ಗುಬ್ಬಿ: ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಶೀಘ್ರವೇ ಕೆಲಸ ಆರಂಭಿಸಲಾಗುವುದು ಎಂದು ಉಪಮುಖ್ಯಮಂತ್ರಿಯೂ ಆದ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.
ತಾಲ್ಲೂಕಿನ ಸುಂಕಾಪುರ ಬಳಿ ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಸ್ಥಳಕ್ಕೆ ಶುಕ್ರವಾರ ಭೇಟಿನೀಡಿ ಪರಿಶೀಲಿಸಿದ ನಂತರ ಮಾತನಾಡಿದರು.
‘ಏನೆಲ್ಲ ಕಾಮಗಾರಿ ಆಗಿದೆ ಎಂಬುದನ್ನು ಪರಿಶೀಲಿಸಿದ್ದೇನೆ. ಬೆಂಗಳೂರಿನಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಿ ಚರ್ಚಿಸಿದ ನಂತರ ಕೆಲಸ ಮುಂದುವರಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು. ತುಮಕೂರು ಭಾಗದ ರೈತರಿಗೆ ಅನ್ಯಾಯ ಮಾಡಿ ಕುಣಿಗಲ್ಗೆ ನೀರು ತೆಗೆದುಕೊಂಡು ಹೋಗುವುದಿಲ್ಲ. ಯಾರಿಗೂ ಅನ್ಯಾಯ ಆಗದಂತೆ ನೋಡಿಕೊಳ್ಳಲಾಗುವುದು. ಎಲ್ಲ ಭಾಗದ ರೈತರಿಗೂ ನ್ಯಾಯ ಒದಗಿಸಲಾಗುವುದು. ಪಾರದರ್ಶಕವಾಗಿ ನೀರು ಹಂಚಿಕೆ ಮಾಡಲಾಗುವುದು’ ಎಂದು ಭರವಸೆ ನೀಡಿದರು.
‘ಕಾಮಗಾರಿ ಸ್ಥಳವನ್ನು ಪರಿಶೀಲನೆ ಮಾಡಿದ್ದೇನೆ. ಯಾವುದೇ ಕಾರಣಕ್ಕೂ ನೀರನ್ನು ಕಾಲುವೆಗಿಂತ ಕೆಳಗಿನ ಹಂತದಲ್ಲಿ ಸಾಗಿಸುವುದಿಲ್ಲ. ಒಂದೇ ಎತ್ತರ ಕಾಯ್ದುಕೊಳ್ಳಲಾಗುವುದು. ಸ್ಕಾಡಾ ಹಾಕಿ ನೀರಿನ ಹರಿವು ಪರಿಶೀಲನೆ ಮಾಡಬಹುದು’ ಎಂದರು.
ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಯೋಜನಾ ವೆಚ್ಚ ₹600 ಕೋಟಿಯಿಂದ ₹1 ಸಾವಿರ ಕೋಟಿಗೆ ಏರಿಕೆಯಾಗಿದೆ. ಕಾಮಗಾರಿ ಮತ್ತಷ್ಟು ತಡಮಾಡಿದರೆ ಯೋಜನಾ ವೆಚ್ಚ ಏರಿಕೆಯಾಗುತ್ತಾ ಹೋಗುತ್ತದೆ. ಪೈಪ್ಲೈನ್ ಹಾಗೂ ಇತರ ಕಾಮಗಾರಿಗೆ ₹400 ಕೋಟಿ ವೆಚ್ಚ ಮಾಡಲಾಗಿದೆ. ಈಗ ಯೋಜನೆ ಬದಲಿಸಲು ಸಾಧ್ಯವಿಲ್ಲ. ಕೆಲಸ ಆರಂಭಿಸಿ ಪೂರ್ಣಗೊಳಿಸಬೇಕಿದೆ. ಒಮ್ಮೆ ಕೆಲಸ ಆರಂಭವಾದರೆ ನಾಲ್ಕೈದು ತಿಂಗಳಲ್ಲಿ ಮುಗಿಯಲಿದೆ ಎಂದು ಹೇಳಿದರು.
