ಗುಬ್ಬಿ: ತಾಲ್ಲೂಕಿನ ಸುಂಕಾಪುರದಲ್ಲಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಗೆ ಜಿಲ್ಲೆಯ ರೈತರ ಹಾಗೂ ಹೋರಾಟಗಾರರ ವಿರೋಧದ ನಡುವೆಯೂ ಶುಕ್ರವಾರ ಅಧಿಕಾರಿಗಳು ಚಾಲನೆ ನೀಡಿದರು.
ಕಾಮಗಾರಿ ತಡೆಯಲೆಂದು ಸ್ಥಳಕ್ಕೆ ತೆರಳಲು ತಾಲ್ಲೂಕಿನ ವಿವಿಧೆಡೆಗಳಿಂದ ಬರುತ್ತಿದ್ದವರನ್ನು ಪೊಲೀಸರು ದಾರಿಯಲ್ಲಿಯೇ ತಡೆದರು. ಆದಾಗ್ಯೂ ಕೆಲವರು ಕಡಬ ಹೋಬಳಿ ಅತ್ತಿಕಟ್ಟೆ ಗೇಟ್ ಬಳಿ ಬಂದಾಗ ನಾಕಾಬಂಧಿ ಹಾಕಿ ಕಾಮಗಾರಿ ಸ್ಥಳಕ್ಕೆ ತೆರಳದಂತೆ ತಡೆದರು. ಇದನ್ನು ಖಂಡಿಸಿ ರಸ್ತೆಯಲ್ಲಿಯೇ ಕುಳಿತು ಪ್ರತಿಭಟನೆ ನಡೆಸಿದರು.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸಚಿವ ವಿ.ಸೋಮಣ್ಣ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಹೋರಾಟಕ್ಕೆ ಸಿದ್ಧನಿದ್ದು, ಕ್ಷೇತ್ರದ ಜನರ ಜೊತೆ ನಿಲ್ಲುವದಾಗಿ ತಿಳಿಸಿದ್ದರು. ಆದರೆ ಗೆದ್ದು ಸಚಿವರಾದ ನಂತರ ಲಿಂಕ್ಕೆನಾಲ್ ಹೋರಾಟದ ಬಗ್ಗೆ ಚಕಾರ ಎತ್ತಿಲ್ಲ. ಇದಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕ ಸೊಗಡು ಶಿವಣ್ಣ ಮಾತನಾಡಿ, ಅವೈಜ್ಞಾನಿಕವಾಗಿ ನಡೆಯುತ್ತಿರುವ ಕಾಮಗಾರಿಯನ್ನು ಯಾವುದೇ ಕಾರಣಕ್ಕೂ ನಡೆಯಲು ಬಿಡುವುದಿಲ್ಲ. ಜಿಲ್ಲೆಯ ಜನರ ಹಿತಕಾಪಾಡಲು ಜೈಲಿಗೆ ಹೋಗಲು ಸಿದ್ಧ. ಕಾಮಗಾರಿಯನ್ನು ಕಾನೂನು ರೀತಿ ಮಾಡುತ್ತಿದ್ದಲ್ಲಿ ಅಪಾರ ಸಂಖ್ಯೆಯ ಪೊಲೀಸ್ ಬಂದೋಬಸ್ತ್ ಅಗತ್ಯವಿರಲಿಲ್ಲ. ಕಾನೂನು ಬಾಹಿರವಾಗಿದ್ದರಿಂದಲೇ ಪೊಲೀಸ್ ಬಲ ಪ್ರಯೋಗಿಸಿ ಹೋರಾಟಗಾರರನ್ನು ಹತ್ತಿಕ್ಕಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದರು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ತಾಲ್ಲೂಕಿನ ರೈತರ ಜೀವನಾಡಿಯಾಗಿರುವ ಹೇಮಾವತಿ ನಾಲೆಯ ನೀರನ್ನು ಜಿಲ್ಲೆಯ ಜನರ ವಿರೋಧದ ನಡುವೆಯೂ ರಾಮನಗರ ಭಾಗಕ್ಕೆ ತೆಗೆದುಕೊಂಡು ಹೋಗಲು ಸರ್ಕಾರ ಮುಂದಾಗಿರುವುದು ದುರಾದೃಷ್ಟಕರ ಎಂದರು.
ಎಸ್.ಡಿ. ದಿಲೀಪ್ ಕುಮಾರ್ ಮಾತನಾಡಿ, ತಾಲ್ಲೂಕಿನ ಶಾಸಕರು ಹೋರಾಟದ ಬಗ್ಗೆ ತುಟಿ ಬಿಚ್ಚಿಲ್ಲ. ಅಧಿಕಾರದ ಆಸೆಗಾಗಿ ತಾಲ್ಲೂಕಿನ ಸ್ವಾಭಿಮಾನವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಅಡವಿಟ್ಟಂತೆ ಕಾಣುತ್ತಿದೆ ಎಂದು ಟೀಕಿಸಿದರು.
