ಗುಬ್ಬಿ: ತಾಲ್ಲೂಕಿನ ಗಡಿ ಭಾಗದ ಕಡಬ ಹೋಬಳಿ ಬಿಳೆನಂದಿ ಅರಣ್ಯ ಪ್ರದೇಶದಲ್ಲಿ ಗಿಡಗಳನ್ನು ಕಡಿದು ಒತ್ತುವರಿ ಮಾಡಿಕೊಂಡಿದ್ದ ಪ್ರದೇಶದಲ್ಲಿ ಸಾಮಾಜಿಕ ವಲಯ ಅರಣ್ಯಾಧಿಕಾರಿ ಹೊಸದಾಗಿ ಸಸಿಗಳನ್ನು ನೆಟ್ಟು ಪೋಷಿಸಲು ಮುಂದಾಗಿದ್ದಾರೆ.
ಬಿಳೆನಂದಿ ಅರಣ್ಯ ಪ್ರದೇಶದಲ್ಲಿ ಒತ್ತುವರಿ ಖಂಡಿಸಿ ಸುತ್ತಮುತ್ತಲ ಗ್ರಾಮಸ್ಥರು ವಾರದ ಹಿಂದೆ ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ತುರ್ತುಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.
ಅರಣ್ಯ ಒತ್ತುವರಿ ಮಾಡುವುದು ಕಾನೂನು ಬಾಹಿರ. ಯಾವುದೇ ವ್ಯಕ್ತಿ ಒತ್ತುವರಿ ಮಾಡುತ್ತಿರುವುದು ಕಂಡುಬಂದಲ್ಲಿ ಇಲಾಖೆಯ ಗಮನಕ್ಕೆ ತರುವಂತೆ ಅರಣ್ಯಾಧಿಕಾರಿಗೆ ಗ್ರಾಮಸ್ಥರಿಗೆ ತಿಳಿಸಿದರು.
ಎಲ್ಲರೂ ಸಹಕಾರ ಮನೋಭಾವನೆಯಿಂದ ಇದ್ದು, ಪರಿಸರ ಸಂರಕ್ಷಣೆಗೆ ಮುಂದಾಗಬೇಕಿದೆ. ಅರಣ್ಯ ಪ್ರದೇಶ ಸಂರಕ್ಷಣೆ ವಿಚಾರದಲ್ಲಿ ಇಲಾಖೆಯ ಅಧಿಕಾರಿಗಳಿಗೆ ಅಗತ್ಯ ಸಹಕಾರ ನೀಡುವುದಾಗಿ ಗ್ರಾಮಸ್ಥರು ತಿಳಿಸಿದರು.
ಅಕ್ರಮವಾಗಿ ಗಿಡ ತೆರವುಗೊಳಿಸಿ ಒತ್ತುವರಿಯಾಗಿದ್ದ ಜಾಗದಲ್ಲಿ ಹೊಸದಾಗಿ ಹಣ್ಣಿನ ಮತ್ತು ಕಾಡು ಮರಗಳ ಸಸಿ ನೆಟ್ಟಿದ್ದೇವೆ. ಗೋಮಾಳ ಪ್ರದೇಶವನ್ನು ತಹಶೀಲ್ದಾರ್ ಜಂಟಿ ಸರ್ವೆ ನಡೆಸಿ ಇಲಾಖೆಯ ವಶಕ್ಕೆ ನೀಡಿದಲ್ಲಿ ಮತ್ತಷ್ಟು ಸಸಿಗಳನ್ನು ಬೆಳೆಸಲು ಬದ್ಧ. ಸಾರ್ವಜನಿಕರು ಸಹಕಾರ ನೀಡಿದಲ್ಲಿ ಸಮಾಜಮುಖಿಯಾಗಿದ್ದುಕೊಂಡು ಹೆಚ್ಚು ಗಿಡ, ಮರಗಳನ್ನು ಬೆಳೆಸಲು ಸಿದ್ಧ ಎಂದು ಸಾಮಾಜಿಕ ವಲಯ ಅರಣ್ಯಾಧಿಕಾರಿ ಮೇಘನಾ ತಿಳಿಸಿದರು.
ಸಿಬ್ಬಂದಿ, ಸುತ್ತಮುತ್ತಲಿನ ಗ್ರಾಮಸ್ಥರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.