ನೀರಿನ ಕೊರತೆಯಾದ ಸಮಯದಲ್ಲಿ ಎಲ್ಲ ಭಾಗಕ್ಕೂ ಸಮಾನವಾಗಿ ಹಂಚಿಕೆ ಮಾಡಲಾಗುವುದು. ಕುಣಿಗಲ್ ಭಾಗಕ್ಕೆ ನೀರು ಹರಿಸಿಕೊಂಡು ಉಳಿದೆಡೆ ಕೊರತೆಯಾಗುವಂತೆ ಮಾಡುವುದಿಲ್ಲ. ಹೆಚ್ಚುವರಿ ನೀರು ಇದ್ದ ಸಮಯದಲ್ಲಿ ಹೆಚ್ಚುವರಿಯಾಗಿ ಹರಿಸಲಾಗುತ್ತದೆ. ತಮಿಳುನಾಡಿಗೆ 177 ಟಿಎಂಸಿ ಅಡಿ ನೀರು ಬಿಡಬೇಕಿದ್ದು, ಈಗಾಗಲೇ 220 ಟಿಎಂಸಿ ಅಡಿ ಹರಿದು ಹೋಗಿದೆ. ಈ ವರ್ಷ ಕಾವೇರಿ ಕೊಳ್ಳದ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದ್ದು, ಇನ್ನೂ ಮಳೆಯಾಗಲಿದೆ. ಮುಂದಿನ ದಿನಗಳಲ್ಲಿ 200 ಟಿಎಂಸಿ ಅಡಿ ನೀರು ಹರಿದು ಸಮುದ್ರ ಸೇರಲಿದೆ. ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ನಿರ್ಮಾಣ ಮಾಡಿದರೆ ವ್ಯರ್ಥವಾಗಿ ಸಮುದ್ರ ಸೇರುವ ನೀರು ಬಳಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ವಿವರಿಸಿದರು.
ತಮಿಳುನಾಡು, ಮಹಾರಾಷ್ಟ್ರ ಜತೆ ನೀರಿಗಾಗಿ ಜಗಳವಾಡಿದಂತೆ ನಾವು ಕಿತ್ತಾಡುವುದು ಬೇಡ. ಎರಡು ದಶಕಗಳಿಂದ ಕುಣಿಗಲ್ ಭಾಗಕ್ಕೆ ನೀರು ಕೊಡದೆ ಅನ್ಯಾಯ ಮಾಡಲಾಗಿದೆ. ರಾಜಕಾರಣ ಮಾಡುವುದು ಬಿಟ್ಟು ಅಭಿವೃದ್ಧಿ ಕಡೆಗೆ ಬಿಜೆಪಿ, ಜೆಡಿಎಸ್ ಶಾಸಕರು, ಹೋರಾಟಗಾರರು ಗಮನ ಹರಿಸಬೇಕು ಎಂದು ಸಲಹೆ ಮಾಡಿದರು.
ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಶಾಸಕ ಎಸ್.ಆರ್.ಶ್ರೀನಿವಾಸ್, ಜಲಸಂಪನ್ಮೂಲ ಸಚಿವರ ತಾಂತ್ರಿಕ ಸಲಹೆಗಾರ ಜೈಪ್ರಕಾಶ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಚಂದ್ರಶೇಖರ್ಗೌಡ ಇತರರು ಉಪಸ್ಥಿತರಿದ್ದರು.
‘ಶ್ರೀನಿವಾಸ್ ವಿರೋಧಿಸಲ್ಲ’
ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ನಿರ್ಮಿಸಿ ಕುಣಿಗಲ್ ಭಾಗಕ್ಕೆ ನೀರು ತೆಗೆದುಕೊಂಡು ಹೋಗುವುದಕ್ಕೆ ಗುಬ್ಬಿ ಶಾಸಕ ಎಚ್.ಆರ್.ಶ್ರೀನಿವಾಸ್ ವಿರೋಧ ವ್ಯಕ್ತಪಡಿಸುತ್ತಿಲ್ಲ ಎಂದು ಕುಣಿಗಲ್ ಶಾಸಕ ಎಚ್.ಡಿ.ರಂಗನಾಥ್ ಹೇಳಿದರು. ಯೋಜನೆ ಜಾರಿಗೆ ಶಾಸಕ ಶ್ರೀನಿವಾಸ್ ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ ‘ಶ್ರೀನಿವಾಸ್ ಟಿ.ಬಿ.ಜಯಚಂದ್ರ ಅವರನ್ನು ಜತೆಯಲ್ಲೇ ಕರೆತಂದಿದ್ದೇವೆ. ವಿರೋಧ ಮಾಡುವುದಿದ್ದರೆ ಶ್ರೀನಿವಾಸ್ ಏಕೆ ಬರುತ್ತಿದ್ದರು? ಯೋಜನೆ ಜಾರಿಗೆ ಅವರ ಸಹಮತವಿದೆ’ ಎಂದರು. ಶ್ರೀನಿವಾಸ್ ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.