
ಗುಬ್ಬಿ: ರೈತರು ತಂತ್ರಜ್ಞಾನ ಬಳಸಿಕೊಂಡು ಕೃಷಿಯನ್ನು ಉನ್ನತೀಕರಣಗೊಳಿಸಿಕೊಂಡಲ್ಲಿ ಸಾಕಷ್ಟು ಅನುಕೂಲವಾಗುವುದು. ಪ್ರಸ್ತುತ ತಂತ್ರಜ್ಞಾನದ ಅಳವಡಿಕೆ ಅನಿವಾರ್ಯವಾಗಿದೆ ಎಂದು ಸಹಾಯಕ ತೋಟಗಾರಿಕೆ ಅಧಿಕಾರಿ ಜಗದೀಶ್ ಪಾಟೀಲ್ ತಿಳಿಸಿದರು.
ತಾಲ್ಲೂಕಿನ ಸಿ.ಎಸ್. ಪುರ ಹೋಬಳಿ ಸಿ. ಕೊಡಗೀಹಳ್ಳಿಯಲ್ಲಿ ಸೋಮವಾರ ತೆಂಗಿನ ತೋಟಕ್ಕೆ ಡ್ರೋನ್ ಮೂಲಕ ಬೇವಿನ ಎಣ್ಣೆ ಸಿಂಪಡಣೆ ಪ್ರಾತ್ಯಕ್ಷಿಕೆಗೆ ಚಾಲನೆ ನೀಡಿ ಮಾತನಾಡಿದರು.
ತೆಂಗಿನ ಮರಗಳಿಗೆ ನುಸಿ ಪೀಡೆ, ಕಪ್ಪುತಲೆ ಹುಳ, ಗರಿ ತಿನ್ನುವ ಹುಳುಗಳ ಬಾಧೆ ಹೆಚ್ಚುತ್ತಿದೆ. ರೋಗ ನಿಯಂತ್ರಣಕ್ಕಾಗಿ ರೈತರು ಔಷಧಿ ಸಿಂಪಡಣೆ ಮಾಡಲು ಪ್ರಯಾಸ ಪಡುವಂತೆ ಆಗುತ್ತಿತ್ತು. ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಡ್ರೋನ್ ಮೂಲಕ ಬೇವಿನ ಎಣ್ಣೆ ಸಿಂಪಡಣೆಗೆ ಅನುವು ಮಾಡಿಕೊಡಲಾಗುತ್ತಿದೆ ಎಂದರು.
ರೈತ ಕೃಷ್ಣಪ್ಪ ಮಾತನಾಡಿ, ಡ್ರೋನ್ ಮೂಲಕ ಬೇವಿನ ಎಣ್ಣೆ ಸಿಂಪಡಿಸುವುದರಿಂದ ರೋಗಭಾದೆ ನಿಯಂತ್ರಣಗೊಂಡು ಇಳುವರಿ ಉತ್ತಮಗೊಳ್ಳುವುದು ಎಂಬ ನಿರೀಕ್ಷೆಯಲ್ಲಿ ಇದ್ದೇವೆ ಎಂದು ಹೇಳಿದರು.
ಗ್ರಾಮಸ್ಥ ಕೆಂಪರಾಜು ಮಾತನಾಡಿದರು.
ಐದು ಎಕರೆ ತೋಟಕ್ಕೆ ಬೇವಿನ ಎಣ್ಣೆ ಸಿಂಪಡಿಸಲಾಯಿತು. ಗ್ರಾಮದ ಹಾಗೂ ಸುತ್ತಲಿನ ರೈತರು ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.