ADVERTISEMENT

ತುಮಕೂರು: ಈದ್ ಮಿಲಾದ್ ಸರಳ ಆಚರಣೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2021, 2:58 IST
Last Updated 20 ಅಕ್ಟೋಬರ್ 2021, 2:58 IST
ತುಮಕೂರಿನಲ್ಲಿ ಈದ್‍ಮಿಲಾದ್ ಹಬ್ಬವನ್ನು ಸರಳವಾಗಿ ಆಚರಿಸಿ, ಉಳಿತಾಯ ಮಾಡಿದ ₹1 ಲಕ್ಷ ಹಣವನ್ನು ಶಾಂತಿನಗರದ ಹಬೀಬಿಯ ಮಸೀದಿಗೆ ದೇಣಿಗೆಯಾಗಿ ನೀಡಿದ ಇಕ್ಬಾಲ್ ಅಹಮ್ಮದ್ ಅವರನ್ನು ಅಭಿನಂದಿಸಲಾಯಿತು. ಮಸೀದಿ ಅಧ್ಯಕ್ಷ ಆಡಿಟರ್‌ ಸುಲ್ತಾನ್ ಮೆಹಮೂದ್, ಮಸೀದಿಯ ಮುತುವಲ್ಲಿ ಹಾಗೂ ಕಾರ್ಯದರ್ಶಿ ಅಪ್ಸರ್, ಫಹಾಗ್, ಮುಖಂಡರಾದ ಆಲಂ, ಅನ್ವರ್, ಸಮದ್ ಉಪಸ್ಥಿತರಿದ್ದರು
ತುಮಕೂರಿನಲ್ಲಿ ಈದ್‍ಮಿಲಾದ್ ಹಬ್ಬವನ್ನು ಸರಳವಾಗಿ ಆಚರಿಸಿ, ಉಳಿತಾಯ ಮಾಡಿದ ₹1 ಲಕ್ಷ ಹಣವನ್ನು ಶಾಂತಿನಗರದ ಹಬೀಬಿಯ ಮಸೀದಿಗೆ ದೇಣಿಗೆಯಾಗಿ ನೀಡಿದ ಇಕ್ಬಾಲ್ ಅಹಮ್ಮದ್ ಅವರನ್ನು ಅಭಿನಂದಿಸಲಾಯಿತು. ಮಸೀದಿ ಅಧ್ಯಕ್ಷ ಆಡಿಟರ್‌ ಸುಲ್ತಾನ್ ಮೆಹಮೂದ್, ಮಸೀದಿಯ ಮುತುವಲ್ಲಿ ಹಾಗೂ ಕಾರ್ಯದರ್ಶಿ ಅಪ್ಸರ್, ಫಹಾಗ್, ಮುಖಂಡರಾದ ಆಲಂ, ಅನ್ವರ್, ಸಮದ್ ಉಪಸ್ಥಿತರಿದ್ದರು   

ತುಮಕೂರು: ಮುಸ್ಲಿಮರು ಈದ್‍ಮಿಲಾದ್ ಹಬ್ಬವನ್ನು ಮಂಗಳವಾರ ಸರಳವಾಗಿ ಆಚರಿಸಿದರು. ಕೋವಿಡ್ ನಿಯಮದಂತೆ ಕೆಲವರು ಮಾತ್ರ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬಹುತೇಕರು ಮನೆಗಳಲ್ಲೇ ಆಚರಣೆ ಮಾಡಿದರು.

ಕೋವಿಡ್‌ನಿಂದಾಗಿ ಸಾಮೂಹಿಕ ಮೆರವಣಿಗೆ (ಜುಲೂಸ್), ಖಬ್ರಸ್ಥಾನ್ ಹಾಗೂ ಇತರೆ ತೆರೆದ ಸ್ಥಳಗಳಲ್ಲಿ ಒಂದೆಡೆ ಸೇರುವುದು, ಸಾರ್ವಜನಿಕ ಪ್ರದೇಶಗಳಲ್ಲಿ ಧ್ವನಿವರ್ಧಕಗಳನ್ನು ಬಳಸುವುದು, ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರವಚನ, ಸಭೆ ಸಮಾರಂಭಗಳನ್ನು ನಡೆಸದಂತೆ ರಾಜ್ಯ ಸರ್ಕಾರ ನಿರ್ಬಂಧ ವಿಧಿಸಿತ್ತು.

