ತುಮಕೂರು: ಮನುಷ್ಯ ಕುಡಿತಕ್ಕೆ ದಾಸನಾಗುವುದರಿಂದ ಕುಟುಂಬ, ಸಮಾಜದ ಸ್ವಾಸ್ಥ್ಯ ಹಾಳಾಗಲಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ವಿನೋದ್ ಬಾಲನಾಯಕ್ ಅಭಿಪ್ರಾಯಪಟ್ಟರು.
ಅಶೋಕ ನಗರದಲ್ಲಿರುವ ಅಚರ್ಡ್ಮದ್ಯ ವರ್ಜನ ಹಾಗೂ ಪುನರ್ವಸತಿ ಕೇಂದ್ರದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದುಶ್ಚಟಗಳು ವ್ಯಕ್ತಿಯ ಸ್ವಭಾವ, ಸಂಕಲ್ಪ ಶಕ್ತಿ, ವ್ಯಕ್ತಿತ್ವಕ್ಕೆ ಹಾನಿ ಮಾಡುತ್ತವೆ. ವ್ಯಸನಮುಕ್ತರಾಗಿ ಶಾಂತಿ, ನೆಮ್ಮದಿಯ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.
ಯಾವುದೇ ಚಟ ಮನುಷ್ಯನನ್ನು ಅಂಧನನ್ನಾಗಿ ಮಾಡುತ್ತದೆ. ಜೀವನವನ್ನು ಸಂಪೂರ್ಣವಾಗಿ ಆವರಿಸಿ ಸರ್ವಸ್ವವನ್ನೂ ಕಬಳಿಸುವ ಶಕ್ತಿ ವ್ಯಸನಕ್ಕಿದೆ. ತನ್ನ ಶಕ್ತಿಯನ್ನು ತಾನೇ ಅರ್ಥಮಾಡಿಕೊಂಡು ಬದುಕುವ ಆತ್ಮ ಸ್ಥೈರ್ಯ ಹೊಂದಬೇಕು ಎಂದು ಹೇಳಿದರು.
ಮಗುವು ತಾಯಿಯ ಗರ್ಭದಲ್ಲಿ ಇರುವುದರಿಂದ ಹಿಡಿದು ತಾನು ಸಾಯುವವರೆಗೂ ಕಾನೂನು ಪಾಲನೆ ಮಾಡಬೇಕಾಗುತ್ತದೆ. ಆದುದರಿಂದ ಪ್ರತಿಯೊಬ್ಬರಿಗೂ ಕಾನೂನು ಅರಿವು ಅತ್ಯಗತ್ಯ ಎಂದರು.
ಅಚರ್ಡ್ಮದ್ಯ ವರ್ಜನ ಮತ್ತು ಪುನರ್ವಸತಿ ಕೇಂದ್ರದ ಕಾರ್ಯದರ್ಶಿ ಮಾಲ ಸದಾಶಿವಯ್ಯ, ‘ಈವರೆಗೂ 8 ಸಾವಿರಕ್ಕೂ ಅಧಿಕ ಮಂದಿಯನ್ನು ವ್ಯಸನ ಮುಕ್ತರನ್ನಾಗಿ ಮಾಡಲಾಗಿದೆ’ ಎಂದು ತಿಳಿಸಿದರು.
ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ರಮೇಶ್, ‘ಕುಡಿತದ ದಾಸ್ಯಕ್ಕೆ ಒಳಗಾಗಿ ಸಮಾಜದಲ್ಲಿ ಅತ್ಯಂತ ನಿಕೃಷ್ಟವಾದ ಜೀವನ ನಡೆಸುತ್ತಾರೆ. ಮುಂದಿನ ದಿನಗಳಲ್ಲಿ ಉತ್ತಮ ಜೀವನ ನಡೆಸಿ’ ಎಂದು ಸಲಹೆ ಮಾಡಿದರು.
ಅಚರ್ಡ್ ಕೇಂದ್ರದ ಕಾರ್ಯ ನಿರ್ವಾಹಕ ನಿರ್ದೇಶಕ ಡಾ.ಎಚ್.ಜಿ. ಸದಾಶಿವಯ್ಯ, ಯೋಜನಾ ಸಂಯೋಜಕ ವಿ. ಮುತ್ತುರಾಯಪ್ಪ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.