ADVERTISEMENT

ದುಬೈ ಚಿನ್ನದ ವ್ಯಾಪಾರ ಆಮಿಷ: ₹8 ಕೋಟಿ ವಂಚನೆ

ಉದ್ಯಮಿ ಕುಟುಂಬದ ಐವರ ವಿರುದ್ಧ ಎಫ್‌ಐಆರ್‌; ಹೆಚ್ಚಿನ ಲಾಭಾಂಶದ ಆಮಿಷವೊಡ್ಡಿ ಮೋಸ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 19:09 IST
Last Updated 25 ಆಗಸ್ಟ್ 2025, 19:09 IST
(ಸಾಂದರ್ಭಿಕ ಚಿತ್ರ)
(ಸಾಂದರ್ಭಿಕ ಚಿತ್ರ)   

ತುಮಕೂರು: ಚಿನ್ನದ ವ್ಯಾಪಾರದಲ್ಲಿ ಹಣ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಅಧಿಕ ಲಾಭಾಂಶ ನೀಡಲಾಗುವುದು ಎಂಬ ಬೆಂಗಳೂರು ಉದ್ಯಮಿಯೊಬ್ಬರ ಮಾತಿಗೆ ಮರುಳಾದ ನಗರದ ನಾಲ್ವರು ಉದ್ಯಮಿಗಳು ₹7.75 ಕೋಟಿ ಕಳೆದುಕೊಂಡಿದ್ದಾರೆ.

ನಗರದ ಬಾರ್‌ಲೈನ್‌ ರಸ್ತೆಯ ಅಕ್ಬರ್‌ ಇಲಿಯಾಜ್‌ ಅಹ್ಮದ್‌ ನೀಡಿದ ದೂರಿನ ಮೇರೆಗೆ ಬೆಂಗಳೂರಿನ ಉದ್ಯಮಿ ಅಬ್ದುಲ್‌ ಕರೀಂ, ಪತ್ನಿ ಜೀನತ್‌, ಮಗ ಮಹ್ಮದ್‌ ಇಬ್ರಾಹಿಂ, ಮಗಳು ಖತೀಜಾ ಫಿಜಾ, ಅಳಿಯ ರಿಜ್ವಾನ್‌ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಅಬ್ದುಲ್‌ ಕರೀಂ 2023ರಲ್ಲಿ ಆಕಸ್ಮಿಕವಾಗಿ ಪರಿಚಯವಾದರು. ನಂತರದ ದಿನಗಳಲ್ಲಿ ಇಬ್ಬರ ಮಧ್ಯೆ ಒಡನಾಟ ಬೆಳೆಯಿತು. ದುಬೈನಲ್ಲಿ ಚಿನ್ನದ ವಹಿವಾಟು ನಡೆಸುತ್ತಿರುವ ಬಗ್ಗೆ ತಿಳಿಸಿದ್ದರು. ₹10 ಕೋಟಿ ಅವಶ್ಯಕತೆ ಇದ್ದು, ನೀವು ಹಣ ನೀಡಿದರೆ ಪ್ರತಿ ತಿಂಗಳು ಲಾಭಾಂಶ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ನನ್ನ ಬಳಿ ಅಷ್ಟೊಂದು ಹಣವಿಲ್ಲ ಎಂದು ತಿಳಿಸಿದ್ದೆ. ನಿಮ್ಮ ಸ್ನೇಹಿತರನ್ನು ಒಂದು ಕಡೆ ಸೇರಿಸಿ ನಾನು ಮಾತನಾಡುತ್ತೇನೆ ಎಂದು ಹೇಳಿದ್ದರು’ ಎಂದು ಅಕ್ಬರ್‌ ಇಲಿಯಾಜ್‌ ಅಹ್ಮದ್‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

‘ಇದಾದ ಬಳಿಕ ಅಬ್ದುಲ್‌ ಕರೀಂ ತನ್ನ ಹೆಂಡತಿ, ಮಗ, ಮಗಳು, ಅಳಿಯನ ಜತೆಗೆ ನಮ್ಮ ಮನೆಗೆ ಬಂದು ಹಣ ಹೂಡಿಕೆ ಬಗ್ಗೆ ಚರ್ಚಿಸಿದ್ದರು. ಈ ವೇಳೆ ನನ್ನ ಸ್ನೇಹಿತರಾದ ಮುಸದ್ಧೀಕ್‌ ನಯಾಜ್‌, ಮೊಹ್ಮದ್‌ ಇಕ್ಬಾಲ್‌, ಲೋಕೇಶ್‌ ಸಹ ಇದ್ದರು. ಅವರ ಮಾತು ನಂಬಿ ಹಣ ಹೂಡಿಕೆ ಮಾಡಲು ಒಪ್ಪಿಗೆ ನೀಡಿದ್ದೆವು’ ಎಂದು ಅವರು ತಿಳಿಸಿದ್ದಾರೆ.