ನೆರವು: ಇತರರಿಗೆ ಸಹಾಯ ಹಸ್ತ ಚಾಚುವ ಮೂಲಕ ಜಿಲ್ಲಾ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಇಕ್ಬಾಲ್ ಅಹಮ್ಮದ್ ಹಬ್ಬ ಆಚರಿಸಿದರು. ₹1 ಲಕ್ಷದ ಚೆಕ್‍ಅನ್ನು ಶಾಂತಿನಗರದ ಹಬೀಬಿಯ ಮಸೀದಿ ಅಧ್ಯಕ್ಷರಿಗೆ ಹಸ್ತಾಂತರಿಸಿದರು.

ADVERTISEMENT

ಮಸೀದಿ ಅಧ್ಯಕ್ಷ ಆಡಿಟರ್ ಸುಲ್ತಾನ್ ಮೆಹಮೂದ್ ಅವರಿಗೆ ಚೆಕ್ ವಿತರಿಸಿದರು. ಪ್ರವಾದಿ ಮಹಮ್ಮದ್ ಅವರ ಜನ್ಮ ದಿನದಂದು ಈದ್ ಮಿಲಾದ್ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತಿತ್ತು. ಕೋವಿಡ್‌ನಿಂದಾಗಿ ಸರ್ಕಾರದ ಮಾರ್ಗಸೂಚಿ ಅನ್ವಯ ಸರಳವಾಗಿ ಆಚರಿಸಲಾಗುತ್ತಿದೆ ಎಂದು ಇಕ್ಬಾಲ್ ಹೇಳಿದರು.

ಪ್ರವಾದಿ ಮಹಮ್ಮದ್ ಅವರ ಆಶಯದಂತೆ ಉಳ್ಳವರು ನಿರ್ಗತಿಕರಿಗೆ ಸಹಾಯ ಮಾಡಬೇಕು. ಸಮಾಜದಲ್ಲಿರುವ ಬಡವರು, ನಿರ್ಗತಿಕರು, ವಿಧವೆಯರಿಗೆ ನೆರವು ನೀಡಲಾಗುತ್ತದೆ. ಶಿಕ್ಷಣ ಮತ್ತು ಶುಚಿತ್ವಕ್ಕೆ ಆದ್ಯತೆ ನೀಡಿ, ದುಂದು ವೆಚ್ಚಮಾಡಿ ಹಬ್ಬ ಆಚರಿಸದೆ ಈ ಹಣವನ್ನು ಅಗತ್ಯ ಕಾರ್ಯಕ್ಕೆ ಬಳಸಿಕೊಳ್ಳುವಂತೆ ನೆರವಾಗುವ ಸಲುವಾಗಿ ಸಹಾಯ ಮಾಡಲಾಯಿತು. ಮಸೀದಿಯ ಶೌಚಾಲಯ, ಸ್ವಚ್ಛತೆ ಇತರೆ ಕಾರ್ಯಗಳಿಗೆ ಈ ಹಣ ಬಳಸಲಾಗುತ್ತದೆ ಎಂದು ತಿಳಿಸಿದರು.

ಈ ಹಿಂದೆ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಮಸೀದಿಗಳಲ್ಲಿ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗುತ್ತಿತ್ತು. ಅದನ್ನು ಕೂಡ ಈ ವರ್ಷ ಕೈಗೊಂಡಿಲ್ಲ. ಮಾರ್ಗಸೂಚಿಯಂತೆ ಕೆಲವು ಮಸೀದಿಗಳಲ್ಲಿ ಅಂತರ ಕಾಯ್ದುಕೊಂಡು ಪ್ರಾರ್ಥನೆ ಸಲ್ಲಿಸಲಾಯಿತು ಎಂದರು.

ಮಸೀದಿಯ ಅಧ್ಯಕ್ಷ ಆಡಿಟರ್ ಸುಲ್ತಾನ್ ಮೆಹಮೂದ್, ‘ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿಇಕ್ಬಾಲ್ ಅಹಮ್ಮದ್ ಅವರು ಕೋವಿಡ್ ಕೇರ್ ಸೆಂಟರ್ ಆರಂಭಿಸಿ, 4 ಸಾವಿರ ಜನರಿಗೆ ಉಚಿತವಾಗಿ ಚಿಕಿತ್ಸೆ ಕೊಡಿಸಿದರು’ ಎಂದು ನೆನಪಿಸಿಕೊಂಡರು.

ಮಸೀದಿಯ ಮುತುವಲ್ಲಿ ಹಾಗೂ ಕಾರ್ಯದರ್ಶಿ ಅಪ್ಸರ್, ಫಹಾಗ್, ಮುಖಂಡರಾದ ಆಲಂ, ಅನ್ವರ್, ಸಮದ್ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.