
ತುರುವೇಕೆರೆ: ಗ್ರಾಮೀಣ ಪ್ರದೇಶದ ಪ್ರತಿಭಾವಂತ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಹಳ್ಳಿಕಾರ್ ಮಠದಿಂದ ವಿದ್ಯಾರ್ಥಿ ದತ್ತು ನಿಧಿ ಸ್ಥಾಪಿಸಿ ಎಂದು ಕೌಶಲಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಸಲಹೆ ನೀಡಿದರು.
ತಾಲ್ಲೂಕಿನ ಮಾಯಸಂದ್ರ ಹೋಬಳಿ ಶೆಟ್ಟಿಗೊಂಡನಹಳ್ಳಿಯಲ್ಲಿರುವ ಹಳ್ಳಿಕಾರ್ ಮಠದ ಮೂರನೇ ವರ್ಷದ ವಾರ್ಷಿಕೋತ್ಸವ ಹಾಗೂ ಮಠದ ಬಾಲಕೃಷ್ಣಾನಂದ ಸ್ವಾಮೀಜಿ ಮೂರನೇ ವರ್ಷದ ದೀಕ್ಷಾ ಪಟ್ಟಾಭಿಷೇಕ ಉತ್ಸವದಲ್ಲಿ ಮಾತನಾಡಿದರು.
‘ಆಧುನಿಕ ಯುಗದಲ್ಲಿ ಯುವಕರು ಮಠಗಳಿಗೆ ಸುಳಿಯದಂತಹ ಪರಿಸ್ಥಿತಿ ಉಂಟಾಗುತ್ತಿದೆ. ಮಠದಿಂದ ಅನ್ನ, ಅಕ್ಷರ, ಅರಿವು ಜೊತಗೆ ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮಠದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ನೆರವು ನೀಡಬೇಕಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಕನಿಷ್ಠ ಧನಸಹಾಯ ಮಾಡಬೇಕಿದೆ. ಹಳ್ಳಿಕಾರ್ ಜನಾಂಗದವರು ಆರ್ಥಿಕವಾಗಿ ಸಬಲವಾಗಿದ್ದು ವಿದ್ಯಾರ್ಥಿ ದತ್ತು ನಿಧಿ ಸ್ಥಾಪಿಸಿ ₹25 ಲಕ್ಷ ಅಥವಾ ₹50 ಲಕ್ಷ ಇಟ್ಟು ಬಡ್ಡಿ ಹಣದಲ್ಲಿ ಇಟ್ಟು ಪ್ರತಿ ವರ್ಷ ಕನಿಷ್ಠ ಐದು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿ. ನಾನೇ ₹1 ಲಕ್ಷ ನೀಡುತ್ತೇನೆ’ ಎಂದು ಹೇಳಿದರು.
ಕುಣಿಗಲ್ ಆರೇಶಂಕರಮಠದ ಸಿದ್ದರಾಮಚೈತನ್ಯ ಸ್ವಾಮೀಜಿ ಮಾತನಾಡಿ, ಸಣ್ಣ ಸಮುದಾಯಗಳಲ್ಲಿ ಸಂಘಟನೆ ಅಗತ್ಯ. ಹಳ್ಳಿಕಾರ್ ಸಮುದಾಯ ಆರ್ಥಿಕವಾಗಿ ಸಬಲವಾಗಿದೆ. ಹಳ್ಳಿಕಾರ್ ಮಠ ಗುರುಪೀಠ ಮಾಡಿ ಮೂರೇ ವರ್ಷದಲ್ಲಿ ಧಾರ್ಮಿಕ ನೆಲೆ ಬೀಡು ಮಾಡಲಾಗಿದೆ ಎಂದರು.
ಗುಬ್ಬಿ ಬಸವಮಠದ ಬಸವಬೃಂಗೇಶ್ವರ ಸ್ವಾಮೀಜಿ, ಹಳ್ಳಿಕಾರ್ ಮಠದ ಬಾಲಕೃಷ್ಣಾನಂದ ಸ್ವಾಮೀಜಿ, ಹಳ್ಳಿಕಾರ್ ಮಠ ಟ್ರಸ್ಟ್ ಅಧ್ಯಕ್ಷ ನಾಗಯ್ಯ, ಶಾಸಕ ಎಂ.ಟಿ.ಕೃಷ್ಣಪ್ಪ, ಚೇತನ್ ಕೃಷ್ಣ, ನಾರಾಣಪ್ಪ, ಪಟೇಲ್ ಪಾಂಡು, ಗಂಗಾಧರ್, ವಿಜಯವಿಶ್ವನಾಥ್, ಲೋಕೇಶ್, ಪುಟ್ಟರಂಗಪ್ಪ, ಮಲ್ಲೂರು ಕುಮಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.