‘ನಾನು ಮೂರು ಹಂತದಲ್ಲಿ ಒಟ್ಟು ₹47.42 ಲಕ್ಷವನ್ನು ಅಬ್ದುಲ್‌ ಕರೀಂ ಹೇಳಿದ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಿದ್ದೆ. ಕೆಲ ದಿನಗಳ ನಂತರ ಲಾಭಾಂಶದ ಹಣವೆಂದು ₹1 ಕೋಟಿಯನ್ನು ನನ್ನ ಖಾತೆಗೆ ವರ್ಗಾಯಿಸಿದ್ದರು. ಇದನ್ನು ನಂಬಿ ಹಂತ ಹಂತವಾಗಿ ಒಟ್ಟು ₹3 ಕೋಟಿ ನೀಡಿದ್ದೇನೆ’ ಎಂದು ದೂರಿನಲ್ಲಿ ನಮೂದಿಸಿದ್ದಾರೆ.

‘ನನ್ನ ಸಂಬಂಧಿ ಮುಸದ್ಧೀಕ್‌ ನಯಾಜ್‌ ₹1.20 ಕೋಟಿ, ಸ್ನೇಹಿತ ಮೊಹ್ಮದ್‌ ಇಕ್ಬಾಲ್‌ ₹10 ಲಕ್ಷ, ಲೋಕೇಶ್‌ ₹12.49 ಲಕ್ಷ ಮತ್ತು ಆತನ ಸ್ನೇಹಿತರಿಂದ ₹3.50 ಕೋಟಿ ವರ್ಗಾವಣೆ ಮಾಡಿಸಿದ್ದಾರೆ. ಒಟ್ಟು ₹8.76 ಕೋಟಿ ಹೂಡಿಕೆಗೆ ಲಾಭಾಂಶವಾಗಿ ₹1 ಕೋಟಿ ವಾಪಸ್ ನೀಡಿದ್ದಾರೆ. ಇದರ ನಂತರ ಅಸಲು, ಲಾಭಾಂಶ ನೀಡದೆ ಸಂಪರ್ಕಕ್ಕೆ ಸಿಗದೆ ತಲೆಮರೆಸಿಕೊಂಡಿದ್ದಾರೆ’ ಎಂದು ದೂರಿದ್ದಾರೆ. ಲಾಭಾಂಶ ನೀಡುವುದಾಗಿ ನಂಬಿಸಿ ಹಣ ಪಡೆದು, ಮೋಸ ಮಾಡಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಕೋರಿದ್ದಾರೆ. 

ದುಬೈನಲ್ಲಿ ಆರೋಪಿ ವಂಚನೆ

ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬ್ಯಾಂಕ್‌ ವಿವರ ಪಡೆಯಲಾಗುವುದು. ವಂಚಿಸಿದ ಉದ್ಯಮಿ ದುಬೈನಲ್ಲಿ ಇರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ‘ಆರೋಪಿ ಚಿನ್ನದ ವ್ಯಾಪಾರದಲ್ಲಿ ಹೂಡಿಕೆ ಮಾಡಲು ಹಣ ಕೇಳಿದ್ದಾರೆ. ಹೆಚ್ಚಿನ ಲಾಭ ನೀಡಲಾಗುವುದು ಎಂದು ನಂಬಿಸಲು ಮೊದಲು ಒಂದಷ್ಟು ಹಣ ವಾಪಸ್‌ ಕೊಟ್ಟಿದ್ದಾರೆ. ಇದನ್ನು ನೋಡಿ ಉಳಿದವರು ಸಹ ಹೂಡಿಕೆ ಮಾಡಿದ್ದಾರೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.