ತುಮಕೂರು: ತರಾತುರಿಯಲ್ಲಿ ಜಾತಿ ಗಣತಿ ವರದಿ ಜಾರಿ ಮಾಡಿ ಖಳನಾಯಕರಾಗಬೇಡಿ. ಇದು ಜೇನುಗೂಡಿಗೆ ಕೈ ಹಾಕಿದಂತೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲಹೆ ಮಾಡಿದ್ದಾರೆ.
ಗುಬ್ಬಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹತ್ತು ವರ್ಷ ಹಳೆಯದಾದ ಜಾತಿ ಗಣತಿ ವರದಿ ತಿರಸ್ಕರಿಸಿ, ಮತ್ತೊಮ್ಮೆ ಪಾರದರ್ಶಕವಾಗಿ ಸಮೀಕ್ಷೆ ನಡೆಸಬೇಕು. ಸಮಾಜದಲ್ಲಿ ಮತ್ತಷ್ಟು ಗೊಂದಲ ಸೃಷ್ಟಿಸಬಾರದು ಎಂದು ಮನವಿ ಮಾಡಿದರು.
‘ಒಂದು ಕಣ್ಣಿಗೆ ಎಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಹಚ್ಚಬೇಡಿ. ಈ ವರದಿ ಜಾರಿಯಾಗದಿದ್ದರೆ ಪ್ರಪಂಚ ಮುಳುಗಿ ಹೋಗುವುದಿಲ್ಲ. ಒಂದೂವರೆ ವರ್ಷ ಸಮಯ ಕೊಟ್ಟು ಮತ್ತೊಮ್ಮೆ ಸಮೀಕ್ಷೆ ಮಾಡಿಸಿ. ವರದಿ ಪಡೆದು ನೀವೇ ಜಾರಿಗೆ ತನ್ನಿ. ಆಗ ದೇವರಾಜ ಅರಸು ಅವರಂತೆ ನಿಮ್ಮನ್ನು ನೆನಪು ಮಾಡಿಕೊಳ್ಳುತ್ತೇವೆ’ ಎಂದರು.
‘ಈ ವರದಿ ಹತ್ತು ವರ್ಷ ಹಳೆಯದು. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಎಚ್.ಕಾಂತರಾಜು ವರದಿಗೆ ಸಹಿ ಮಾಡದೆ ಓಡಿ ಹೋಗಿದ್ದರು. ನಂತರ ಜಯಪ್ರಕಾಶ್ ಹೆಗ್ಡೆ ಅವರನ್ನು ಕರೆತಂದು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿದೆವು. ಅವರು ಎಲ್ಲೋ ಒಂದು ಕಡೆ ಕುಳಿತು ‘ಮಕ್ಕಿ ಕಾ ಮಕ್ಕಿ’ ವರದಿ ನೀಡಿದ್ದಾರೆ. ಎಲ್ಲರಲ್ಲೂ ಸ್ವಾರ್ಥ ತುಂಬಿರುವುದು ಕಾಣುತ್ತದೆ. ಯಾರಿಗೆ ತೊಂದರೆ ಆಗಲಿದೆ ಎನ್ನುವುದಕ್ಕಿಂತ ಗೊಂದಲ ಸೃಷ್ಟಿಯಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.