
ತುಮಕೂರು: ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡಿಸಿಕೊಂಡು ಕೂಲಿ ಕೊಡದೆ ಪರಾರಿಯಾದ ಗಾರ್ಮೆಂಟ್ಸ್ ಮಾಲೀಕರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಕಾರ್ಮಿಕರು ಜನವಾದಿ ಮಹಿಳಾ ಸಂಘಟನೆ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿದರು.
‘ಕ್ಯಾತ್ಸಂದ್ರದ ಆರ್.ವಿ.ಲೈಫ್ ಸ್ಟೈಲ್ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡಿದ ಕಾರ್ಮಿಕರಿಗೆ 3-4 ತಿಂಗಳಿನಿಂದ ಕೂಲಿ ನೀಡಿಲ್ಲ. ಅವರು ನೀಡಿದ್ದ ಚೆಕ್ ಬೌನ್ಸ್ ಆಗಿದೆ. ಈಗ ಮಾಲೀಕರು ಕಾರ್ಖಾನೆ ಮುಚ್ಚಿಕೊಂಡು ಪರಾರಿಯಾಗಿದ್ದಾರೆ. 25–30 ಮಹಿಳಾ ಕಾರ್ಮಿಕರಿಗೆ ವೇತನ ಕೊಟ್ಟಿಲ್ಲ’ ಎಂದು ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಸಂಚಾಲಕಿ ಟಿ.ಆರ್.ಕಲ್ಪನಾ ಹೇಳಿದರು.
ಸುಮಾರು 9 ತಿಂಗಳು ಕಾಲ ಕ್ಯಾತ್ಸಂದ್ರ, ಬಡ್ಡಿಹಳ್ಳಿ ಭಾಗದಲ್ಲಿ ಉತ್ಪಾದನಾ ಚಟುವಟಿಕೆ ನಡೆಸಿದ್ದರು. ಭಾನುವಾರ ಸಹ ರಜೆ ನೀಡದೆ ಕೆಲಸ ಮಾಡಿಸಿಕೊಂಡಿದ್ದರು. ಇದಕ್ಕೆ ನೀಡಬೇಕಾದ ವೇತನ ಸಹ ನೀಡಿಲ್ಲ ಎಂದರು.
ಕಾರ್ಮಿಕರಿಗೆ ಬರಬೇಕಾದ ಕೂಲಿ ಕೊಡಿಸಿ, ಅವರ ಬದುಕಿಗೆ ನೆರವಾಗಬೇಕು ಎಂದು ಒತ್ತಾಯಿಸಿ ಕಾರ್ಮಿಕ ಅಧಿಕಾರಿ, ಡಿವೈಎಸ್ಪಿ, ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಸಿಐಟಿಯು ಜಿಲ್ಲಾ ಕಾರ್ಯಕಾರಿ ಮಂಡಳಿಯ ಸದಸ್ಯ ಸುಜಿತ್ ನಾಯಕ ಇತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.