ಕಾಮಗಾರಿ ಸ್ಥಳಕ್ಕೆ ಮುತ್ತಿಗೆಹಾಕಿ ಶಾಂತಿಯುತ ಪ್ರತಿಭಟನೆ ಮಾಡುತ್ತೇವೆ ಎಂದು ಹೋರಾಟಗಾರರು ತಿಳಿಸಿದರೂ, ಕೇಳದ ತಾಲ್ಲೂಕು ಆಡಳಿತ ಹಾಗೂ ಪೊಲೀಸರು ಹೋರಾಟಗಾರರನ್ನು ವಶಕ್ಕೆ ಪಡೆದು ಬಸ್ನಲ್ಲಿ ಬೇರೆಡೆ ಸ್ಥಳಾಂತರಿಸಿದರು.
ಪ್ರತಿಭಟನೆಯ ಆತಂಕದಲ್ಲಿಯೇ ಕಾಮಗಾರಿ ಪ್ರಾರಂಭಿಸಿದ್ದ ಗುತ್ತಿಗೆದಾರರು ನಂತರ ನಿರಾತಂಕವಾಗಿ ಬೃಹತ್ ಯಂತ್ರಗಳ ಮೂಲಕ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾಮಗಾರಿ ಮುಂದುವರೆಸಿದ್ದರು.
ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೇಗೌಡ, ಕಾರ್ಯದರ್ಶಿ ಲೋಕೇಶ್, ಪದಾಧಿಕಾರಿಗಳು, ಮುಖಂಡರಾದ ಕಾಡಶೆಟ್ಟಿಹಳ್ಳಿ ಸತೀಶ್, ಭೈರಪ್ಪ, ಪಂಚಾಕ್ಷರಿ, ಪ್ರಭಾಕರ್, ಲೋಕೇಶ್, ಗಿರೀಶ್, ರೈತರು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಿದ್ದರು.
ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಸಿದ್ಧತೆ
ಕಾನೂನು ರೀತಿಯಲ್ಲಿ ಶಾಂತಿಯುತವಾಗಿ ಹೋರಾಟ ಮಾಡಲು ಮುಂದಾಗಿದ್ದರೂ ತಾಲ್ಲೂಕು ಆಡಳಿತ ಹಾಗೂ ಪೊಲೀಸರು ಹೋರಾಟ ಹತ್ತಿಕ್ಕಲು ಪ್ರಯತ್ನಿಸುತ್ತಿರುವುದು ಖಂಡನೀಯ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ. ಗೋವಿಂದರಾಜು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅವೈಜ್ಞಾನಿಕ ಕಾಮಗಾರಿ ತಡೆಯುವ ಉದ್ದೇಶದಿಂದ ಮೇ 26ರಂದು ತುಮಕೂರಿನಲ್ಲಿ ಪಕ್ಷಾತೀತವಾಗಿ ಸಭೆ ಕರೆಯಲಾಗಿದೆ. ಸಭೆ ನಂತರ ‘ಮಾಡು ಇಲ್ಲವೇ ಮಡಿ’ ಹೋರಾಟಕ್ಕೆ ಮುಂದಾಗುತ್ತೇವೆ ಎಂದರು. ಎಸ್.ಡಿ. ದಿಲೀಪ್ ಕುಮಾರ್ ಮಾತನಾಡಿ ಲಿಂಕ್ ಕೆನಾಲ್ ಕಾಮಗಾರಿ ಜನಪರ ಯೋಜನೆಯಾಗಿರದೆ ಹಣ ಲೂಟಿ ಮಾಡುವ ಯೋಜನೆಯಾಗಿದೆ. ಯಾವುದೇ ಭೂ ಸ್ವಾಧೀನ ಪ್ರಕ್ರಿಯೆ ಮಾಡದೆ ಅಕ್ರಮವಾಗಿ ಕಾಮಗಾರಿ ನಡೆಸುತ್ತಿರುವುದರಿಂದ ಈಗಾಗಲೇ ನ್ಯಾಯಾಲಯದಲ್ಲಿ ದಾವೆ ಸಲ್ಲಿಸಲಾಗಿದೆ. ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿ ಕಾನೂನು ಹೋರಾಟ ಮಾಡಲು ಸಿದ್ಧ ಎಂದರು. ಕಾಡಶೆಟ್ಟಿಹಳ್ಳಿ ಸತೀಶ್ ಮಾತನಾಡಿ ಪ್ರಸ್ತುತ ಯೋಜನೆಯಂತೆ ಕಾಲುವೆ ನಿರ್ಮಾಣವಾದಲ್ಲಿ 70ನೇ ಕಿ.ಮೀ ನಿಂದ ಮುಂದಕ್ಕೆ ನೀರು ಹರಿಯಲು ಸಾಧ್ಯವಾಗದೆ ತಾಲ್ಲೂಕು ಬರ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ರೈತ ಸಂಘದ ಮುಖಂಡರು ಲಿಂಕ್ ಕೆನಾಲ್ ವಿರೋಧಿ ಹೋರಾಟಗಾರರು ಹಾಗೂ ರೈತರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.