಅನುಗುಣವಾಗಿ
₹ 50ರಿಂದ ಆರಂಭವಾಗುತ್ತಿದ್ದ ಬೆಲೆ
₹150ರವರೆಗೂ ಇತ್ತು. ಒಂದು ಮಾರು ಸೇವಂತಿ ₹ 100ರಿಂದ 150, ಕುಂಬಳ ಕಾಯಿ ಕೆ.ಜಿ.ಗೆ ₹ 40 ಬೆಲೆ ಇತ್ತು. 20 ಮಾರಿನ ಸೇವಂತಿಗೆ ಹೂ ಎರಡರಿಂದ ಎರಡೂವರೆ ಸಾವಿರದ ವರೆಗೆ ಮಾರಾಟವಾಯಿತು.

ADVERTISEMENT

ಶುಕ್ರವಾರವೇ ಪೂಜೆ: ಸಾಲು ರಜೆಯ ಕಾರಣ ನಗರದ ಬಹುತೇಕ ಸರ್ಕಾರಿ ಕಚೇರಿಗಳು, ಖಾಸಗಿ ಕಚೇರಿಗಳಲ್ಲಿ ಶುಕ್ರವಾರ ಸಂಜೆಯೇ ಆಯುಧ ಪೂಜೆ ಕಾರ್ಯಕ್ರಮ ಜರುಗಿತು.

ತುಮಕೂರಿನ ಲೋಕೋಪಯೋಗಿ ಕಾರ್ಯಪಾಲಕ ಎಂಜಿನಿಯರ್ ಕಚೇರಿ, ಸದಾಶಿವನಗರದಲ್ಲಿರುವ ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದ ಕಚೇರಿಯಲ್ಲಿ ಶುಕ್ರವಾರ ಸಂಜೆ ಆಯುಧ ಪೂಜೆ ನೆರವೇರಿಸಲಾಯಿತು. ಸಿಬ್ಬಂದಿ ತಳಿರು ತೋರಣಗಳಿಂದ ಕಚೇರಿಯನ್ನು ಸಿಂಗರಿಸಿ ಪೂಜೆಯಲ್ಲಿ ಪಾಲ್ಗೊಂಡರು. ಕಚೇರಿಯಲ್ಲಿರುವ ಕಂಪ್ಯೂಟರ್ ಸೇರಿದಂತೆ ವಿವಿಧ ವಸ್ತುಗಳಿಗೆ ಪೂಜೆ ಸಲ್ಲಿಸಿದರು.

ಶುಕ್ರವಾರ ಮತ್ತು ಶನಿವಾರ ನಗರದ ಗ್ಯಾರೇಜ್‌ಗಳು ಮತ್ತು ವಾಟರ್ ಸರ್ವಿಸ್‌ ಕೇಂದ್ರಗಳಲ್ಲಿ ಕಾರುಗಳು, ಬೈಕ್‌ಗಳು ಸಾಲುಗಟ್ಟಿದ್ದವು. ಕೆಲವರು ಹಬ್ಬದ ಮೂರು ದಿನ ಮುಂಚೆಯೇ ವಾಹನಗಳನ್ನು ಸರ್ವಿಸ್‌ಗೆ
ಬಿಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.