ADVERTISEMENT

ತುಮಕೂರು| ಸರ್ಕಾರಿ ಕಚೇರಿ: ₹3.81 ಕೋಟಿ ವಿದ್ಯುತ್‌ ಬಿಲ್‌ ಬಾಕಿ

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 4:16 IST
Last Updated 26 ಜನವರಿ 2026, 4:16 IST
ತುಮಕೂರು ಜಿಲ್ಲಾಧಿಕಾರಿ ಕಚೇರಿ
ತುಮಕೂರು ಜಿಲ್ಲಾಧಿಕಾರಿ ಕಚೇರಿ   

ತುಮಕೂರು: ಜಿಲ್ಲೆಯಲ್ಲಿ ಪ್ರಮುಖ ಇಲಾಖೆಗಳು ಕೋಟ್ಯಂತರ ರೂಪಾಯಿ ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡಿವೆ. ಸರ್ಕಾರಿ ಕಚೇರಿ, ಹಾಸ್ಟೆಲ್‌, ವಸತಿ ಗೃಹ, ಅತಿಥಿ ಗೃಹಗಳಿಂದ ₹3.81 ಕೋಟಿ ಪಾವತಿ ಮಾಡಬೇಕಿದೆ.

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಅಧಿಕ ₹2,14,38,673 ವಿದ್ಯುತ್‌ ಬಿಲ್‌ ಕಟ್ಟಬೇಕಾಗಿದೆ. ಇಲಾಖೆಯ ಕಚೇರಿ, ತರಬೇತಿ ಕೇಂದ್ರಗಳಿಂದ ವಿದ್ಯುತ್‌ಗಾಗಿ ಹಣ ಬಿಡುಗಡೆ ಮಾಡಿಲ್ಲ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ₹1,23,50,937 ಪಾವತಿಸಬೇಕಿದೆ. ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆಗಳಿಂದ ಸಕಾಲಕ್ಕೆ ಬಿಲ್ ಪಾವತಿ ಆಗುತ್ತಿಲ್ಲ. ಕಳೆದ ಒಂದು ವರ್ಷದಿಂದ ಆಸ್ಪತ್ರೆಗಳ ವಿದ್ಯುತ್‌ ಶುಲ್ಕ ಬಾಕಿ ಉಳಿಸಿಕೊಳ್ಳಲಾಗಿದೆ.

ಆಯಾ ತಿಂಗಳು ಸರಿಯಾದ ಸಮಯಕ್ಕೆ ಶುಲ್ಕ ಪಾವತಿಸಿದರೆ ಸರ್ಕಾರಕ್ಕೂ ಆದಾಯ ಸಿಗುತ್ತದೆ. ಆದರೆ, ಸರ್ಕಾರಿ ಅಧಿಕಾರಿಗಳೇ ಈ ಕುರಿತು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದ ವಿದ್ಯುತ್‌ ಬಿಲ್‌ ಪಾವತಿಯೂ ಆಗಿಲ್ಲ. ಈ ಹಿಂದೆ ಬಿಲ್‌ ಕಟ್ಟದ ಕಾರಣಕ್ಕೆ ಕ್ರೀಡಾಂಗಣದ ವಿದ್ಯುತ್‌ ಪೂರೈಕೆ ಸ್ಥಗಿತಗೊಳಿಸಲಾಗಿತ್ತು. ಇದರ ನಂತರವೂ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಈವರೆಗೆ ₹11 ಲಕ್ಷ ಬಿಲ್‌ ಕಟ್ಟಬೇಕಿದೆ.

ADVERTISEMENT

‘ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಅವರ ಕಚೇರಿ ಇದೆ. ಕ್ರೀಡಾಕೂಟ, ರಾಷ್ಟ್ರೀಯ ಹಬ್ಬಗಳ ಸಮಯದಲ್ಲಿ ಮಾತ್ರ ಕ್ರೀಡಾಂಗಣದ ಕುರಿತು ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸುತ್ತಾರೆ. ನಂತರ ದಿನಗಳಲ್ಲಿ ಇತ್ತ ಸುಳಿಯುವುದಿಲ್ಲ. ಹೀಗಾಗಿ ಇದರ ನಿರ್ವಹಣೆ ಕ್ರೀಡಾ ಇಲಾಖೆಗೆ ಸವಾಲಾಗಿದೆ. ವಿದ್ಯುತ್ ಶುಲ್ಕ ಪಾವತಿಗೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ’ ಎಂದು ಹಿರಿಯ ಕ್ರೀಡಾಪಟು ಪ್ರತಿಕ್ರಿಯಿಸಿದರು.

ಸಮಾಜ ಕಲ್ಯಾಣ ವಿದ್ಯಾರ್ಥಿ ನಿಲಯಗಳ ಸ್ಥಿತಿಯೂ ಹೀಗೆ ಇದೆ. ಇಲಾಖೆಯ ಕಚೇರಿಗಳು, ಹಾಸ್ಟೆಲ್‌ ಒಳಗೊಂಡಂತೆ ಒಟ್ಟು ₹3,46,074 ಬಿಲ್‌ ಬೆಸ್ಕಾಂಗೆ ಪಾವತಿಸಬೇಕಿದೆ. ಹಲವು ತಿಂಗಳುಗಳಿಂದ ಶುಲ್ಕ ಬಾಕಿ ಇದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಆಹಾರ ಮತ್ತು ನಾಗರಿಕ ಸಬಲೀಕರಣ ಇಲಾಖೆ ಕಚೇರಿ ಅತಿ ಕಡಿಮೆ ₹6,898 ಶುಲ್ಕ ಬಾಕಿ ಉಳಿಸಿಕೊಂಡಿದೆ.

ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಇಲಾಖೆಗಳು

ನೋಟಿಸ್‌ ಜಾರಿ

ಹಲವು ತಿಂಗಳುಗಳಿಂದ ವಿದ್ಯುತ್‌ ಶುಲ್ಕ ಪಾವತಿಸದ ಇಲಾಖೆಗಳಿಗೆ ಬೆಸ್ಕಾಂ ವತಿಯಿಂದ ನೋಟಿಸ್‌ ಜಾರಿ ಮಾಡಲಾಗುತ್ತದೆ. ಇಲಾಖೆ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ನೋಟಿಸ್‌ ಹೆಸರಿಗೆ ಮಾತ್ರ ಎಂಬಂತಾಗಿದೆ. ಪ್ರಮುಖ ಇಲಾಖೆಗಳಿಂದ ಶುಲ್ಕ ಬಾಕಿ ಉಳಿಯುತ್ತಿದೆ. ಬಾಕಿ ಹಣ ಸಂದಾಯ ಆಗುತ್ತಿಲ್ಲ. ಇಲಾಖೆ ಕಚೇರಿಗಳ ವಿದ್ಯುತ್‌ ಪೂರೈಕೆ ಕಡಿತಗೊಳಿಸುವ ಚಿಂತನೆಯಲ್ಲಿ ಬೆಸ್ಕಾಂ ಅಧಿಕಾರಿಗಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.